ADVERTISEMENT

Covid-19 Vaccine Update | ಕೋತಿಗಳ ಮೇಲೆ ಆಕ್ಸ್‌ಫರ್ಡ್‌ ಲಸಿಕೆ ಯಶಸ್ವಿ ಪ್ರಯೋಗ

ಏಜೆನ್ಸೀಸ್
Published 31 ಜುಲೈ 2020, 16:35 IST
Last Updated 31 ಜುಲೈ 2020, 16:35 IST
   

ಆಸ್ಟ್ರಾಜೆನೆಕಾ ಕಂಪನಿಯ ಸಹಯೋಗದಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಕೋತಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಕೋತಿಗಳಲ್ಲಿ ಈ ಲಸಿಕೆಯು ಕೋರೋನಾ ವೈರಸ್‌ ಸೋಂಕನ್ನು ಯಶಸ್ವಿಯಾಗಿ ತಡೆದಿದೆ ಎಂದು ನೇಚರ್ ಜರ್ನಲ್ ನಿಯತಕಾಲಿಕ ವರದಿ ಮಾಡಿದೆ.

ಬ್ರಿಟನ್‌ನಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯೂ ಇದೇ ಮಾದರಿಯ ಫಲಿತಾಂಶಗಳನ್ನು ನೀಡಿದೆ ಎಂದು ನಿಯತಕಾಲಿಕೆಯ ಮತ್ತೊಂದು ಸಂಶೋಧನಾ ವರದಿ ಪ್ರತಿಪಾದಿಸಿದೆ.

ಪ್ರಾಣಿಗಳ ಮೇಲೆ ನಡೆದ ಎರಡೂ ಲಸಿಕೆಗಳ ಪ್ರಯೋಗದ ಬಗ್ಗೆ ನಿಯತಕಾಲಿಕೆಯಲ್ಲಿ ಪ್ರತ್ಯೇಕ ಲೇಖನಗಳು ಪ್ರಕಟವಾಗಿವೆ. ಎರಡೂ ಲಸಿಕೆಗಳನ್ನು ಇದೀಗ ಮನುಷ್ಯರ ಮೇಲೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು ಎಂದು ಲೇಖನ ಉಲ್ಲೇಖಿಸಿದೆ.

ADVERTISEMENT

ಆಕ್ಸ್‌ಫರ್ಡ್‌ ವಿವಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು 3ನೇ ಹಂತದ ಪ್ರಯೋಗಕ್ಕೆ ಸಿದ್ಧವಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಪ್ರಯೋಗ ಇದೀಗ 1 ಮತ್ತು 2ನೇ ಹಂತದಲ್ಲಿದೆ. 3ನೇ ಹಂತದ ಪ್ರಯೋಗಕ್ಕೆ ಕೆಲ ತಿಂಗಳುಗಳು ಬೇಕಾಗಬಹುದು ಎಂದು ಹೇಳಲಾಗಿದೆ. ಈ ವರ್ಷಾಂತ್ಯಕ್ಕೆ ಸಾಧ್ಯವಾಗದಿದ್ದರೂ ಮುಂದಿನ ವರ್ಷದ ಆರಂಭದಲ್ಲಿ ಲಸಿಕೆಯು ಮಾರುಕಟ್ಟೆಗೆ ಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ರಷ್ಯಾದ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯ ಪ್ರಯೋಗಗಳು ಅಂತಿಮಹಂತ ತಲುಪಿದ್ದು ಆಗಸ್ಟ್‌ ತಿಂಗಳ ಅಂತ್ಯದ ವೇಳೆ ಔಷಧ ನಿಯಂತ್ರಕರ ಅನುಮತಿ ಸಿಗುವ ಸಾಧ್ಯತೆ ಇದೆ. ಈ ಲಸಿಕೆಯು ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ. 2ನೇ ಹಂತದ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ಮುಗಿದರೆ, 3ನೇ ಹಂತದ ಪರೀಕ್ಷೆಯ ಜೊತೆಜೊತೆಗೆ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಅವಕಾಶ ನೀಡುವ ಬಗ್ಗೆ ರಷ್ಯಾ ಸರ್ಕಾರದಲ್ಲಿ ಚಿಂತನೆ ನಡೆದಿದೆ.

ಭಾರತದ ಮೇಲೆ ಅವಲಂಬನೆ ಹೆಚ್ಚು

ಕೊರೊನಾ ವೈರಸ್ ಲಸಿಕೆಯನ್ನು ವಿಶ್ವದ ಜನಸಂಖ್ಯೆಯ ಬಹುಪಾಲು ಜನರಿಗೆ ತಲುಪಿಸಲು ಭಾರತದ ಔಷಧ ತಯಾರಕ ಕಂಪನಿಗಳ ಸಾಮರ್ಥ್ಯ ಅನುಕೂಲಕರ ಎಂದು ಸೋಂಕು ರೋಗಗಳ ಬಗ್ಗೆ ವಿಶ್ವವ್ಯಾಪಿ ಮಾನ್ಯತೆ ಪಡೆದಿರುವ ತಜ್ಞ ಡಾ.ಆಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫೌಸಿ ಅಮೆರಿಕದ ಅಲರ್ಜಿ ಮತ್ತು ಸೋಂಕು ರೋಗಗಳ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರೂ ಹೌದು.

'ಇದೀಗ ಸಂಶೋಧನಾ ಹಂತದಲ್ಲಿರುವ ಲಸಿಕೆ ಬಳಕೆಗೆ ಯೋಗ್ಯವೆಂದು ಸಾಬೀತಾದ ನಂತರ ಭಾರತದ ಔಷಧ ತಯಾರಿಕಾ ಕೈಗಾರಿಕೆಗಳ ಸಾಮರ್ಥ್ಯ ಜಗತ್ತಿಗೆ ಅತಿಮುಖ್ಯವಾಗುತ್ತದೆ' ಎಂದು ಅವರು ನುಡಿದರು.

'ಲಸಿಕೆಯು ಸಾರ್ವಜನಿಕ ಬಳಕೆಗೆ ಬಿಡುಗಡೆಯಾದರೆ ಅದನ್ನು ಮೊದಲು ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇಲೆ ನೀಡಲಾಗುವುದು' ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್ ತಿಳಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.