ADVERTISEMENT

ಶ್ರೀಲಂಕಾ: ಮಾಜಿ ಅಧ್ಯಕ್ಷ ಗೊಟಬಯ ಸಂಬಂಧಿ ಸೇರಿ 17 ಮಂದಿ ರಾಜ್ಯ ಸಚಿವರ ನೇಮಕ

ಪಿಟಿಐ
Published 8 ಸೆಪ್ಟೆಂಬರ್ 2022, 16:57 IST
Last Updated 8 ಸೆಪ್ಟೆಂಬರ್ 2022, 16:57 IST
   

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಸ್ಥಿರ ಸರ್ಕಾರ ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಮಾಜಿ ಅಧ್ಯಕ್ಷರಾದ ಗೊಟಬಯ ರಾಜಪಕ್ಸ ಸಂಬಂಧಿ ಸೇರಿದಂತೆ 17 ಮಂದಿಯನ್ನು ರಾಜ್ಯ ಸಚಿವರಾಗಿ ನೇಮಕ ಮಾಡಲಾಗಿದೆ.

ರಾಜ್ಯ ಸಚಿವರಾಗಿ ಆಯ್ಕೆಯಾದವರಲ್ಲಿ ಹೆಚ್ಚು ಮಂದಿ ಆಡಳಿತಾರೂಢ ಲಂಕಾ ಪೊದುಜನ ಪೆರಮುನ(ಎಸ್‌ಎಲ್‌ಪಿಪಿ) ಪಕ್ಷಕ್ಕೆ ಸೇರಿದವರು.

ಜುಲೈನಲ್ಲಿ ಸರ್ಕಾರ ರಚನೆ ವೇಳೆ ಹೊರಗುಳಿಯುವ ನಿರ್ಧಾರ ಮಾಡಿದ್ದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ(ಎಸ್‌ಎಲ್‌ಎಫ್‌ಪಿ)ಯಿಂದಲೂ ಕೆಲವರನ್ನು ನೇಮಕ ಮಾಡಲಾಗಿದೆ.

ADVERTISEMENT

ನೂತನ ಸಚಿವರು ಅಧ್ಯಕ್ಷರ ಕಾರ್ಯಾಲಯದಲ್ಲಿ ಅವರ ಎದುರೇ ಪ್ರಮಾಣ ಸ್ವೀಕರಿಸಿದರು ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

1948ರಲ್ಲಿ ಸ್ವಾತಂತ್ರ್ಯನಂತರದ ಅತ್ಯಂತ ಕೆಟ್ಟ ಆರ್ಥಿಕ ದುಸ್ಥಿತಿಗೆ ದ್ವೀಪ ರಾಷ್ಟ್ರ ಸಿಲುಕಿದೆ. ಪ್ರಮುಖವಾಗಿ ಅಗತ್ಯ ವಸ್ತುಗಳ ಖರೀದಿಗೆ ವಿದೇಶಿ ವಿನಿಮಯದ ಕೊರತೆಯಿಂದಾಗಿ 2.2 ಕೋಟಿ ಜನಸಂಖ್ಯೆ ಅಗತ್ಯ ವಸ್ತುಗಳಿಗೂ ಪರಿತಪಿಸುವಂತಾಗಿದೆ.

ಸಂಸದ ರಂಜಿತ್ ಸಿಯಂಬಲಪಿತಿಯ ಮತ್ತು ಶೆಹನ್ ಸೀಮಸಿಂಘೆ ಅವರು ಹಣಕಾಸು ಖಾತೆ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಗೊಟಬಯ ರಾಜಪಕ್ಸ ಸಂಬಂಧಿ ಶಶೀಂದ್ರೆ ರಾಜಪಕ್ಷ ನೀರಾವರಿ ಸಚಿವರಾಗಿ ಪದಗ್ರಹಣ ಮಾಡಿದರು.

ಕಳೆದ ತಿಂಗಳು ಸಂಸತ್ತಿನಲ್ಲಿ 2022 ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದಾಗ, 'ಈ ಸಂಸತ್ತಿನಲ್ಲಿ ಜನರನ್ನು ಪ್ರತಿನಿಧಿಸುವ ಎಲ್ಲಾ ಪಕ್ಷಗಳಿಗೆ ನಾನು ಸರ್ವಪಕ್ಷ ಸರ್ಕಾರಕ್ಕೆ ಸೇರಲು ಪುನರ್ ಆಹ್ವಾನ ನೀಡುತ್ತಿದ್ದೇನೆ. ಈ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮತ್ತು ಆದ್ದರಿಂದ ದೇಶದ ಅಗತ್ಯತೆಗಳಿಗೆ ಆದ್ಯತೆ ನೀಡಬೇಕಾಗಿದೆ’ಎಂದು ಅಧ್ಯಕ್ಷ ವಿಕ್ರಮಸಿಂಘೆ ಹೇಳಿದ್ದರು.

ಜುಲೈನಲ್ಲಿ ಆರ್ಥಿಕ ದುಸ್ಥಿತಿ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಗಳ ನಂತರ ಗೊಟಬಯ ರಾಜಪಕ್ಸೆ ಶ್ರೀಲಂಕಾದಿಂದ ಪಲಾಯನ ಮಾಡಿ, ರಾಜೀನಾಮೆ ಸಲ್ಲಿಸಿದ ನಂತರ, ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡರು.

ಈ ತಿಂಗಳ ಆರಂಭದಲ್ಲಿ, ಶ್ರೀಲಂಕಾವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್‌) 2.9 ಶತಕೋಟಿ ಡಾಲರ್ ನೆರವಿಗೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.