ನ್ಯೂಯಾರ್ಕ್: ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರೊಂದಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬುಧವಾರ ಮಾತುಕತೆ ನಡೆಸಿದರು. ಈ ವೇಳೆ ನಾಯಕರಿಬ್ಬರು ಅಫ್ಗಾನಿಸ್ತಾನದ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.
ಜೈಶಂಕರ್ ಸೋಮವಾರ ನ್ಯೂಯಾರ್ಕ್ಗೆ ಆಗಮಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಂತ್ರಜ್ಞಾನ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹದ ಕುರಿತಾದ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದರು.
ಈ ವೇಳೆ ಜೈಶಂಕರ್ ಅವರು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಸೇರಿದಂತೆ ಇತರೆ ದೇಶಗಳ ವಿದೇಶಾಂಗ ಸಚಿವರೊಂದಿಗೆ ಅಫ್ಗನ್ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ‘ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರೊಂದಿಗೆ ಮಾತುಕತೆ ನಡೆಸಿದೆ. ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ಸವಾಲುಗಳ ಬಗ್ಗೆ ನಾವು ಚರ್ಚಿಸಿದೆವು. ಭದ್ರತಾ ಬೆದರಿಕೆಗಳನ್ನು ಎದುರಿಸಲು, ನಿರಾಶ್ರಿತರನ್ನು ಬೆಂಬಲಿಸಲು ಮತ್ತು ಅಫ್ಗನ್ನರ ಮಾನವೀಯ ಸ್ಥಿತಿಯನ್ನು ಸುಧಾರಿಸಲು ಭಾರತ ಮತ್ತು ಬ್ರಿಟನ್ ಜಂಟಿಯಾಗಿ ಕೆಲಸ ಮಾಡಲಿದೆ’ ಎಂದರು.
ಭದ್ರತಾ ಮಂಡಳಿಯ ಶಾಂತಿಪಾಲನಾ ಸಭೆಯ ಬಳಿಕ ವರದಿಗಾರರ ಜತೆ ಮಾತನಾಡಿದ ಅವರು, ‘ಭಾರತವು ಅಫ್ಗಾನಿಸ್ತಾನದ ಬೆಳವಣಿಗೆಯ ಮೇಲೆ ನಿಗಾವಹಿಸಿದೆ. ಅಫ್ಗಾನಿಸ್ತಾನದ ಭಧ್ರತೆ ಮತ್ತು ಅಲ್ಲಿಂದ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತರುವುದರ ಮೇಲೆ ನಮ್ಮ ಗಮನವಿದೆ’ ಎಂದರು.
ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೊಂದಿಗೆ ಅಫ್ಗಾನಿಸ್ತಾನ ಪರಿಸ್ಥಿತಿ ಮತ್ತು ಕಾಬೂಲ್ನ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಮರುಸ್ಥಾಪಿಸುವ ಬಗ್ಗೆ ಚರ್ಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.