ADVERTISEMENT

ಇಸ್ರೇಲ್‌ ಪ್ರವಾಸಕ್ಕೆ ತೆರಳಿದ್ದ ಕೇರಳದ ರೈತ ನಾಪತ್ತೆ

ಪಿಟಿಐ
Published 21 ಫೆಬ್ರುವರಿ 2023, 6:46 IST
Last Updated 21 ಫೆಬ್ರುವರಿ 2023, 6:46 IST
   

ಜೆರುಸಲೆಂ: ಆಧುನಿಕ ಕೃಷಿ ತಂತ್ರಗಳನ್ನು ಅಧ್ಯಯನ ಮಾಡಲು ಕೇರಳದಿಂದ ಇಸ್ರೇಲ್‌ಗೆ ತೆರಳಿದ್ದ 48 ವರ್ಷದ ರೈತ ನಾಪತ್ತೆಯಾಗಿದ್ದು, ಇಸ್ರೇಲ್‌ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.

ಹೈಡ್ರೋಪೋನಿಕ್ಸ್ ಮತ್ತು ನಿಖರ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಕೇರಳ ಸರ್ಕಾರ 28 ಜನರನ್ನು ಇಸ್ರೇಲ್‌ಗೆ ಕಳುಹಿಸಿತ್ತು. ಈ ಪೈಕಿ ಕಣ್ಣೂರು ಜಿಲ್ಲೆಯ ಉಲಿಕ್ಕಲ ಪಂಚಾಯತ್‌ನ ರೈತ ಬಿಜು ಕುರಿಯನ್‌ ಫೆ.17ರಂದು ನಾಪತ್ತೆಯಾಗಿದ್ದಾರೆ.

ಇಸ್ರೇಲ್‌ನ ಕಾನೂನು ಜಾರಿ ಸಂಸ್ಥೆ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ ಅವರು ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕುರಿಯನ್‌ ವಿರುದ್ಧ ದೂರು ದಾಖಲು ಮಾಡಿದ್ದು, ಅವರು ಸಿಕ್ಕಿದ ನಂತರ ಗಡಿಪಾರು ಮಾಡಲಾಗುವುದು ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ. ಅಶೋಕ್ ನೇತೃತ್ವದ ನಿಯೋಗ ಇದೇ 11ರಂದು ಇಸ್ರೇಲ್‌ಗೆ ತೆರಳಿತ್ತು. ಕುರಿಯನ್ ಬಿಟ್ಟು ಉಳಿದವರ ತಂಡ ಭಾನುವಾರ ಇಸ್ರೇಲ್‌ನಿಂದ ನಿರ್ಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣ್ಣೂರಿನಲ್ಲಿರುವ ಕುರಿಯನ್‌ ಕುಟುಂಬಕ್ಕೂ ಕೂಡ ಅವರ ನಿಗೂಢ ನಾ‍ಪತ್ತೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.