ADVERTISEMENT

ಮಾಲ್ಡೀವ್ಸ್‌ನಲ್ಲಿ ಗೊಟಬಯ: ಖಾಸಗಿ ವಿಮಾನಕ್ಕಾಗಿ ಕಾಯುತ್ತಿರುವ ಶ್ರೀಲಂಕಾ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 4:48 IST
Last Updated 14 ಜುಲೈ 2022, 4:48 IST
   

ಕೊಲಂಬೊ: ಶ್ರೀಲಂಕಾ ಬಿಟ್ಟು ಮಾಲ್ಡೀವ್ಸ್‌ಗೆ ಪರಾರಿಯಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು, ಸಿಂಗಪುರಕ್ಕೆ ತೆರಳಲು ನಿಗದಿಯಾಗಿದ್ದ ವಿಮಾನವನ್ನು ಹತ್ತಿಲ್ಲ. ಭದ್ರತೆ ದೃಷ್ಟಿಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದು, ಖಾಸಗಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದ ಅವರು, ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರಾಗಿ ನೇಮಕ ಮಾಡಿ ದೇಶ ಬಿಟ್ಟು ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಪ್ರತಿಭಟನೆ ತೀವ್ರಗೊಂಡಿದೆ. ಹಾಗಾಗಿ, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ತಾವು ವಿದೇಶದಲ್ಲಿರುವ ಸಮಯದಲ್ಲಿ ಅಧ್ಯಕ್ಷರ ಕೆಲಸಗಳನ್ನು ನಿರ್ವಹಿಸಲು ಗೊಟಬಯ ರಾಜಪಕ್ಸ ಅವರು, ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಪ ಅಬ್ಯೆವರ್ದನ ಹೇಳಿದ್ದಾರೆ.

ರಾಜಪಕ್ಸ, ಅವರ ಪತ್ನಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಮಾಲ್ಡೀವ್ಸ್‌ನಿಂದ ಎಸ್‌ಕ್ಯು 437 ವಿಮಾನದ ಮೂಲಕ ಸಿಂಗಪುರಕ್ಕೆ ತೆರಳಬೇಕಿತ್ತು. ಆದರೆ, ಬುಧವಾರ ರಾತ್ರಿ ರಾಜಪಕ್ಸ ಮತ್ತು ಅವರ ಕುಟುಂಬ ಭದ್ರತಾ ದೃಷ್ಟಿಯಿಂದ ವಿಮಾನ ಹತ್ತಲಿಲ್ಲ ಎಂದು ಡೈಲಿ ಮಿರರ್ ವರದಿ ತಿಳಿಸಿದೆ.

ಶ್ರೀಲಂಕಾ ಅಧ್ಯಕ್ಷರಿಗೆಖಾಸಗಿ ವಿಮಾನ ವ್ಯವಸ್ಥೆ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ADVERTISEMENT

ಈ ಮಧ್ಯೆ, ಗೊಟಬಯ ರಾಜಪಕ್ಸ ಅವರುರಾಜೀನಾಮೆ ನೀಡಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.

2.2 ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾದಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಆಹಾರ, ಔಷಧಿ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಖರೀದಿಗೂ ವಿದೇಶಿ ಕರೆನ್ಸಿಕೊರತೆ ಎದುರಾಗಿದೆ. ದೇಶ ದಿವಾಳಿಯಾಗಿದೆ ಎಂದು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ವಾರದ ಹಿಂದೆ ಘೋಷಿಸಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.