ADVERTISEMENT

ಉಕ್ರೇನ್ ಮೇಲಿನ ಯುದ್ಧ ತಕ್ಷಣವೇ ನಿಲ್ಲಿಸಿ: ರಷ್ಯಾಗೆ ಭಾರತ ಕರೆ

ಪಿಟಿಐ
Published 23 ಸೆಪ್ಟೆಂಬರ್ 2022, 3:56 IST
Last Updated 23 ಸೆಪ್ಟೆಂಬರ್ 2022, 3:56 IST
   

ನವದೆಹಲಿ: ಉಕ್ರೇನ್‌ನಲ್ಲಿ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತವು ರಷ್ಯಾಗೆ ಕರೆ ನೀಡಿದೆ.

‘ಯುದ್ದವನ್ನು ತಕ್ಷಣವೇ ನಿಲ್ಲಿಸಲು ಮತ್ತು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸುವ ಅಗತ್ಯವನ್ನು ಭಾರತವುಪದೇ ಪದೇ ಒತ್ತಿ ಹೇಳಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೊಸ ಸೇನೆ ಸಜ್ಜುಗೊಳಿಸುವ ಆದೇಶ ಮತ್ತು ತನ್ನ ದೇಶದ ಪ್ರದೇಶವನ್ನು ರಕ್ಷಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಮಾಡಿದ ಘೋಷಣೆಯ ಕೆಲ ದಿನಗಳ ನಂತರ ಭಾರತ, ರಷ್ಯಾಗೆ ಈ ಕರೆ ನೀಡಿದೆ.

ADVERTISEMENT

ಕಳೆದ ವಾರ ಸಮರ್ಕಂಡ್‌ನಲ್ಲಿ ಪುಟಿನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧವನ್ನು ನಿಲ್ಲಿಸುವ ಅಗತ್ಯವನ್ನು ಪುನರುಚ್ಚರಿಸಿದ್ದಾರೆ ಎಂದು ಅವರು ಹೇಳಿದ್ದಾರೆ

‘ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದಂತೆ ಭಾರತದ ನಿಲುವು ಸಹ ಸ್ಪಷ್ಟ ಮತ್ತು ಸ್ಥಿರವಾಗಿದೆ’ಎಂದು ಪೂರ್ವ ಮತ್ತು ದಕ್ಷಿಣ ಉಕ್ರೇನ್‌ನ ರಷ್ಯಾದ ನಿಯಂತ್ರಿತ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಬಾಗ್ಚಿ ಉತ್ತರಿಸಿದರು.

‘ಇದು ಯುದ್ದದ ಯುಗವಲ್ಲ. ಪ್ರಜಾಪ್ರಭುತ್ವ, ರಾಜತಾಂತ್ರಿಕತೆ ಮತ್ತು ಮಾತುಕತೆಗಳು ಜಗತ್ತನ್ನು ಉಳಿಸುವ ವಿಷಯಗಳಾಗಿವೆ ಎಂದು ನಾವು ನಿಮ್ಮೊಂದಿಗೆ ಹಲವಾರು ಬಾರಿ ಫೋನ್‌ನಲ್ಲಿ ಮಾತನಾಡಿದ್ದೇವೆ’ ಎಂದು ಪುಟಿನ್‌ಗೆ ಮೋದಿ ತಿಳಿಸಿರುವುದಾಗಿ ಬಾಗ್ಚಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.