ಬೀಜಿಂಗ್: ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಲು ಭಾರತದ ಜತೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಯುತ್ತಿರುವ ಬೆನ್ನಲ್ಲೇ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಹೇಳಿಕೆ ನೀಡಿದ್ದಾರೆ. ಗಡಿ ಸಂಘರ್ಷದ ವಿಚಾರದಲ್ಲಿ ಭಾರತವೇ ತಪ್ಪೆಸಗಿದೆ ಎಂದು ಆರೋಪಿಸಿರುವ ಅವರು, ಭಾರತದ ಸೇನಾ ಸಿಬ್ಬಂದಿಯನ್ನು ಚೀನಾ ವಶದಲ್ಲಿಟ್ಟುಕೊಂಡಿಲ್ಲ ಎಂದೂ ಹೇಳಿದ್ದಾರೆ.
ಆದರೆ, ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದಲ್ಲಿನ ಘರ್ಷಣೆ ವೇಳೆ ವಶಕ್ಕೆ ಪಡೆದಿದ್ದ ಇಬ್ಬರು ಮೇಜರ್ಗಳು ಸೇರಿದಂತೆ 10 ಭಾರತೀಯ ಯೋಧರನ್ನು ಚೀನಾ ಬಿಡುಗಡೆ ಮಾಡಿದೆ ಎಂದು ಶುಕ್ರವಾರ ಬೆಳಿಗ್ಗೆಯಷ್ಟೇ ಪಿಟಿಐ ಸುದ್ದಿಸಂಸ್ಥೆ ಸೇರಿದಂತೆ ಕೆಲವು ಮಾಧ್ಯಮ ವರದಿ ಮಾಡಿದ್ದವು.
ಈ ಮಧ್ಯೆ, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಮೇಜರ್ ಜನರಲ್ಗಳ ನಡುವೆ ನಡೆಯುತ್ತಿದ್ದ ಮಾತುಕತೆ ಗುರುವಾರವೇ ಕೊನೆಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 6 ಗಂಟೆಗಳ ಕಾಲ ಈ ಮಾತುಕತೆ ನಡೆದಿತ್ತು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.