ವಾಷಿಂಗ್ಟನ್:ಕಾರ್ಯತಂತ್ರದ ಆಯಕಟ್ಟಿನ ಪ್ರದೇಶದಲ್ಲಿ ಚೀನಾ ಸೇನೆಯ ಉಪಸ್ಥಿತಿ ಹೆಚ್ಚುತ್ತಿರುವ ನಡುವೆ,ಭಾರತವು ಚೀನಾ ಜತೆಗೆ ಪರಸ್ಪರ ಸಂವೇದನೆ, ಗೌರವ ಮತ್ತು ಹಿತಾಸಕ್ತಿ ಮೇಲೆ ಕಟ್ಟಿದ ಸಂಬಂಧವನ್ನು ಬಯಸುತ್ತದೆ. ಇದಕ್ಕಾಗಿ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದುವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಬುಧವಾರ ಇಲ್ಲಿ ನಾಲ್ಕು ದಿನಗಳ ಭೇಟಿಯನ್ನು ಪೂರ್ಣಗೊಳಿಸಿದ ಅವರು ಭಾರತೀಯ ವರದಿಗಾರರೊಂದಿಗೆ ಮಾತನಾಡಿದರು.
ಯುದ್ಧಕ್ಕೆ ಕಾಲುಕೆರೆದು ನಿಲ್ಲುವಚೀನಾವನ್ನು ಭಾರತ ಮತ್ತು ಅಮೆರಿಕ ಯಾವ ರೀತಿ ನಿಭಾಯಿಸಲು ಯೋಜಿಸುತ್ತಿವೆ ಎಂದು ಕೇಳಿದ ಪ್ರಶ್ನೆಗೆ, ಉಭಯ ದೇಶಗಳು ಇಂಡೊ– ಪೆಸಿಫಿಕ್ ಅನ್ನು ಉತ್ತಮವಾಗಿಸುವ ಮತ್ತು ಬಲಪಡಿಸುವ ಸಮಾನ ಉದ್ದೇಶ ಹೊಂದಿವೆ ಎಂದು ಅವರು ಪ್ರತಿಪಾದಿಸಿದರು.
ಭಾರತ- ಅಮೆರಿಕ ಸಂಬಂಧ ಸಂಕುಚಿತವಾದುದಲ್ಲ:ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ಲಾಭಗಳಿಗೆ ಮಾತ್ರ ಮೀಸಲಾದ ಸಂಕುಚಿತ ಸಂಬಂಧ ಹಂಚಿಕೊಳ್ಳುವುದಿಲ್ಲ. ಪ್ರಪಂಚದ ಉಳಿದ ಭಾಗಗಳ ಮೇಲೆ ಪರಿಣಾಮ ಬೀರುವಂತಹ ಸಂಬಂಧ ನಮ್ಮದು. ಇಂಡೋ– ಪೆಸಿಫಿಕ್ ವಿಚಾರದಲ್ಲಿ ಉಭಯ ದೇಶಗಳ ಸಂಬಂಧ ಜಾಗತಿಕವಾಗಿ ಖಂಡಿತ ಪರಿಣಾಮ ಬೀರುವುದನ್ನು ಕಾಣಬಹುದು ಎಂದು ಎಸ್. ಜೈಶಂಕರ್ ಹೇಳಿದರು.
ಉಭಯ ದೇಶಗಳು ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ತುಂಬಾ ಅವಕಾಶಗಳು ಇವೆ. ಅಂತಹ ಸಾಧ್ಯತೆಗಳಿರುವ ಕ್ಷೇತ್ರಗಳನ್ನೂ ನಾವು ಗುರುತಿಸಿಕೊಂಡಿದ್ದೇವೆ ಎಂದು ಹೇಳಿದರು.
ಉಕ್ರೇನ್ ಬಿಕ್ಕಟ್ಟಿನಲ್ಲಿ ನಮ್ಮ ನಿಲುವು ಬದಲಾಗದು:ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಸಮರ್ಕಂಡ್ನಲ್ಲಿ ನಡೆದ ಮಾತುಕತೆ ವೇಳೆ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಅವರು ನೀಡಿದ ಹೇಳಿಕೆಯಲ್ಲಿಭಾರತದ ನಿಲುವು ಬದಲಾಗಿಲ್ಲ. ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸುವಂತೆ ಭಾರತ ಆರಂಭದಿಂದಲೂ ಒತ್ತಾಯಿಸುತ್ತಲೇ ಬಂದಿದೆ ಎಂದು ಎಸ್. ಜೈಶಂಕರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.