ADVERTISEMENT

ಉಗ್ರರಿಗೆ ಬೆಂಬಲ; ಭಾರತದಿಂದ ತಕ್ಕ ಉತ್ತರ: ಪಾಕ್‌ಗೆ ಸೇನಾ ಮುಖ್ಯಸ್ಥ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 18:29 IST
Last Updated 4 ಮೇ 2020, 18:29 IST
   

ನವದೆಹಲಿ: ‘ಪಾಕಿಸ್ತಾನ ಉಗ್ರ ಚಟುಟಿಕೆಗಳಿಗೆ ಉತ್ತೇಜನ ನೀಡುವುದನ್ನು ನಿಲ್ಲಿಸದಿದ್ದರೆ ಭಾರತದಿಂದ ತಕ್ಕ ಉತ್ತರ ಎದುರಿಸಬೇಕಾದಿತು’ ಎಂದು ಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವನೆ ಸೋಮವಾರ ಎಚ್ಚರಿಸಿದರು.

‘ಪಾಕಿಸ್ತಾನ ಈಗಲೂ ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರು ನುಸುಳುವುದಕ್ಕೆ ನೆರವಾಗುವ ಹಳೆಯ ಕಾರ್ಯಸೂಚಿಯನ್ನೇ ಪಾಲಿಸುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ಕದನವಿರಾಮ ಉಲ್ಲಂಘನೆ ಮತ್ತು ಉಗ್ರರ ಕೃತ್ಯಗಳಿಗೆ ಬೆಂಬಲ ನೀಡುವ ಪಾಕಿಸ್ತಾನದ ಕೃತ್ಯಗಳಿಗೆ ಭಾರತ ಸೂಕ್ತ ಉತ್ತರವನ್ನು ನೀಡಲಿದೆ ಎಂದರು.

ADVERTISEMENT

ಹಂದ್ವಾರ ಗುಂಡಿನ ಚಕಮಕಿ ಉಲ್ಲೇಖಿಸಿದ ಅವರು, ಹುತಾತ್ಮರಾದ ಐವರು ಯೋಧರ ಬಗ್ಗೆ ದೇಶ ಹೆಮ್ಮೆ ಪಡೆಲಿದೆ. ಗ್ರಾಮದಲ್ಲಿ ಜನರ ಜೀವ ರಕ್ಷಿಸಲು ತಮ್ಮ ಜೀವ ತೆತ್ತಿದ್ದಾರೆ. ಮುಖ್ಯವಾಗಿ ತಂಡದ ನೇತೃತ್ವ ವಹಿಸಿದ್ದ ಕರ್ನಲ್‌ ಅಶುತೋಷ್‌ ಶರ್ಮಾ ಅವರ ಸೇವೆ ಶ್ಲಾಘನೀಯವಾದುದು ಎಂದು ತಿಳಿಸಿದರು.

ಸದ್ಯ ಕಾಶ್ಮೀರ ವಲಯದಲ್ಲಿ ಶಾಂತಿ ಸ್ಥಾಪಿಸುವ ಪೂರ್ಣ ಹೊಣೆಗಾರಿಕೆ ಪಾಕಿಸ್ತಾನದ್ದೇ ಆಗಿದೆ. ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಸದ್ಯ, ಪಾಕಿಸ್ತಾನಕ್ಕೆ ಕೋವಿಡ್‌ ವಿರುದ್ಧ ಹೋರಾಡುವ ಆಸಕ್ತಿ ಇಲ್ಲ. ಇನ್ನು ಉಗ್ರರ ನುಸುಳುವಿಕೆಗೆ ಬೆಂಬಲಿಸುವ ಕ್ರಮವನ್ನೇ ಮುಂದುವರಿಸಿದೆ. ಈಚೆಗೆ ಸಾರ್ಕ್‌ ವಿಡಿಯೊ ಸಂವಾದಲ್ಲಿಯೂ ಪಾಕಿಸ್ತಾನ ಮತ್ತೆ ಮಾನವ ಹಕ್ಕು ಉಲ್ಲಂಘನೆ ಆರೋಪವನ್ನೇ ಪ್ರಸ್ತಾಪಿಸಿರುವುದು ಅದರ ಆದ್ಯತೆ ಪ್ರದರ್ಶನವೇ ಆಗಿದೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.