ADVERTISEMENT

ಭಾರತ ನದಿ ನೀರಿನ ದಿಕ್ಕು ಬದಲಿಸುವುದಾದರೆ ನಾವು ಅದನ್ನು ವಿರೋಧಿಸುವುದಿಲ್ಲ: ಪಾಕ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 11:36 IST
Last Updated 22 ಫೆಬ್ರುವರಿ 2019, 11:36 IST
   

ನವದೆಹಲಿ:ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿ ನೀರಿನ ಹರಿವಿಗೆ ತಡೆಯೊಡ್ಡುವ ಬಗ್ಗೆ ಭಾರತ ನಿರ್ಧಾರ ಕೈಗೊಳ್ಳಲಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ಭಾರತನದಿಗಳ ಹರಿವಿನ ದಿಶೆ ಬದಲಿಸಿದರೆ ನಾವು ಅದರ ಪರ ವಹಿಸುವುದಾಗಲೀ, ವಿರೋಧಿಸುವುದಾಗಲೀ ಮಾಡುವುದಿಲ್ಲ ಎಂದಿದೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ. 14ರಂದು ಭಯೋತ್ಪಾದನಾ ದಾಳಿ ನಡೆದ ನಂತರ ಭಾರತ, ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನ (ಎಂಎಫ್‍ಎನ್) ವನ್ನು ಹಿಂದಕ್ಕೆ ಪಡೆದಿತ್ತು.ಇದಾದ ಮೇಲೆ ಪಾಕಿಸ್ತಾನದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಭಾರತ ಶೇ.200ರಷ್ಟು ಹೆಚ್ಚಿಸಿತ್ತು.

ಭಾರತ ಪಾಕಿಸ್ತಾನಕ್ಕೆ ಹರಿಯುವನದಿ ನೀರಿಗೆ ತಡೆಯೊಡ್ಡಲಿದೆ ಎಂಬ ಸುದ್ದಿ ಬಗ್ಗೆ ಡಾನ್ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನದ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಖ್ವಾಜಾ ಶುಮಾಲಿ, ಪೂರ್ವ ನದಿಗಳ ನೀರಿನ ದಿಶೆಯನ್ನು ಭಾರತ ಬದಲಿಸಿ ಆ ನೀರನ್ನು ಅವರ ಜನರಿಗೆ ಕೊಟ್ಟರೂ ಅಥವಾ ಬೇರೆ ಉದ್ದೇಶಕ್ಕೆ ಬಳಸಿದರೂ ಭಾರತದ ಈ ನಿರ್ಧಾರದ ಬಗ್ಗೆ ಪರ ಅಥವಾ ವಿರೋಧ ಅಭಿಪ್ರಾಯ ವ್ಯಕ್ತ ಪಡಿಸುವುದಿಲ್ಲ. ಯಾಕೆಂದರೆ ಸಿಂಧು ನದಿ ನೀರು ಹಂಚಿಕೆ ಒಪ್ಪಂದದಲ್ಲಿಈ ರೀತಿಯ ನಿರ್ಧಾರಗಳಿಗೆ ಅವಕಾಶವಿದೆ.

ಸಿಂಧು ನದಿ ನೀರಿನ ಒಪ್ಪಂದವನ್ನು ಪರಿಗಣಿಸುವುದಾದರೆ ಭಾರತದ ನಿರ್ಧಾರದ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುವುದಿಲ್ಲ.
ಆದರೆ ಸಿಂಧು ನದಿಗೆ ಪಶ್ಚಿಮದಿಂದ ಸೇರುವನದಿಗಳಾದ (ಚಿನಾಬ್, ಸಿಂಧು ಮತ್ತು ಝೀಲಂ) ನೀರನ್ನುಬಳಸಿದರೆ ಅಥವಾ ನದಿಯ ಹರಿವಿನ ದಿಕ್ಕು ಬದಲಿಸಿದರೆ ನಾವು ಖಂಡಿತವಾಗಿಯೂ ಅದನ್ನು ವಿರೋಧಿಸುತ್ತೇವೆ.ಯಾಕೆಂದರೆ ಆ ನೀರನ್ನು ಬಳಸುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.