
ದುಬೈ: ‘ದೇಶದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸಂಭವಿಸಿದ ಸಾವು–ನೋವು ಹಾಗೂ ಹಾನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ವಿಚಾರದಲ್ಲಿ ಅವರನ್ನು ‘ಅಪರಾಧಿ’ ಎಂಬುದಾಗಿ ಪರಿಗಣಿಸಲಾಗುವುದು’ ಎಂದು ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ.
‘ಕೆಲದಿನಗಳಿಂದ ನಡೆಯುತ್ತಿರುವ ದೇಶ ವಿರೋಧಿ ಪ್ರತಿಭಟನೆಗಳು ಬೇರೆಯೇ ಸ್ವರೂಪದ್ದಾಗಿದ್ದು, ಇವುಗಳಲ್ಲಿ ಟ್ರಂಪ್ ಪಾತ್ರ ಇದೆ’ ಎಂದು ಖಮೇನಿ ಹೇಳಿದ್ದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
‘ದೇಶವನ್ನು ನಾವಾಗಿಯೇ ಯುದ್ಧಕ್ಕೆ ತಳ್ಳುವುದಿಲ್ಲ. ಆದರೆ, ದೇಶದ ವಿರುದ್ಧ ಸಂಚು ನಡೆಸಿದ ದೇಶೀಯ ಅಥವಾ ಅಂತರರಾಷ್ಟ್ರೀಯ ಅಪರಾಧಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ’ ಎಂದು ಖಮೇನಿ ಗುಡುಗಿದ್ದಾರೆ.
ಪ್ರತೀಕಾರಕ್ಕೆ ಕರೆ: ‘ಶಸ್ತ್ರಸಜ್ಜಿತ ಕಪಟಿಗಳನ್ನು ಕೊಲ್ಲಬೇಕು’ ಎಂದು ಇರಾನ್ನ ಪ್ರಮುಖ ಮುಸ್ಲಿಂ ಧಾರ್ಮಿಕ ಮುಖಂಡರಾದ ಅಯತೊಲ್ಲಾ ಅಹಮದ್ ಖತಾಮಿ ಕರೆ ನೀಡಿದ್ದಾರೆ ಎಂದು ಇರಾನ್ನ ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿದೆ.
ಖತಾಮಿ ಅವರು ತಮ್ಮ ಮೂಲಭೂತವಾದಿ ನಿಲುವುಗಳಿಂದ ಹೆಚ್ಚು ಖ್ಯಾತಿ ಹೊಂದಿದ್ದಾರೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೈನಿಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯಬೇಕು. ಅಮೆರಿಕನ್ನರು ಹಾಗೂ ಯಹೂದಿಗಳು ಶಾಂತಿ ಬಯಸುತ್ತಿಲ್ಲ’ ಎಂದು ಹೇಳಿದ್ದಾರೆ.
ದೇಶದಲ್ಲಿ ತಲೆದೋರಿರುವ ಉದ್ವಿಗ್ನತೆಯನ್ನು ಕೊನೆಗಾಣಿಸಲು ಇರಾನ್ ಹಾಗೂ ಅಮೆರಿಕ ಯತ್ನಿಸುತ್ತಿರುವ ಸಂದರ್ಭದಲ್ಲಿಯೇ ಖತಾಮಿ ಈ ಹೇಳಿಕೆ ನೀಡಿದ್ದಾರೆ.
ಹೋರಾಟ ಮುಂದುವರಿಸಲು ಕರೆ: ‘ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಮುಂದುವರಿಸಬೇಕು’ ಎಂದು ದೇಶದಿಂದ ಗಡಿಪಾರುಗೊಂಡಿರುವ ರಾಜ ರೆಜಾ ಪಹ್ಲವಿ ಕರೆ ನೀಡಿದ್ದಾರೆ.
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅವರು ತಮ್ಮ ಮಾತಿನ ಮೇಲೆ ನಿಲ್ಲುತ್ತಾರೆ. ಏನೇ ಆದರೂ, ಇರಾನಿಯನ್ನರು ತಮ್ಮ ಹೋರಾಟವನ್ನು ಮುಂದುವರಿಸಬೇಕು’ ಎಂದು ವಾಷಿಂಗ್ಟನ್ನಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
1979ರಲ್ಲಿ ಇರಾನ್ನಲ್ಲಿ ಇಸ್ಲಾಮಿಕ್ ಕ್ರಾಂತಿಯ ಬಳಿಕ ರೆಜಾ ಪಹ್ಲವಿ ದೇಶ ತೊರೆದು, ಅಮೆರಿಕದಲ್ಲಿ ನೆಲಸಿದ್ದಾರೆ.
ಇರಾನ್ನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಮೆರಿಕದ ಉದ್ದೇಶ. ಆ ಮೂಲಕ ದೇಶದ ಸೇನೆ ರಾಜಕೀಯ ಹಾಗೂ ಆರ್ಥಿಕತೆ ಮೇಲೆ ಹತೋಟಿ ಸಾಧಿಸುವ ಸಂಚು ರೂಪಿಸಿದೆಅಯತೊಲ್ಲಾ ಅಲಿ ಖಮೇನಿ ಇರಾನ್ನ ಪರಮೋಚ್ಚ ನಾಯಕ
3 ಸಾವಿರ ಮಂದಿ ಸಾವು
ದುಬೈ (ರಾಯಿಟರ್ಸ್): ಇರಾನ್ನಲ್ಲಿ ನಡೆದ ಪ್ರತಿಭಟನೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಗುಂಪು ಎಚ್ಆರ್ಎಎನ್ಎ ಹೇಳಿದೆ. ದೇಶದಲ್ಲಿ ಪ್ರತಿಭಟನೆ ಹತ್ತಿಕ್ಕುವ ಸಂದರ್ಭದಲ್ಲಿ 2895 ಪ್ರತಿಭಟನಕಾರರು ಸೇರಿದಂತೆ 3090 ಮಂದಿ ಮೃತಪಟ್ಟಿದ್ದಾರೆ ಎಂದು ಎಚ್ಆರ್ಎಎನ್ಎ ವರದಿ ಮಾಡಿದೆ. ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ 350 ಮಸೀದಿಗಳು 126 ಪ್ರಾರ್ಥನ ಮಂದಿರ ಇತರೆ 20 ಪವಿತ್ರಸ್ಥಳಗಳು ನಾಶಗೊಂಡಿವೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರಾದ ಆಯತೊಲ್ಲಾ ಅಹಮದ್ ಖತಾಮಿ ಮಾಹಿತಿ ನೀಡಿದ್ದಾರೆ. ಇದಲ್ಲದೇ ದೇಶದಲ್ಲಿ 400 ಆಸ್ಪತ್ರೆಗಳು 106 ಆ್ಯಂಬುಲೆನ್ಸ್ 21 ಆಗ್ನಿಶಾಮಕ ವಾಹನ ಹಾಗೂ 50 ತುರ್ತು ವಾಹನಗಳಿಗೆ ಹಾನಿಯಾಗಿವೆ ಎಂದು ವಿವರ ನೀಡಿದ್ದಾರೆ.
ಸ್ವದೇಶಕ್ಕೆ ಮರಳಿದ ಭಾರತೀಯರು
ನವದೆಹಲಿ (ಪಿಟಿಐ): ಕಳೆದೊಂದು ವಾರದಿಂದ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಇರಾನ್ನಲ್ಲಿ ಸಿಲುಕಿದ್ದ ಹಲವಾರು ಭಾರತೀಯರು ವಿಮಾನಗಳಲ್ಲಿ ಶುಕ್ರವಾರ ರಾತ್ರಿ ನವದೆಹಲಿಗೆ ಬಂದಿಳಿದರು. ಎಷ್ಟು ಮಂದಿ ಭಾರತಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿಲ್ಲ. ‘ಇರಾನ್ನಲ್ಲಿ ನಮಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದು 12 ರಿಂದ 13 ಮಂದಿ ಜೊತೆಗೆ ಬಂದಿಳಿದ ಅಲಿ ನಕ್ವಿ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.