ADVERTISEMENT

ಇರಾನ್‌ ಪರಮೋಚ್ಚ ನಾಯಕ ಖಮೇನಿ ಹತ್ಯೆ: ಪ್ರತೀಕಾರದ ಶಪಥ

ಇರಾನ್‌ ದಾಳಿಗೆ ಇಸ್ರೇಲ್‌ನಲ್ಲಿ ಎಂಟು ಮಂದಿ ಸಾವು

ಪಿಟಿಐ
Published 1 ಮಾರ್ಚ್ 2026, 15:55 IST
Last Updated 1 ಮಾರ್ಚ್ 2026, 15:55 IST
ಅಯತೊಲ್ಲಾ ಅಲಿ ಖಮೇನಿ
ಅಯತೊಲ್ಲಾ ಅಲಿ ಖಮೇನಿ   

ಜೆರುಸಲೇಂ: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ.

‘ನಿಖರ ಹಾಗೂ ಬೃಹತ್‌ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನಾಯಕನನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಇರಾನ್‌ನಲ್ಲಿ ದಶಕಗಳ ಅಧ್ಯಾಯವೊಂದಕ್ಕೆ ತೆರೆ ಎಳೆಯಲಾಗಿದೆ’ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್‌) ಭಾನುವಾರ ಹೇಳಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಾಕ್‌ಪೋರ್‌, ಹಿರಿಯ ಭದ್ರತಾ ಸಲಹೆಗಾರ ಅಲಿ ಶಮ್‌ಖಾನಿ ಕೂಡ ಈ ದಾಳಿಯಲ್ಲಿ ಹತರಾಗಿದ್ದಾರೆ. ಇವರ ಸಾವನ್ನು ಇರಾನ್‌ನ ನ್ಯಾಯಾಂಗ ಇಲಾಖೆ ದೃಢಪಡಿಸಿದೆ.

ADVERTISEMENT

ಇನ್ನೊಂದೆಡೆ, ತನ್ನ ನಾಯಕ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ಗುಡುಗಿದೆ. ಪ್ರತಿದಾಳಿ ನಡೆಸಿದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಎಚ್ಚರಿಕೆಯನ್ನು ಲೆಕ್ಕಿಸದೇ, ಕೊಲ್ಲಿ ರಾಷ್ಟ್ರಗಳಲ್ಲಿನ ಅದರ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್‌ ಭಾರಿ ದಾಳಿ ನಡೆಸಿದೆ.

‘ಟೆಹರಾನ್‌ ಮೇಲೆ ಶನಿವಾರ ಇಸ್ರೇಲ್‌ ವಾಯುಪಡೆ ನಡೆಸಿದ ದಾಳಿಯಲ್ಲಿ ಖಮೇನಿಯನ್ನು ಹತ್ಯೆ ಮಾಡಲಾಗಿದೆ. ಟೆಹರಾನ್‌ನ ಹೃದಯಭಾಗದಲ್ಲಿರುವ ತನ್ನ ನಿವಾಸದಲ್ಲಿದ್ದ ವೇಳೆ, ನಿಖರ ಹಾಗೂ ದೊಡ್ಡ ಪ್ರಮಾಣದ ದಾಳಿ ನಡೆಸಲಾಯಿತು. ಇತರ ಹಿರಿಯ ಅಧಿಕಾರಿಗಳು ಈ ವೇಳೆ ಖಮೇನಿ ಜೊತೆಗಿದ್ದರು’ ಎಂದು ಐಡಿಎಫ್‌ ಹೇಳಿದೆ.

‘ಇರಾನ್‌ ಜನರ ದನಿಯನ್ನು ದಶಕಗಳಿಂದ ಹತ್ತಿಕ್ಕಲಾಗಿತ್ತು. ಇದಕ್ಕೆ ಖಮೇನಿಯೇ ನೇರ ಹೊಣೆಯಾಗಿದ್ದ’ ಎಂದೂ ಹೇಳಿದೆ.

‘ಇಸ್ರೇಲ್‌ ಅನ್ನು ನಾಶಪಡಿಸುವುದು ಖಮೇನಿ ಗುರಿಯಾಗಿತ್ತು. ಇದಕ್ಕಾಗಿ ಪಶ್ಚಿಮ ಏಷ್ಯಾದೆಲ್ಲೆಡೆ ತನ್ನ ಕಾರ್ಯಾಚರಣೆ ವಿಸ್ತರಿಸಿದ್ದ. ಲೆಬನಾನ್‌ನ ಶಿಯಾ ಗುಂಪು ಹಿಜ್ಬುಲ್ಲಾ ಮುಂಚೂಣಿಯಲ್ಲಿತ್ತು. ಇಸ್ರೇಲ್‌ ಮೇಲೆ ನಡೆದ ಉಗ್ರರ ದಾಳಿಗೆ ಖಮೇನಿಯೇ ನೇರ ಕಾರಣವಾಗಿದ್ದ. ಹೀಗಾಗಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹತರಾದ ಜನರ ರಕ್ತ ಆತನ ಕೈಗಳಿಗೆ ಮೆತ್ತಿಕೊಂಡಿತ್ತು’ ಎಂದು ಐಡಿಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮೊಹಮ್ಮದ್ ಪಾಕ್‌ಪೋರ್‌
ಅಲಿ ಶಮ್‌ಖಾನಿ

‘ಮಧ್ಯಂತರ ಅವಧಿ’ಗೆ ಅರಾಫಿ ನೇಮಕ 

ಟೆಹರಾನ್‌: ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ತನ್ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತರಾದ ಬೆನ್ನಲ್ಲೇ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ‘ಮಧ್ಯಂತರ ನಾಯಕತ್ವ ಸಮಿತಿ’ಯ ಸದಸ್ಯರನ್ನಾಗಿ ಅಯತೊಲ್ಲಾ ಅಲಿರೆಝಾ ಅರಾಫಿ ಅವರನ್ನು ಇರಾನ್‌ ಭಾನುವಾರ ನೇಮಿಸಿದೆ. ‘ದಿ ಎಕ್ಸ್‌ಪಿಡಿಯೆನ್ಸಿ ಡಿಸರ್ನ್‌ಮೆಂಟ್ ಕೌನ್ಸಿಲ್’ ಅರಾಫಿ ಅವರನ್ನು ಈ ಕೌನ್ಸಿಲ್‌ ಸದಸ್ಯರನ್ನಾಗಿ ನೇಮಕ ಮಾಡಿದೆ. ಇರಾನ್‌ ಅಧ್ಯಕ್ಷ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೂಡ ಈ ಕೌನ್ಸಿಲ್‌ನಲ್ಲಿ ಇರುವರು. ದೇಶದ ನೂತನ ನಾಯಕನನ್ನು ತ್ವರಿತವಾಗಿ ಆಯ್ಕೆ ಮಾಡಲಾಗುತ್ತಿದ್ದು ಅಲ್ಲಿಯವರೆಗೆ ದೇಶವನ್ನು ಈ ಕೌನ್ಸಿಲ್‌ ಮುನ್ನಡೆಸಲಿದೆ’ ಎಂದು ಕೌನ್ಸಿಲ್ ವಕ್ತಾರ ಮೊಹಸಿನ್ ದೆಹ್ನವಿ ತಿಳಿಸಿದ್ದಾರೆ.

ಸಿಐಎ ನೀಡಿದ್ದ ಮಾಹಿತಿ ಆಧರಿಸಿ ದಾಳಿ

ವಾಷಿಂಗ್ಟನ್‌: ಅಮೆರಿಕದ ಸಿಐಎ ಗುಪ್ತಚರ ಇಲಾಖೆಯು ಅಯತೊಲ್ಲಾ ಖಮೇನಿ ಅವರ ಚಲನವಲನ ಕುರಿತು ನೀಡಿದ ಸುಳಿವು ನಿಖರವಾದ ದಾಳಿ ನಡೆಸಿ ಅವರನ್ನು ಹತ್ಯೆ ಮಾಡುವುದಕ್ಕೆ ಅಮೆರಿಕ ಹಾಗೂ ಇಸ್ರೇಲ್‌ಗೆ ನೆರವಾಯಿತು ಎಂದು ನ್ಯೂಯಾರ್ಕ್‌ ಟೈಮ್ಸ್‌ ಭಾನುವಾರ ವರದಿ ಮಾಡಿದೆ. ‘ಕಳೆದ ಹಲವು ತಿಂಗಳಿನಿಂದ ಖಮೇನಿ ಅವರ ಮೇಲೆ ಸಿಐಎ ಕಣ್ಣಿಟ್ಟಿತ್ತು. ಟೆಹರಾನ್‌ ಹೃದಯಭಾಗದಲ್ಲಿರುವ ತಮ್ಮ ನಿವಾಸದಲ್ಲಿ ಖಮೇನಿ ಇರಾನ್‌ನ ಉನ್ನತ ಅಧಿಕಾರಿಗಳೊಂದಿಗೆ ಶನಿವಾರ ಬೆಳಿಗ್ಗೆ ಸಭೆ ನಡೆಸುವ ಬಗ್ಗೆ ಸಿಐಎ ಮಾಹಿತಿ ಸಂಗ್ರಹಿಸಿ ರವಾನಿಸಿತ್ತು. ಇದರ ಆಧಾರದಲ್ಲಿಯೇ ಅಮೆರಿಕ ಹಾಗೂ ಇಸ್ರೇಲ್‌ ನಿಖರ ದಾಳಿ ನಡೆಸಿದವು’ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ. ‘ರಾತ್ರಿ ಹೊತ್ತಿನಲ್ಲಿ ಇರಾನ್‌ ಮೇಲೆ ದಾಳಿ ನಡೆಸುವುದಕ್ಕೆ ಅಮೆರಿಕ ಹಾಗೂ ಇಸ್ರೇಲ್‌ ಯೋಜಿಸಿದ್ದವು. ಆದರೆ ಸಿಐಎ ಇಂಟೆಲಿಜೆನ್ಸ್‌ ನೀಡಿದ ಮಾಹಿತಿ ಪರಿಗಣಿಸಿ ಅವು ತಮ್ಮ ಯೋಜನೆ ಬದಲಿಸಿದವು’ ಎಂದೂ ಪತ್ರಿಕೆ ವರದಿ ಮಾಡಿದೆ.  ‘ಸಿಐಎ ಹಂಚಿಕೊಂಡಿದ್ದ ಮಾಹಿತಿಯನ್ನು ಅಮೆರಿಕವು ಇಸ್ರೇಲ್‌ಗೆ ನೀಡಿತು. ಇದನ್ನು ಆಧರಿಸಿ ಶನಿವಾರ ಬೆಳಿಗ್ಗೆ 6ಕ್ಕೆ (ಸ್ಥಳೀಯ ಕಾಲಮಾನ 4 ಗಂಟೆ) ಇಸ್ರೇಲ್‌ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಬೆಳಿಗ್ಗೆ 9.40ರ ಹೊತ್ತಿಗೆ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಿಂದ ದಾಳಿ ನಡೆಸಿ ಖಮೇನಿ ಹತ್ಯೆ ಮಾಡಿದವು’ ಎಂದೂ ವರದಿ ಮಾಡಿದೆ.

ಇದು ಮುಸ್ಲಿಮರ ವಿರುದ್ಧದ ಸಮರ: ಅಧ್ಯಕ್ಷ ಮಸೂದ್‌

‘ದೇಶದ ಪರಮೋಚ್ಚ ನಾಯಕ ಖಮೇನಿ ಹತ್ಯೆಯು ಮುಸ್ಲಿಮರ ವಿರುದ್ಧ ಯುದ್ಧ ಸಾರಿದಂತೆ’ ಎಂದು ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಹೇಳಿದ್ದಾರೆ. ‘ಈ ಐತಿಹಾಸಿಕ ಅಪರಾಧದ ಸೂತ್ರಧಾರ ಹಾಗೂ ದುಷ್ಕೃತ್ಯ ಎಸಗಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದು ತನ್ನ ನ್ಯಾಯಬದ್ಧ ಕರ್ತವ್ಯ ಎಂಬುದಾಗಿ ಇರಾನ್‌ ಪರಿಗಣಿಸುತ್ತದೆ’ ಎಂದು ಹೇಳಿದ್ದಾರೆ.

‘ಇಸ್ಲಾಮಿಕ್‌ ರಿಪಬ್ಲಿಕ್‌’ ಅಂತ್ಯ: ಪಹ್ಲವಿ ಅಯತೊಲ್ಲಾ ಖಮೇನಿ ಹತ್ಯೆಯನ್ನು ಇರಾನ್ (ಈ ಹಿಂದಿನ ಪರ್ಷಿಯಾ) ರಾಜರಾಗಿದ್ದ ಮೊಹಮ್ಮದ್ ರೆಝಾ ಪಹ್ಲವಿ ಪುತ್ರ ರೆಜಾ ಪಹ್ಲವಿ ಸ್ವಾಗತಿಸಿದ್ದಾರೆ. ‘ಖಮೇನಿ ಹತ್ಯೆಯೊಂದಿಗೆ ಇಸ್ಲಾಮಿಕ್ ರಿಪಬ್ಲಿಕ್‌ ಅಂತ್ಯವಾದಂತಾಗಿದೆ. ಖಮೇನಿ ಆಳ್ವಿಕೆಯ ದಿನಗಳು ಶೀಘ್ರವೇ ಇತಿಹಾಸ ಸೇರಲಿವೆ’ ಎಂದಿದ್ದಾರೆ.

ದೇಶಭ್ರಷ್ಟರಾಗಿ ಅಮೆರಿಕದಲ್ಲಿ ವಾಸಿಸುತ್ತಿರುವ ರೆಝಾ ‘ಅಲ್ಲಿನ ಪ್ರಸ್ತುತ ವ್ಯವಸ್ಥೆಯ ಭಾಗವಾಗಿರುವ ವ್ಯಕ್ತಿಯನ್ನೇ ಖಮೇನಿ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದಲ್ಲಿ ಅದು ಕಾನೂನುಬಾಹಿರ ಆಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

ವಿಶ್ವದಲ್ಲಿ ದಬ್ಬಾಳಿಕೆ ನಡೆಸುವವರು ಎಂದಿಗೂ ಮರೆಯಲಾರಂದತಹ ಪಾಠವನ್ನು ಇರಾನ್‌ನ ವೀರ ಯೋಧರು ಹಾಗೂ ಜನರು ಕಲಿಸಲಿದ್ದಾರೆ.
-ಅಲಿ ಲರಿಜಾನಿ. ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ ಮುಖ್ಯಸ್ಥ ಇರಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.