ADVERTISEMENT

ಲೆಬನಾನ್‌ಗೆ ನುಗ್ಗಿದ ಇಸ್ರೇಲ್‌ ಸೇನೆ: ಯುದ್ಧಕ್ಕೆ ಸನ್ನದ್ಧ ಎಂದ ಹಿಜ್ಬುಲ್ಲಾ

ಏಜೆನ್ಸೀಸ್
Published 3 ಮಾರ್ಚ್ 2026, 23:11 IST
Last Updated 3 ಮಾರ್ಚ್ 2026, 23:11 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರಕೃಪೆ: Gemini AI

ಬೈರೂತ್‌: ಹಿಜ್ಬುಲ್ಲಾ ಬಂಡುಕೋರರನ್ನು ಬಗ್ಗುಬಡಿಯಲು ವಾಯುದಾಳಿ ನಡೆಸುತ್ತಿದ್ದ ಇಸ್ರೇಲ್‌ ಸೇನೆಯು ಮಂಗಳವಾರ ಹೆಚ್ಚುವರಿ ಭೂ ಸೇನಾ ಪಡೆಗಳನ್ನು ಕಳುಹಿಸಿದೆ. ಅಲ್ಲದೇ, 80 ಗ್ರಾಮಗಳ ನಿವಾಸಿಗಳಿಗೆ ಖಾಲಿ ಮಾಡುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಇಸ್ರೇಲ್‌ ಜೊತೆಗೆ ಯುದ್ಧಕ್ಕೆ ಸಿದ್ಧ ಎಂದು ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರ ಗುಂಪು ಘೋಷಿಸಿದೆ.

ADVERTISEMENT

ಉತ್ತರ ಇಸ್ರೇಲ್‌ನ ನಗರಗಳನ್ನು ಗುರಿಯಾಗಿರಿಸಿಕೊಂಡು ಹಿಜ್ಬುಲ್ಲಾ ಬಂಡುಕೋರರು ಸೋಮವಾರ ರಾತ್ರಿಯಿಡೀ ಕ್ಷಿಪಣಿ ಹಾಗೂ ಡ್ರೋನ್‌ ಗಳನ್ನು ಹಾರಿಸಿದ್ದರು. ಪ್ರತಿಯಾಗಿ ಇಸ್ರೇಲ್‌ ವಾಯುದಾಳಿ ನಡೆಸಿದ್ದು, 52 ಮಂದಿ ಮೃತಪಟ್ಟಿದ್ದಾರೆ. ಬೈರೂತ್‌ ಸುತ್ತಮುತ್ತ ಮೃತಪಟ್ಟವರಲ್ಲಿ ಪ್ಯಾಲೆಸ್ಟೀನ್‌ ಬಂಡುಕೋರರು ಹಾಗೂ ಹಿಜ್ಬುಲ್ಲಾ ಗುಪ್ತಚರ ಅಧಿಕಾರಿಗಳು ಸೇರಿದ್ದಾರೆ. ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ.

‘ಮಂಗಳವಾರ ಬೆಳಿಗ್ಗೆ ಉತ್ತರ ಇಸ್ರೇಲ್‌ನತ್ತ ಎರಡು ರಾಕೆಟ್‌ ದಾಳಿ ನಡೆಸಿದ್ದೇವೆ’ ಎಂದು ಹಿಜ್ಬುಲ್ಲಾ ತಿಳಿಸಿದೆ. ಇಸ್ರೇಲ್‌ ರಾತ್ರಿಯಿಡೀ ನಡೆಸಿದ ವಾಯು ದಾಳಿಯಲ್ಲಿ ಹಿಜ್ಬುಲ್ಲಾದ ಟಿವಿ ಹಾಗೂ ರೇಡಿಯೊ ಸ್ಟೇಷನ್‌ಗಳ ಕಟ್ಟಡಗಳಿಗೆ ಹಾನಿಯಾಗಿದೆ. ಬೈರೂತ್‌ನ ದಕ್ಷಿಣ ಉಪನಗರದಲ್ಲಿ ಯಾವುದೇ ಮುನ್ಸೂಚನೆ ನೀಡದೇ, ಇಸ್ರೇಲ್‌ ಪಡೆಗಳು ಸರಣಿ ದಾಳಿ ನಡೆಸಿವೆ.

‘ಹಿಜ್ಬುಲ್ಲಾದ ಮುಖಂಡರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿತ್ತು’ ಎಂದು ಇಸ್ರೇಲ್‌ ಸೇನೆಯು ನಂತರ ಹೇಳಿಕೆ ನೀಡಿದೆ. 

ಮನೆ ತೊರೆಯಿರಿ: ಬೈರೂತ್‌ನ 80 ಗ್ರಾಮಗಳು ಹಾಗೂ ಸುತ್ತಲಿನ ಪಟ್ಟಣದ ನಿವಾಸಿಗಳು ಕೂಡಲೇ ಖಾಲಿ ಮಾಡಬೇಕು ಎಂದು ಇಸ್ರೇಲ್‌ ಸೇನೆಯ ಅರೇಬಿಕ್‌ ವಕ್ತಾರ ಅವಿಕೆ ಅಡ್ರೇ ಎಚ್ಚರಿಕೆ ಸಂದೇಶ ನೀಡಿದ್ದಾರೆ.

‘ಮುಂದಿನ ಮುನ್ಸೂಚನೆ ನೀಡುವವರೆಗೂ ಈ ಪ್ರದೇಶಗಳಿಗೆ ಹಿಂತಿರುಗಬಾರದು’ ಎಂದು ಈ ವೇಳೆ ಸ್ಪಷ್ಟಪಡಿಸಿದ್ದಾರೆ.

ಹೋರಾಟಕ್ಕೆ ಸಿದ್ಧ: ‘ಕಳೆದ ಒಂದೂವರೆ ವರ್ಷದಿಂದಲೂ ಇಸ್ರೇಲ್‌ ಜೊತೆಗೆ ಕದನ ವಿರಾಮ ಪಾಲಿಸಿದ್ದೆವು. ಈಗ ಲೆಬನಾನ್‌ನ ಮೇಲೆ ಇಸ್ರೇಲ್‌ ಏಕಾಏಕಿ ಸೇನಾ ದಾಳಿ ನಡೆಸಿವೆ. ನಮ್ಮ ತಾಳ್ಮೆ ಕೂಡ ಮುಗಿದಿದ್ದು, ನಮಗೆ ಯಾವುದೇ ಆಯ್ಕೆ ಉಳಿದಿಲ್ಲ. ಪ್ರತಿರೋಧ ಒಡ್ಡಲು ಹಾಗೂ ಯುದ್ಧಕ್ಕೆ ಸಿದ್ಧ’ ಎಂದು ಹಿಜ್ಬುಲ್ಲಾ ಮುಖಂಡರು ಘೋಷಿಸಿದ್ದಾರೆ.

‘ಇಸ್ರೇಲ್‌ ಸೇನೆಯು ಯುದ್ಧಕ್ಕೆ ಸಿದ್ಧವಿದೆ. ಕದನ ವಿರಾಮದ ನಂತರವೂ ನಿಂತಿಲ್ಲ. ಹೀಗಾಗಿ ನಾವು ಕೂಡ ಯುದ್ಧಕ್ಕೆ ಸಿದ್ಧರಿದ್ದೇವೆ’ ಎಂದು ಬಂಡುಕೋರ ಸಂಘಟನೆಯ ವಕ್ತಾರ ಮೊಹಮ್ಮದ್‌ ಕೊಮಟಿ ತಿಳಿಸಿದ್ದಾರೆ.

ಲಿಟಾನಿ ನದಿಯ ಉತ್ತರ ಭಾಗಗಳಿಂದ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ರಾಕೆಟ್‌ ದಾಳಿ ನಡೆಸುತ್ತಿದೆ ಎಂದು ಲೆಬನಾನ್‌ನ ಅಧ್ಯಕ್ಷ ಜೋಸೆಫ್‌ ಔನ್‌ ಅವರು ಸೌದಿ ಅರೇಬಿಯಾ, ಕತಾರ್‌, ಅಮೆರಿಕ, ಫ್ರಾನ್ಸ್‌ ಹಾಗೂ ಈಜಿಪ್ಟ್‌ನ ರಾಯಭಾರಿಗಳಿಗೆ ತಿಳಿಸಿದ್ದಾರೆ. 

ನದಿಯ ದಕ್ಷಿಣ ಭಾಗ, ಇಸ್ರೇಲ್‌ಗೆ ಹೊಂದಿಕೊಂಡಿರುವ ಗಡಿಯಲ್ಲಿ ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ನಿಶ್ಯಸ್ತ್ರೀಕರಣಗೊಳಿಸಲಾಗಿದೆ. ಅಲ್ಲದೆ, ನದಿ ಹಾಗೂ ಗಡಿಭಾಗದಲ್ಲಿ ಇಡೀ ಸೇನೆಯು ನಿಯಂತ್ರಣಕ್ಕೆ ತೆಗೆದು ಕೊಂಡಿದೆ’ ಎಂದು ಜೋಸೆಫ್‌ ಔನ್‌ ಸ್ಪಷ್ಟಪಡಿಸಿದ್ದಾರೆ.

ಸೇನೆ ರವಾನೆ: ‘ದಕ್ಷಿಣ ಲೆಬನಾನ್‌ನ ಹಾಗೂ ಗಡಿಭಾಗಕ್ಕೆ ಹೊಂದಿಕೊಂಡಿ ರುವ ಪ್ರಮುಖ ಆಯಕಟ್ಟಿನ ಸ್ಥಳಗಳಿಗೆ ಹೆಚ್ಚುವರಿ ಸೇನೆ ಕಳುಹಿಸಲಾಗಿದೆ’ ಎಂದು ಇಸ್ರೇಲ್‌ ಸೇನೆಯು ತಿಳಿಸಿದೆ.

‘ಸೇನಾ ಪಡೆಯು ಲೆಬನಾನ್‌ ಒಳಭಾಗಕ್ಕೆ ಪ್ರವೇಶಿಸಿದ್ದು, ತಳಮಟ್ಟದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲಿದೆ’ ಎಂದು ಅವಿಕೆ ಅಡ್ರೇ ತಿಳಿಸಿದ್ದಾರೆ.

ದೇಶದ ಹಲವು ಪ್ರದೇಶಗಳಿಗೆ ಇಸ್ರೇಲ್‌ ಸೇನೆಯು ಒಳಪ್ರವೇಶಿಸಿ ರುವುದನ್ನು ಲೆಬನಾನ್‌ ಸೇನೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. 

‘ಲೆಬನಾನ್‌ನ ಹಲವು ಪ್ರದೇಶಗಳಿಗೆ ಇಸ್ರೇಲ್‌ ಸೇನೆಯು ಪ್ರವೇಶಿಸಿದೆ. ಉಭಯ ದೇಶಗಳ ಗಡಿಭಾಗವನ್ನು ದಾಟಿ ಸೇನೆಯು ಹಿಡಿತಕ್ಕೆ ತೆಗೆದುಕೊಂಡಿದೆ’ ಎಂದು ದಕ್ಷಿಣ ಭಾಗದಲ್ಲಿರುವ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆ ಸ್ಪಷ್ಟಪಡಿಸಿದೆ.

16 ತಿಂಗಳ ನಂತರ ಭೂದಾಳಿ
2024ರ ಅಕ್ಟೋಬರ್‌ ತಿಂಗಳಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ಭೂದಾಳಿ ನಡೆಸಿತ್ತು. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಲೆಬನಾನ್‌ನ ಐದು ಸ್ಥಳಗಳನ್ನು ಇಸ್ರೇಲ್‌ ಸೇನೆಯು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಬಂಡುಕೋರರು ತಮ್ಮ ನೆಲೆಗಳನ್ನು ಮತ್ತೆ ಪುನರ್‌ ನಿರ್ಮಾಣ ಮಾಡುತ್ತಿದ್ದು, ಅವುಗಳನ್ನು ಗುರಿಯಾಗಿರಿಸಿಕೊಂಡು, ಇಸ್ರೇಲ್‌ ಸೇನೆಯು ವಾಯು ದಾಳಿ ಮುಂದುವರಿಸಿತ್ತು. ಇದೀಗ 16 ತಿಂಗಳ ನಂತರ ಮತ್ತೆ ಭೂದಾಳಿಗೆ ಇಸ್ರೇಲ್‌ ಸೇನೆಯು ನಿರ್ಧರಿಸಿದೆ.

ಇಸ್ರೇಲ್‌ ಟ್ಯಾಂಕ್‌ಗಳ ಮೇಲೆ ದಾಳಿ: ಹಿಜ್ಬುಲ್ಲಾ

‘ಲೆಬನಾನ್‌ ಗಡಿ ಭಾಗದ ಗ್ರಾಮದಲ್ಲಿದ್ದ ಇಸ್ರೇಲ್‌ನ ಟ್ಯಾಂಕ್‌ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದೇವೆ’ ಎಂದು ಹಿಜ್ಬುಲ್ಲಾ ತಿಳಿಸಿದೆ.

ಲೆಬನಾನ್‌ ಒಳಭಾಗ ಪ್ರವೇಶಿಸಿ, ವ್ಯೂಹಾತ್ಮಕವಾಗಿ ಹೆಚ್ಚು ಪ್ರಮುಖವಾದ ಪ್ರದೇಶಗಳಲ್ಲಿ ಹಿಡಿತ ಸಾಧಿಸಿದ್ದೇವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಘೋಷಿಸಿದ ಬೆನ್ನಲ್ಲೇ, ಈ ಮಾಹಿತಿ ನೀಡಿದೆ.

‘ಕ್ರಿಮಿನಲ್‌ ಇಸ್ರೇಲ್‌ ಆಕ್ರಮಣ ನಡೆಸಿದ ಕಫರ್‌ ಕಿಲಾದ ಟೆಲ್‌ ನಹಾಸ್‌ನಲ್ಲಿ ನಮ್ಮ ಹೋರಾಟಗಾರರು ‘ಮೆರ್ಕಾವಾ ಟ್ಯಾಂಕ್‌’ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹಿಜ್ಬುಲ್ಲಾ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿ