ಜೆರುಸಲೇಂ: ‘ಹಮಾಸ್ ಬಂಡುಕೋರರ ವಿರುದ್ಧ ಸಂಪೂರ್ಣವಾಗಿ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಂಗಳವಾರ ಹೇಳಿದ್ದಾರೆ. ಇಸ್ರೇಲ್ನ 24 ಯೋಧರನ್ನು ಗಾಜಾದಲ್ಲಿ ಸೋಮವಾರ ಹತ್ಯೆಗೈದ ಬೆನ್ನಲ್ಲೇ ಅವರು ಈ ರೀತಿ ಪ್ರತಿಜ್ಞೆ ಮಾಡಿದ್ದಾರೆ.
ಇಸ್ರೇಲ್– ಹಮಾಸ್ ಯುದ್ಧ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಸ್ರೇಲ್ನ ಯೋಧರು ಮೃತಪಟ್ಟಿರುವುದು.
ಗಾಜಾ ಪಟ್ಟಿಯ ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ಈಗಲೂ ಹಮಾಸ್ ಬಿಗಿಹಿಡಿತದಲ್ಲಿರುವ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿತ್ತು. ಜೊತೆಗೆ, ಗಡಿ ಭಾಗವನ್ನು ಹಮಾಸ್ ಬಂಡುಕೋರರಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿತ್ತು.
ಇದೇ ವೇಳೆ, ಗಡಿ ಬಳಿಯಿದ್ದ ಕಟ್ಟಡಗಳನ್ನು ನೆಲಸಮ ಮಾಡಲು ಸ್ಫೋಟಕಗಳನ್ನು ಇರಿಸಲಾಗಿತ್ತು. ಈ ಮಧ್ಯೆ, ಇಸ್ರೇಲ್ ಸೇನೆಯ ಟ್ಯಾಂಕರ್ಗಳನ್ನು ಗುರಿಯಾಗಿಸಿ ಬಂಡುಕೋರರು ಗ್ರೆನೇಡ್ ದಾಳಿ ನಡೆಸಿದರು. ಆಗ ಕಟ್ಟಡಗಳಲ್ಲಿ ಸ್ಫೋಟ ಸಂಭವಿಸಿ, ಇಸ್ರೇಲ್ನ 21 ಯೋಧರು ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು, ದಕ್ಷಿಣ ಗಾಜಾದಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಮೂವರು ಯೋಧರು ಮೃತಪಟ್ಟಿದ್ದರು ಎಂದು ಸೇನೆ ತಿಳಿಸಿದೆ.
ಸ್ಫೋಟಕ್ಕೆ ಕಾರಣವೇನು ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.