ADVERTISEMENT

ತೀವ್ರಗೊಂಡ ರಷ್ಯಾ ಆಕ್ರಮಣ: ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2022, 2:27 IST
Last Updated 20 ಅಕ್ಟೋಬರ್ 2022, 2:27 IST
   

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ತೀವ್ರ ಗೊಳಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಪ್ರಯಾಣಿಸದಂತೆ ಮತ್ತು ಉಕ್ರೇನ್‌ನಲ್ಲಿರುವ ಭಾರತೀಯರು ತಕ್ಷಣವೇ ಆ ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಸೂಚಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

'ಉಕ್ರೇನ್‌ನಾದ್ಯಂತ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚೆಗೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ' ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆಯಲ್ಲಿ ತಿಳಿಸಿದೆ.

'ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಲಭ್ಯವಿರುವ ವ್ಯವಸ್ಥೆಗಳ ಮೂಲಕ ಉಕ್ರೇನ್‌ನಿಂದ ಬೇಗನೆ ಹೊರಡುವಂತೆ ಸೂಚಿಸಲಾಗಿದೆ’ ಎಂದು ಸಲಹೆಯಲ್ಲಿ ಸೇರಿಸಲಾಗಿದೆ.

ADVERTISEMENT

ರಷ್ಯಾ ಪಡೆಗಳ ಸರಣಿ ಡ್ರೋನ್ ದಾಳಿಯಿಂದ ಉಕ್ರೇನ್ ತತ್ತರಿಸುತ್ತಿದೆ. ಸೋಮವಾರ ಉಕ್ರೇನ್‌ನಲ್ಲಿ ರಷ್ಯಾ ಡಜನ್‌ಗಟ್ಟಲೆ ‘ಕಾಮಿಕೇಜ್’ಡ್ರೋನ್‌ಗಳನ್ನು ಉಡಾವಣೆ ಮಾಡಿದೆ. ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿ ಹಲವಾರು ನಾಗರಿಕರನ್ನು ಕೊಂದಿದೆ.

ದಾಳಿಯ ನಂತರ, ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು, ರಷ್ಯಾಕ್ಕೆ ಹೆಚ್ಚಿನ ಡ್ರೋನ್‌ಗಳು ಮತ್ತು ಮೇಲ್ಮೈ ಕ್ಷಿಪಣಿಗಳನ್ನು ಒದಗಿಸುವ ಭರವಸೆ ನೀಡಿರುವ ಇರಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನುಕಡಿತಗೊಳಿಸಲು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.

‘ಉಕ್ರೇನಿಯನ್ನರನ್ನು ಕೊಲ್ಲಲು ರಷ್ಯಾಕ್ಕೆ ಸಹಾಯ ಮಾಡಿದ್ದಕ್ಕಾಗಿ ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಲು ಯುರೋಪಿಯನ್ ಒಕ್ಕೂಟವನ್ನು ಒತ್ತಾಯಿಸಿದ್ದೇನೆ’ಎಂದು ಕುಲೆಬಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.