
ಮಹಾತ್ಮ ಗಾಂಧೀಜಿ ಮತ್ತು ಪ್ರತಿಮೆ ಕಳ್ಳತನವಾಗಿರುವ ಸ್ಥಳ
Credit: X/@AdityaRajKaul
ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್ನ ರೌವಿಲ್ಲೆಯಲ್ಲಿರುವ ಅನಿವಾಸಿ ಭಾರತೀಯರ ಚಾರಿಟಿ ಆವರಣದಲ್ಲಿದ್ದ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆ ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಪ್ರತಿಮೆಯನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಉಡುಗೊರೆಯಾಗಿ ನೀಡಿತ್ತು. 2021ರ ನವೆಂಬರ್ 12ರಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ಈ ಪ್ರತಿಮೆಯು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಸಾಂಕೇತಿಕ ಮಹತ್ವವನ್ನು ಸಾರುತ್ತಿತ್ತು.
ಜನವರಿ 12ರಂದು ನಡೆದಿದೆ ಎನ್ನಲಾದ ಕಳ್ಳತನ ಪ್ರಕರಣವನ್ನು ವಿಕ್ಟೋರಿಯಾ ಪೊಲೀಸರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ‘ಆಸ್ಟ್ರೇಲಿಯಾ ಟುಡೇ’ ವರದಿ ಮಾಡಿದೆ.
ರೌವಿಲ್ಲೆಯ ಕಿಂಗ್ಸ್ಲಿ ಕ್ಲೋಸ್ನಲ್ಲಿರುವ ಚಾರಿಟಿ ಆವರಣದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಮೂವರು ಆರೋಪಿಗಳು ಕದ್ದಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರತಿಮೆ ಅಥವಾ ಅದರ ಭಾಗಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಆರೋಪಿಗಳ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.