ಇಸ್ಲಾಮಾಬಾದ್: ಭಾರತ ಚಂದ್ರನ ಮೇಲೆ ಇಳಿದರೆ, ಪಾಕಿಸ್ತಾನ ವಿದೇಶಗಳ ಬಳಿ ಹಣಕ್ಕಾಗಿ ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಪಾಕಿಸ್ತಾನದ ಆರ್ಥಿಕತೆ ಕುಸಿಯುತ್ತಿದೆ. ಹಣದುಬ್ಬರ ಎರಡಂಕಿ ದಾಟಿದ್ದು ಬಡವರ ಮೇಲೆ ಸರ್ಕಾರ ಆರ್ಥಿಕ ಒತ್ತಡ ಹಾಕುತ್ತಿದೆ ಎಂದು 73 ವರ್ಷದ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ನಾಯಕ ನವಾಜ್ ಷರೀಫ್ ಆರೋಪಿಸಿದ್ದಾರೆ.
ಭಾರತ ಚಂದ್ರನ ಮೇಲೆ ಇಳಿದಿದೆ, ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಆದರೆ, ಪಾಕಿಸ್ತಾನಕ್ಕೆ ಇಂತಹ ಸಾಧನೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ದೇಶದಲ್ಲಿ ಅರಾಜಕತೆ ಮೂಡಲು, ಹಣದುಬ್ಬರ ಹೆಚ್ಚಲು ಯಾರು ಕಾರಣ? ಇದಕ್ಕೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದ್ದಾರೆ.
ದಿವಂಗತ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತದ ಬಳಿ ಕೇವಲ ಒಂದು ಶತಕೋಟಿ (₹ 8,300) ಡಾಲರ್ ಇತ್ತು. ಈಗ ಅವರ ಬಳಿ 600 ಶತಕೋಟಿ ಡಾಲರ್ (₹ 49,941,691,800.00) ಹಣ ಇದೆ. ಆದರೆ ಪಾಕಿಸ್ತಾನ ಬೇರೆ ಬೇರೆ ದೇಶಗಳ ಬಳಿ ಸಾಲಕ್ಕಾಗಿ ಭಿಕ್ಷೆ ಬೇಡುವಂತಾಗಿದೆ. ದೇಶವನ್ನು ಇಂತಹ ದುಸ್ಥಿತಿಗೆ ತಳ್ಳಿದವರು ನಿಜವಾಗಿಯೂ ಅಪರಾಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ನವಾಜ್ ಷರೀಫ್ ಲಂಡನ್ನಿಂದ ವಿಡಿಯೊ ಭಾಷಣ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.