ADVERTISEMENT

ನಿಮಿಷಳನ್ನು ಕ್ಷಮಿಸಲ್ಲ, ಪರಿಹಾರವೂ ಬೇಡ: ಹತ್ಯೆಯಾದ ಮೆಹ್ದಿ ಸಹೋದರನ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2025, 14:06 IST
Last Updated 16 ಜುಲೈ 2025, 14:06 IST
   

ದುಬೈ: ‘ನಿಮಿಷಳ ಅಪರಾಧವನ್ನು ನಮ್ಮ ಕುಟುಂಬವು ಕ್ಷಮಿಸುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಕ್ಷಮಾ ಪರಿಹಾರವನ್ನು(ಬ್ಲಡ್‌ ಮನಿ) ಸ್ವೀಕರಿಸುವುದಿಲ್ಲ’ ಎಂದು ನಿಮಿಷಳಿಂದ ಹತ್ಯೆಯಾದ ಯೆಮನ್‌ ಪ್ರಜೆ ತಲಾಲ್ ಅಬ್ದು ಮೆಹ್ದಿ ಸಹೋದರ ಅಬ್ದುಲ್ ಫತ್ತಾಹ್ ಹೇಳಿದ್ದಾರೆ.

ಜುಲೈ 14ರಂದು ಬಿಬಿಸಿ ಅರೇಬಿಕ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫತ್ತಾಹ್‌, ತಡ ಮಾಡದೇ ನಿಮಿಷಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಭಾರತದ ಮಾಧ್ಯಮಗಳು ಅಪರಾಧಿಯನ್ನು ಸಂತ್ರಸ್ತೆ ಎನ್ನುವ ರೀತಿ ಬಿಂಬಿಸುತ್ತಿವೆ. ನಿಮಿಷಳಿಗೆ ಮೆಹ್ದಿ ಕಿರುಕುಳ ನೀಡಿದ್ದನು ಮತ್ತು ಆಕೆಯ ಪಾಸ್‌ಫೋರ್ಟ್‌ ಅನ್ನು ಇಟ್ಟುಕೊಂಡಿದ್ದನು ಎಂಬ ಸುಳ್ಳನ್ನು ಹರಡುತ್ತಿವೆ. ಈ ಸುಳ್ಳುಗಳಿಂದ ನಮ್ಮ ಕುಟುಂಬಕ್ಕೆ ಇನ್ನಷ್ಟು ನೋವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕೆಲಸದ ಸಮಯದಲ್ಲಿ ನಿಮಿಷ ಮತ್ತು ಮೆಹ್ದಿ ನಡುವೆ ಆದ ಪರಿಚಯ, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರೆಗೆ ಹೋಯಿತು. ನಂತರ ಇಬ್ಬರು ಮದುವೆಯಾದರು. ನಾಲ್ಕೇ ವರ್ಷಕ್ಕೆ ಆ ಮದುವೆ ಮುರಿದು ಬಿದ್ದಿತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಒಂದು ಕಡೆ ಸಹೋದರ ಹತ್ಯೆಯಿಂದ ನೋವನುಭವಿಸುತ್ತಿದ್ದರೆ, ಇನ್ನೊಂದು ಕಡೆ ದೀರ್ಘಕಾಲದ ಕಾನೂನು ಪ್ರಕ್ರಿಯೆಯಿಂದ ಬೇಸತ್ತು ಹೋದೆವು’ ಎಂದು ಹೇಳಿದ್ದಾರೆ.

ಘಟನೆಯ ಹಿನ್ನೆಲೆ:

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ನಿಮಿಷ ಅವರು ತನ್ನ ಕ್ಲಿನಿಕ್‌ ಪಾಲುದಾರನಾಗಿದ್ದ ತಲಾಲ್‌ ಅಬ್ದು ಮೆಹ್ದಿ ವಶದಲ್ಲಿದ್ದ ತನ್ನ ಪಾಸ್‌ಪೋರ್ಟ್‌ ಮತ್ತಿತರ ದಾಖಲೆಗಳನ್ನು ಪಡೆಯುವ ಉದ್ದೇಶದಿಂದ ಪ್ರಜ್ಞೆ ತಪ್ಪಿಸಲು ‘ಕೆಟಮೈನ್‌’ ಎಂಬ ಚುಚ್ಚುಮದ್ದು ನೀಡಿದ್ದರು. ಆದರೆ ಇದರ ಪ್ರಮಾಣ ಹೆಚ್ಚಾಗಿದ್ದರಿಂದ ಮೆಹ್ದಿ ಮೃತಪಟ್ಟಿದ್ದರು. ಈ ಘಟನೆ 2017ರ ಜುಲೈ ನಡೆದಿತ್ತು. 

ಘಟನೆಯಿಂದ ಗಾಬರಿಗೊಂಡ ನಿಮಿಷ, ಶುಶ್ರೂಷಕಿಯಾಗಿರುವ ತನ್ನ ಸ್ನೇಹಿತೆಗೆ ಈ ವಿಷಯ ತಿಳಿಸಿದ್ದರು. ಇಬ್ಬರೂ ಸೇರಿ ಪ್ರಕರಣ ಮುಚ್ಚಿಹಾಕಲು ಮೆಹ್ದಿ ದೇಹವನ್ನು ತುಂಡರಿಸಿ ನೀರಿನ ತೊಟ್ಟಿಗೆ ಹಾಕಿದ್ದರು. ನಂತರ ಭಾರತಕ್ಕೆ ಪರಾರಿಯಾಗಲು ಹೊರಟ ನಿಮಿಷಾರನ್ನು 2017ರ ಆಗಸ್ಟ್‌ನಲ್ಲಿ ಸೌದಿ ಅರೇಬಿಯಾ ಅಧಿಕಾರಿಗಳ ಸಹಕಾರದೊಂದಿಗೆ ಬಂಧಿಸಲಾಗಿತ್ತು. 

ಯೆಮನ್‌ನ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷ ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಆಕೆಯ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಯೆಮೆನ್‌ನ ‘ಸುಪ್ರೀಂ ಜುಡಿಷಿಯಲ್ ಕೌನ್ಸಿಲ್’ 2023ರ ನವೆಂಬರ್‌ನಲ್ಲಿ ಈ ಶಿಕ್ಷೆ ಎತ್ತಿ ಹಿಡಿದಿತ್ತು.

ಸದ್ಯ, ಪ್ರಭಾವಿ ಮುಸ್ಲಿಂ ಮುಖಂಡರ ಮಧ್ಯಪ್ರವೇಶದಿಂದ ಇಂದು(ಜುಲೈ 16) ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆಯನ್ನು ಅಲ್ಲಿನ ಸರ್ಕಾರಕ್ಕೆ ಮುಂದಕ್ಕೆ ಹಾಕಿದೆ. ಗಲ್ಲು ಶಿಕ್ಷೆಯಿಂದ ನಿಮಿಷಳನ್ನು ಪಾರು ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.