ತಿಯಾನ್ಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ
ರಾಯಿಟರ್ಸ್ ಚಿತ್ರ
ತಿಯಾನ್ಜಿನ್ (ಚೀನಾ): ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಈ ವರ್ಷದ ಏ.22ರಂದು ನಡೆದ ಉಗ್ರರ ದಾಳಿಯನ್ನು ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಖಂಡಿಸಿದೆ. ಜತೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ‘ದ್ವಿಮುಖ ನೀತಿ’ ಸ್ವೀಕಾರಾರ್ಹವಲ್ಲ ಎಂಬ ಭಾರತದ ನಿಲುವನ್ನು ಒಪ್ಪಿಕೊಂಡಿದೆ.
ಇದೇ ವೇಳೆ ಇಸ್ರೇಲ್ ದೇಶ ಗಾಜಾದ ಮೇಲೆ ಮಿಲಿಟರಿ ದಾಳಿ ನಡೆಸಿರುವುದನ್ನು ಖಂಡಿಸಿರುವ ಸಂಘಟನೆ, ಶೃಂಗಸಭೆಯಲ್ಲಿ ಭಯೋತ್ಪಾದನೆಯನ್ನು ಎದುರಿಸುವ ತನ್ನ ಬಲವಾದ ಸಂಕಲ್ಪವನ್ನು ಸ್ಪಷ್ಟಪಡಿಸಿದೆ.
ಚೀನಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ರಷ್ಯಾದ ವ್ಲಾದಿಮಿರ್ ಪುಟಿನ್ ಸೇರಿದಂತೆ ಹಲವು ಜಾಗತಿಕ ನಾಯಕರು ಭಾಗಿಯಾಗಿದ್ದರು.
ಭಯೋತ್ಪಾದನೆ, ದ್ವಿಮುಖ ನೀತಿಯನ್ನು ಒಪ್ಪಲಾಗದು. ಅಂತರರಾಷ್ಟ್ರೀಯ ಸಮುದಾಯಗಳು ಭಯೋತ್ಪಾದನೆ ಮತ್ತು ಅಕ್ರಮವಾಗಿ ಗಡಿನುಸುಳುವಿಕೆಯ ವಿರುದ್ಧ ಹೋರಾಡಬೇಕು ಎಂದು ಸಂಘಟನೆಯ ಸದಸ್ಯರು ಕರೆ ನೀಡಿದರು.
ಈ ಹಿಂದೆ ಚೀನಾದ ಚಿಂಗ್ಡಾವ್ನಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ) ಶೃಂಗಸಭೆಯ ಜಂಟಿ ಹೇಳಿಕೆಗೆ ಸಹಿ ಮಾಡಲು ಭಾರತ ನಿರಾಕರಿಸಿತ್ತು.
ಪಾಕಿಸ್ತಾನದ ಬಲೂಚಿಸ್ತಾನ ಪರಿಸ್ಥಿತಿಯ ಬಗ್ಗೆ ಹೇಳಿಕೆಯಲ್ಲಿ ಸೇರಿಸಿದ್ದರೂ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲಿನ ದಾಳಿಯ ಬಗ್ಗೆ ಯಾವುದೇ ಉಲ್ಲೇಖ ಅದರಲ್ಲಿ ಇರಲಿಲ್ಲ. ಹಾಗಾಗಿ, ಸಭೆಗೆ ಹಾಜರಾಗಿದ್ದ ಭಾರತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಕರಡಿಗೆ ಸಹಿ ಮಾಡಲು ನಿರಾಕರಿಸಿದ್ದರು. ಇದರಿಂದಾಗಿ, ಜಂಟಿ ಹೇಳಿಕೆ ಬಿಡುಗಡೆಯಾದೆಯೇ ಶೃಂಗಸಭೆ ಅಂತ್ಯಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.