ಇಸ್ಲಾಮಾಬಾದ್: ಧಾರ್ಮಿಕ ರಾಷ್ಟ್ರೀಯವಾದ ಹೊಂದಿರುವ ಭಾರತದ ಈಗಿನ ಬಿಜೆಪಿ ಸರ್ಕಾರದೊಂದಿಗೆ ಯಾವುದೇ ಅರ್ಥಪೂರ್ಣ ಮಾತುಕತೆಯ ಸಾಧ್ಯತೆಗಳಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ 'ಐಎಎನ್ಎಸ್' ವರದಿ ಮಾಡಿದೆ.
'ರಾಜಕೀಯ ಭಿನ್ನಾಭಿಪ್ರಾಯಗಳು ಹಾಗೂ ಘರ್ಷಣೆಯಿಂದಾಗಿ ದಕ್ಷಿಣ ಏಷ್ಯಾ ಹಿನ್ನಡೆಗೊಳಗಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದವು ಈ ಪ್ರದೇಶದ ಅಭಿವೃದ್ಧಿಯನ್ನು ಕುಂಠಿತವಾಗಿಸುವ ಅತಿ ದೊಡ್ಡ ಸಮಸ್ಯೆಯಾಗಿದೆ. ಅಲ್ಲಿನ ಸರ್ಕಾರ ಎಲ್ಲಿಯವರೆಗೆ ಧಾರ್ಮಿಕ ಸಿದ್ಧಾಂತಗಳಿಂದ ಪ್ರೇರಿತವಾಗಿದೆಯೋ ಅಲ್ಲಿಯವರೆಗೆ ಭಾರತದೊಂದಿಗೆ ಅರ್ಥಪೂರ್ಣ ಸಂವಾದ ಅಸಾಧ್ಯ' ಎಂದು ಹೇಳಿದ್ದಾರೆ.
'ಮುಂದೊಂದು ದಿನ ಭಾರತವು ವಿವೇಚನಾಶೀಲ ಸರ್ಕಾರವನ್ನು ಹೊಂದಲಿದೆ ಎಂದು ನಾನು ಭಾವಿಸುತ್ತೇನೆ. ಈ ಮೂಲಕ ತಾರ್ಕಿಕ ಚರ್ಚೆಗಳ ಮೂಲಕ ವಿವಾದಗಳನ್ನು ಬಗೆಹರಿಸಬಹುದು. ವಿಶೇಷವಾಗಿಯೂ ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿದ ಬಳಿಕ ಉಭಯ ದೇಶಗಳು ಜಂಟಿಯಾಗಿ ಭಯೋತ್ಪಾದನೆ ಹಾಗೂ ಹವಾಮಾನ ಬದಲಾವಣೆ ವಿರುದ್ಧ ಹೋರಾಡಬಹುದಾಗಿದೆ. ಆದರೂ ಭಾರತದೊಂದಿಗೆ ನಮ್ಮ ಶಾಂತಿಯ ಪ್ರಸ್ತಾಪವನ್ನು ದೌರ್ಬಲ್ಯ ಎಂದು ಪರಿಗಣಿಸುವುದರಿಂದ ನಿರಾಸೆಗೊಂಡಿದ್ದೇನೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.