ADVERTISEMENT

‘ಒಐಸಿ’ಯಲ್ಲಿ ಕಾಶ್ಮೀರ ವಿವಾದ ಚರ್ಚೆ: ಭಾರತ ಆಕ್ಷೇಪ

ಪಿಟಿಐ
Published 27 ಸೆಪ್ಟೆಂಬರ್ 2018, 19:44 IST
Last Updated 27 ಸೆಪ್ಟೆಂಬರ್ 2018, 19:44 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನ್ಯೂಯಾರ್ಕ್‌: ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನವು ಇಸ್ಲಾಮಿಕ್‌ ಸಹಕಾರ ಸಂಘಟನೆ ಸಭೆಯಲ್ಲಿ(ಒಐಸಿ) ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದ ಆಂತರಿಕ ವಿಷಯದ ಬಗ್ಗೆ ಒಐಸಿಯಲ್ಲಿ ಚರ್ಚೆ ನಡೆಸಿರುವುದು ಅನಧಿಕೃತ ಎಂದು ತಿಳಿಸಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 73ನೇ ಮಹಾ ಅಧಿವೇಶನ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಬುಧವಾರ ಒಐಸಿ ಸಭೆ ನಡೆಯಿತು. ಇದರಲ್ಲಿ ಕಾಶ್ಮೀರ ವಿಷಯದ ಬಗ್ಗೆ ಚರ್ಚೆ ನಡೆಸಿರುವುದು ಸರಿಯಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ಕಾಶ್ಮೀರ ವಿವಾದ ಭಾರತದ ಆಂತರಿಕ ವಿಷಯ ಎಂಬುದನ್ನು ನಾವು ಪದೇ ಪದೇ ಹೇಳುತ್ತಿದ್ದೇವೆ. ಇಷ್ಟಾದರೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಪ್ರಸ್ತಾಪಿಸಿರುವುದು ಖಂಡನೀಯ. ಈ ರೀತಿಯ ಚರ್ಚೆಗಳನ್ನು ನಾವು ತಿರಸ್ಕರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಅವರು ದ್ವಿಪಕ್ಷೀಯ ಸಭೆಗಳಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ರವೀಶ್‌ಕುಮಾರ್‌, ಪಾಕಿಸ್ತಾನ ಮೊದಲಿನಿಂದಲೂ ಇದೇ ರೀತಿ ಮಾಡಿಕೊಂಡು ಬರುತ್ತಿದೆ. ಇದು ಹೊಸದಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.