ADVERTISEMENT

ಉಕ್ರೇನ್‌ನಲ್ಲಿ ನೆರವು: ಭಾರತ, ಮೋದಿಗೆ ಕೃತಜ್ಞತೆ ಅರ್ಪಿಸಿದ ಪಾಕಿಸ್ತಾನದ ಯುವತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2022, 6:17 IST
Last Updated 9 ಮಾರ್ಚ್ 2022, 6:17 IST
ಉಕ್ರೇನ್‌ನಿಂದ ಭಾರತಕ್ಕೆ ಬಂದಿಳಿದ ವಿದ್ಯಾರ್ಥಿಗಳು–ಸಂಗ್ರಹ ಚಿತ್ರ
ಉಕ್ರೇನ್‌ನಿಂದ ಭಾರತಕ್ಕೆ ಬಂದಿಳಿದ ವಿದ್ಯಾರ್ಥಿಗಳು–ಸಂಗ್ರಹ ಚಿತ್ರ   

ನವದೆಹಲಿ: ಉಕ್ರೇನ್‌ ಗಡಿ ಭಾಗಕ್ಕೆ ತೆರಳಿ, ರೊಮೇನಿಯಾ ಪ್ರವೇಶಿಸಲು ಪಾಕಿಸ್ತಾನ ಸೇರಿದಂತೆ ಇತರೆ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದ ತ್ರಿವರ್ಣ ಧ್ವಜ ನೆರವಾಗಿರುವ ಕುರಿತು ವರದಿಯಾಗಿತ್ತು. ಇದೀಗ ಪಾಕಿಸ್ತಾನದ ಯುವತಿಯನ್ನು ಭಾರತದ ರಾಯಭಾರ ಕಚೇರಿಯು ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಅವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ರಷ್ಯಾದ ದಾಳಿಗೆ ಒಳಗಾಗಿರುವ ಉಕ್ರೇನ್‌ನಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಸಿಲುಕಿದ್ದಾರೆ. ರಾಯಭಾರ ಕಚೇರಿಗಳು, ಸಂಘಟನೆಗಳು ಹಾಗೂ ವಿದ್ಯಾರ್ಥಿಗಳ ಸ್ವಂತ ಪ್ರಯತ್ನಗಳಿಂದ ಹಲವು ಮಂದಿ ಗಡಿ ಭಾಗಕ್ಕೆ ತೆರಳುತ್ತಿದ್ದಾರೆ. ಅಲ್ಲಿಂದ ಬೇರೆ ರಾಷ್ಟ್ರಗಳ ಮೂಲಕ ತಮ್ಮ ಮಾತೃ ಭೂಮಿಗೆ ಮರಳುತ್ತಿದ್ದಾರೆ. ಇಂಥದ್ದೇ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ಉಕ್ರೇನ್‌ನ ಕೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ನೆರವಾಗಿರುವ ಬಗ್ಗೆ ವರದಿಯಾಗಿದೆ.

ಉಕ್ರೇನ್‌ ರಾಜಧಾನಿ ಕೀವ್‌ನಿಂದ ಸುರಕ್ಷಿತವಾಗಿ ಪಶ್ಚಿಮ ಉಕ್ರೇನ್‌ ಕಡೆಗೆ ತೆರಳಲು ಭಾರತದ ಅಧಿಕಾರಿಗಳು ಪಾಕಿಸ್ತಾನದ ಯುವತಿಗೆ ನೆರವಾಗಿದ್ದಾರೆ. ಅಲ್ಲಿಂದ ಯುವತಿಯು ತಮ್ಮ ರಾಷ್ಟ್ರಕ್ಕೆ ಮರಳಲಿದ್ದಾರೆ.

ADVERTISEMENT

ಸುರಕ್ಷಿತವಾಗಿ ಸ್ಥಳಾಂತರವಾಗಲು ನೆರವಾಗಿರುವ ಭಾರತದ ರಾಯಭಾರ ಕಚೇರಿ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಯುವತಿಆಸ್ಮಾ ಶಫಿಕ್‌ ಧನ್ಯವಾದ ತಿಳಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ರಷ್ಯಾ ಬುಧವಾರ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿದೆ ಹಾಗೂ ನಾಗರಿಕರ ಸ್ಥಳಾಂತಕ್ಕೆ ನೆರವಾಗಲು ಮಾನವೀಯ ಕಾರಿಡಾರ್‌ ತೆರೆಯುವುದಾಗಿ ಪ್ರಕಟಿಸಿದೆ. ಸುಮಿ, ಹಾರ್ಕಿವ್‌, ಮರಿವುಪೋಲ್ ಸೇರಿದಂತೆ ಕೆಲವು ನಗರಗಳಿಂದ ಮಾನವೀಯ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವುದಾಗಿ ರಷ್ಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.