ADVERTISEMENT

ಭಯೋತ್ಪಾದನೆಗೆ ಡ್ರೋನ್ ಬಳಕೆ ಸಾಧ್ಯತೆ, ಗಂಭೀರ ಪರಿಗಣನೆ ಅಗತ್ಯ: ಭಾರತ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹ ಸಂಸ್ಥೆಗಳ ಸಮಾವೇಶದಲ್ಲಿ ಭಾರತದ ಪ್ರತಿಪಾದನೆ

ಪಿಟಿಐ
Published 29 ಜೂನ್ 2021, 6:25 IST
Last Updated 29 ಜೂನ್ 2021, 6:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ಆಯಕಟ್ಟಿನ ಸ್ಥಳಗಳು ಮತ್ತು ವಾಣಿಜ್ಯ ಸ್ವತ್ತುಗಳ ಮೇಲೆ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಶಸ್ತ್ರಸಜ್ಜಿತ ಡ್ರೋನ್‌ಗಳ ಬಳಕೆ ಸಾಧ್ಯತೆಯನ್ನು ಅಂತರರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ವ್ಯವಹಾರಗಳ ವಿಶೇಷ ಕಾರ್ಯದರ್ಶಿ(ಆಂತರಿಕ ಭದ್ರತೆ) ವಿ.ಎಸ್‌.ಕೆ.ಕೌಮುದಿ ಒತ್ತಾಯಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಲ್ಲಿನ ಭಯೋತ್ಪಾದಕ ನಿಗ್ರಹ ಸಂಸ್ಥೆಗಳ ಮುಖ್ಯಸ್ಥರ ಎರಡನೇ ಹಂತದ ಉನ್ನತ ಮಟ್ಟದ ಸಮಾವೇಶದಲ್ಲಿ ‘ಭಯೋತ್ಪಾದನೆಯ ಜಾಗತಿಕ ಉಪದ್ರವ: ಹೊಸ ದಶಕಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಬಳಸುತ್ತಿರುವ ಹೊಸ ವಿಧಾನಗಳ ಮೌಲ್ಯಮಾಪನ’ ಕುರಿತು ಅವರು ಮಾತನಾಡಿದರು.

ADVERTISEMENT

ಜಮ್ಮು ವಿಮಾನ ನಿಲ್ದಾಣದ ಬಳಿಯ ಭಾರತೀಯ ವಾಯುಪಡೆ(ಐಎಎಫ್) ಕೇಂದ್ರಕ್ಕೆ ಎರಡು ಸ್ಫೋಟಕಗಳಿದ್ದ ಡ್ರೋನ್‌ಗಳು ದಾಳಿ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಕೌಮುದಿ, ‘ಉಗ್ರ ಚಟುವಟಿಕೆಗಳಿಂದ ಈಗ ಸೃಷ್ಟಿಯಾಗಿರುವ ಚಿಂತೆಗಳ ಜತೆಗೆ, ‘ಡ್ರೋನ್‌ಗಳ ಬಳಕೆ‘ ಹೊಸ ಸಮಸ್ಯೆಯಾಗಿ ಸೇರ್ಪಡೆಯಾಗಿದೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚಾರ ಮಾಡುವುದಕ್ಕಾಗಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಂತಹ ಸಂವಹನ ತಂತ್ರಜ್ಞಾನಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಉಗ್ರ ಚಟುವಟಿಕೆಗಳು ಮತ್ತು ಅವುಗಳಿಗೆ ಬೇಕಾದ ನೇಮಕಾತಿ; ಹೊಸ ಹಣ ಸಂಗ್ರಹ ವಿಧಾನಗಳು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ನೀಡಲು ‘ಕ್ರೌಂಡ್‌ ಫಂಡಿಂಗ್‌‘ ವೇದಿಕೆಗಳ ದುರ್ಬಳಕೆಯಾಗುತ್ತಿದೆ. ಉಗ್ರ ಚಟುವಟಿಕೆಗಳಿಗಾಗಿ ನವ ತಂತ್ರಜ್ಞಾನಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಭಯೋತ್ಪಾದನೆ ಎನ್ನುವುದು ಗಂಭೀರವಾದ ಬೆದರಿಕೆಯ ತಂತ್ರವಾಗಿದೆ‘ ಎಂದು ಅವರು ಹೇಳಿದ್ದಾರೆ.

‘ಉಗ್ರಗಾಮಿ ಸಂಘಟನೆಗಳು, ಕಡಿಮೆ ವೆಚ್ಚದಲ್ಲಿ, ಸುಲಭವಾಗಿ ದೊರೆಯುವಂತಹ, ವೈಮಾನಿಕ /ಸಬ್‌ ಸರ್ಫೇಸ್ ವೇದಿಕೆಗಳನ್ನು, ಗುಪ್ತಚರ ಮಾಹಿತಿ ಸಂಗ್ರಹ, ಶಸ್ತ್ರ/ಸ್ಫೋಟಕಗಳ ಪೂರೈಕೆ ಮತ್ತು ನಿಗದಿತ ದಾಳಿಗಾಗಿ ಬಳಸಿಕೊಳ್ಳುತ್ತಿವೆ. ಇದು ವಿಶ್ವದಾದ್ಯಂತವಿರುವ ಭದ್ರತಾ ಏಜೆನ್ಸಿಗಳಿಗೆ ಬಹುದೊಡ್ಡ ಸವಾಲಾಗಿದೆ‘ ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.