ADVERTISEMENT

2015ರ ಭೂಕಂಪಕ್ಕೆ ಪರಿಹಾರವಾಗಿ ನೇಪಾಳಕ್ಕೆ 50,000 ಮನೆ ಕಟ್ಟಿಕೊಟ್ಟ ಭಾರತ

ಪಿಟಿಐ
Published 15 ನವೆಂಬರ್ 2021, 11:31 IST
Last Updated 15 ನವೆಂಬರ್ 2021, 11:31 IST
ನಿರ್ಮಾಣ ಕಾಮಗಾರಿಯ ಪ್ರಾತಿನಿಧಿಕ ಚಿತ್ರ
ನಿರ್ಮಾಣ ಕಾಮಗಾರಿಯ ಪ್ರಾತಿನಿಧಿಕ ಚಿತ್ರ    

ಕಠ್ಮಂಡು: ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಿಂದ ಹಾನಿಗೀಡಾಗಿದ್ದ 50 ಸಾವಿರ ಮನೆಗಳನ್ನು ಭಾರತವು ಯಶಸ್ವಿಯಾಗಿ ಮರು ನಿರ್ಮಾಣ ಮಾಡಿದೆ.

ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಮನೆಗಳ ಮರು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯು, ರಾಷ್ಟ್ರೀಯ ಪುನರ್‌ ರ್ನಿರ್ಮಾಣ ಪ್ರಾಧಿಕಾರ (ಎನ್‌ಆರ್‌ಎ), ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್‌ಡಿಪಿ) ಮತ್ತು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ (ಯುಎನ್‌ಒಪಿಎಸ್) ಸಹಯೋಗದಲ್ಲಿ ಕಠ್ಮಂಡುವಿನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

‘ಭಾರತ ಸರ್ಕಾರವು 50,000 ಖಾಸಗಿ ಮನೆಗಳ ಮರುನಿರ್ಮಾಣವನ್ನು ಪೂರ್ಣಗೊಳಿಸಿದೆ,’ ಎಂದು ಭಾರತದ ಉಪ ಮುಖ್ಯ ರಾಯಭಾರ ಕಚೇರಿಯ ನಮ್‌ಗ್ಯಾ ಸಿ. ಖಂಪಾ ಅವರು ಕಾರ್ಯಕ್ರಮದಲ್ಲಿ ಘೋಷಿಸಿದರು.

ADVERTISEMENT

ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳ ನಾಲ್ಕು ನಗರ ಪುರಸಭೆಗಳು ಮತ್ತು 14 ಗ್ರಾಮೀಣ ಪುರಸಭೆಗಳಲ್ಲಿ ಭೂಕಂಪ ಪೀಡಿತ ಫಲಾನುಭವಿಗಳಿಗೆ ಸಾಮಾಜಿಕ-ತಾಂತ್ರಿಕ ಸೌಲಭ್ಯ ಮತ್ತು ಸಮಾಲೋಚನಾ (ಎಸ್‌ಟಿಎಫ್‌ಸಿ) ಸೇವೆಗಳನ್ನು ಒದಗಿಸಲು ಭಾರತ ಸರ್ಕಾರವು 2018ರ ಮಾರ್ಚ್‌ನಿಂದ ಯುಎನ್‌ಡಿಪಿ ಮತ್ತು ಯುಎನ್‌ಒಪಿಎಸ್‌ ಅನ್ನು ತೊಡಗಿಸಿದೆ.

ಭೂಕಂಪ ಪೀಡಿತ 50,000 ಫಲಾನುಭವಿಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸಲು, ಪುನರ್‌ ನಿರ್ಮಾಣ ಮಾಡಲು ಭಾರತ ಸರ್ಕಾರವು ವಸತಿ ವಲಯದ ಮೇಲೆ 150 ದಶಲಕ್ಷ ಡಾಲರ್‌ (₹1,116 ಕೋಟಿ)ಗಳನ್ನು ವಿನಿಯೋಗಿಸಿದೆ.

2015ರ ವಿನಾಶಕಾರಿ ಭೂಕಂಪದಲ್ಲಿ ಹೆಚ್ಚು ಹಾನಿ ಅನುಭವಿಸಿರುವ ನೇಪಾಳದ 11 ಜಿಲ್ಲೆಗಳ 71 ಶಿಕ್ಷಣ ಕ್ಷೇತ್ರದ ಯೋಜನೆಗಳು, 132 ಆರೋಗ್ಯ ಕಟ್ಟಡಗಳು ಮತ್ತು 28 ಪರಂಪರಿಕ ತಾಣಗಳ ಮರುಸ್ಥಾಪನೆ / ಮರುಹೊಂದಿಕೆಗಾಗಿ ಭಾರತ ಸರ್ಕಾರವು ಎನ್ಆರ್‌ಎ ಜೊತೆಗೆ ಕೆಲಸ ಮಾಡುತ್ತಿದೆ.

ಹಿಮಾಲಯ ನಾಡು ನೇಪಾಳದಲ್ಲಿ ಏಪ್ರಿಲ್ 2015ರಲ್ಲಿ ಸಂಭವಿಸಿದ್ದ ಭಾರಿ ಭೂಕಂಪದ ವೇಳೆ 9,000 ಕ್ಕೂ ಹೆಚ್ಚು ಅಧಿಕ ಮಂದಿ ಮೃತಪಟ್ಟಿದ್ದರು. 8,00,000 ಕ್ಕೂ ಹೆಚ್ಚು ಮನೆಗಳು ಮತ್ತು ಶಾಲೆಗಳು ಹಾನಿಗೀಡಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.