ADVERTISEMENT

ಉಕ್ರೇನ್ ಪ್ರತಿರೋಧದಿಂದ ಅಪಾರ ಪ್ರಮಾಣದ ಯೋಧರ ಸಾವು: ಒಪ್ಪಿಕೊಂಡ ರಷ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2022, 6:07 IST
Last Updated 8 ಏಪ್ರಿಲ್ 2022, 6:07 IST
ಕೀವ್ ನಗರದ ಟಿವಿ ಟವರ್ ಮೇಲೆ ರಷ್ಯಾ ದಾಳಿ: ಪಿಟಿಐ ಚಿತ್ರ
ಕೀವ್ ನಗರದ ಟಿವಿ ಟವರ್ ಮೇಲೆ ರಷ್ಯಾ ದಾಳಿ: ಪಿಟಿಐ ಚಿತ್ರ   

ಮಾಸ್ಕೊ: ಉಕ್ರೇ್ನ್‌ನ ನಗರಗಳಲ್ಲಿ ಕಠಿಣ ಪ್ರತಿರೋಧವನ್ನು ಎದುರಿಸುತ್ತಿರುವ ರಷ್ಯಾ ಅಪಾರ ಪ್ರಮಾಣದ ಯೋಧರನ್ನು ಕಳೆದುಕೊಂಡಿರುವುದನ್ನು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.

ಹೆಚ್ಚುತ್ತಿರುವ ಸೈನ್ಯದ ನಷ್ಟವು ‘ದೊಡ್ಡ ದುರಂತ’ ವನ್ನು ವಿವರಿಸುತ್ತದೆ. ‘ನಾವು ಸೈನ್ಯದಲ್ಲಿ ಗಮನಾರ್ಹ ನಷ್ಟವನ್ನು ಹೊಂದಿದ್ದೇವೆ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ.

ಆರು ವಾರಗಳಿಂದ ನಡೆಯುತ್ತಿರುವ ರಷ್ಯಾದ ಆಕ್ರಮಣದಿಂದಾಗಿ 40 ಲಕ್ಷಕ್ಕೂ ಹೆಚ್ಚು ಜನರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಉಕ್ರೇನ್‌ನ ಸಾವಿರಾರು ಜನ, ಯೋಧರು ಅಸುನೀಗಿದ್ದಾರೆ. ಉಕ್ರೇನ್ ಸೇನೆಯ ಪ್ರತಿರೋಧದಲ್ಲಿ ಸಾವಿರಾರು ಸಂಖ್ಯೆಯ ರಷ್ಯಾ ಯೋಧರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದರು.

ADVERTISEMENT

ಈ ಮಧ್ಯೆ, ರಷ್ಯಾ ವಿರುದ್ಧದ ಸಾಂಕೇತಿಕ ಕ್ರಮದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸಿದೆ. ರಷ್ಯಾದಿಂದ ಮಾನವ ಹಕ್ಕುಗಳ ಹರಣ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದಾಗಿ ರಷ್ಯಾ ಮೂರು ದಶಕಗಳಲ್ಲಿ ನೋಡದಂತಹ ಅತ್ಯಂತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಹೇಳಿದ್ದಾರೆ.

ಫೆ.24ರಿಂದ ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿದೆ. ರಷ್ಯಾದ ಯುದ್ಧಾಪರಾಧಗಳ ಕುರಿತಂತೆ ಪಾಶ್ಚಿಮಾತ್ಯ ದೇಶಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಬುಕಾ ಪಟ್ಟಣದಲ್ಲಿ ನಾಗರಿಕರ ಹತ್ಯೆಯ ನಂತರ ಹೊಸ ನಿರ್ಬಂಧಗಳನ್ನು ಅನುಸರಿಸಿ, ಯುರೋಪ್‌ ದೇಶಗಳು ರಷ್ಯಾದ ತೈಲ ಮತ್ತು ಅನಿಲ ಖರೀದಿಯನ್ನು ನಿಲ್ಲಿಸಬೇಕು ಎಂದು ಉಕ್ರೇನ್ ಒತ್ತಾಯಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ಸಂಸ್ಥೆಯ ಬಾಗಿಲನ್ನು ಮುಚ್ಚಿ ಎಂದು ಆಕ್ರೋಶ ಹೊರಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.