ಭಾರತ -ಪಾಕ್ ಧ್ವಜ
ಮಾಸ್ಕೊ: ‘ಭಾರತ ಮತ್ತು ಅಫ್ಗಾನಿಸ್ತಾನದ ಜತೆ ಪಾಕಿಸ್ತಾನದ ಸಂಬಂಧ ಸುಧಾರಿಸಲು ಮಧ್ಯಸ್ಥಿಕೆ ವಹಿಸಿಲ್ಲ. ಈ ದೇಶಗಳು ಮನವಿ ಮಾಡಿದರೆ ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಿದ್ಧ’ ಎಂದು ರಷ್ಯಾ ಸೋಮವಾರ ಹೇಳಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು 1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಘೋಷಣೆಯ ಆಧಾರದ ಮೇಲೆ ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ರಷ್ಯಾ ಒತ್ತಾಯಿಸಿದೆ.
ಜನವರಿ 20ರಂದು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರ ವಾರ್ಷಿಕ ಪತ್ರಿಕಾಗೋಷ್ಠಿಯನ್ನು ಸಮಯದ ಅಭಾವದಿಂದ ಮೊಟಕುಗೊಳಿಸಲಾಗಿತ್ತು. ಅಂದು ಉತ್ತರಿಸಲಾಗದ ಕೆಲವು ಪ್ರಶ್ನೆಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈಗ ಉತ್ತರಗಳನ್ನು ಪ್ರಕಟಿಸಿದೆ.
ರಷ್ಯಾ ಮತ್ತು ಪಾಕಿಸ್ತಾನದ ನಡುವಿನ ಕಾರ್ಯತಂತ್ರದ ಮತ್ತು ಆರ್ಥಿಕ ಸಂಬಂಧಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, ‘2025ರಲ್ಲಿ ಉಭಯ ದೇಶಗಳ ನಾಯಕರ ನಡುವೆ ಹಲವು ಪ್ರಮುಖ ಸಭೆಗಳು ನಡೆದಿವೆ. ಚೀನಾದಲ್ಲಿ ನಡೆದ ಎಸ್ಸಿಒ ಶೃಂಗಸಭೆಯ ಸಂದರ್ಭದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ಶೆಹಬಾಜ್ ಶರೀಫ್ ಅವರು ಭೇಟಿಯಾಗಿ ಚರ್ಚಿಸಿದ್ದಾರೆ’ ಎಂದು ಹೇಳಿದೆ.
ಸೋವಿಯತ್ ನೆರವಿನಿಂದ ನಿರ್ಮಿಸಿರುವ ಕರಾಚಿ ಮೆಟಲರ್ಜಿಕಲ್ ಪ್ಲಾಂಟ್ನ ಪುನಶ್ಚೇತನ, ಔಷಧ ಕ್ಷೇತ್ರದಲ್ಲಿ ಸಹಕಾರ ಮತ್ತು ಅಂತರರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್ ಮೂಲಕ ಪ್ರಾಯೋಗಿಕವಾಗಿ ಖಂಡಾಂತರ ಸರಕು ಸಾಗಣೆ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದೆ.
ಪಾಕಿಸ್ತಾನದಲ್ಲಿ ತೈಲ ಮತ್ತು ಅನಿಲ ಯೋಜನೆಗಳಲ್ಲಿ ರಷ್ಯಾದ ಕಂಪನಿಗಳು ಭಾಗವಹಿಸುವ ಸಾಧ್ಯತೆ ಹಾಗೂ ದೇಶೀಯ ಇಂಧನ ಪೂರೈಕೆ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.