ADVERTISEMENT

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 14 ಮಂದಿ ಸಾವು, ನೆರವು ಕೋರಿದ ಝೆಲೆನ್‌ಸ್ಕಿ

ಏಜೆನ್ಸೀಸ್
Published 17 ಏಪ್ರಿಲ್ 2024, 15:34 IST
Last Updated 17 ಏಪ್ರಿಲ್ 2024, 15:34 IST
<div class="paragraphs"><p>ಉಕ್ರೇನ್‌ನ ಚೆರ್ನಿಗಿವ್‌ ನಗರದ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿದಾಳಿಯಿಂದ ಹಾನಿಗೀಡಾದ ಕಟ್ಟಡದಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವುದು </p></div>

ಉಕ್ರೇನ್‌ನ ಚೆರ್ನಿಗಿವ್‌ ನಗರದ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿದಾಳಿಯಿಂದ ಹಾನಿಗೀಡಾದ ಕಟ್ಟಡದಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವುದು

   

ಚೆರ್ನಿಗಿವ್‌: ಉತ್ತರ ಉಕ್ರೇನ್‌ ನಗರ ಚೆರ್ನಿಹಾಯಿವ್ ಮೇಲೆ ರಷ್ಯಾ ಬುಧವಾರ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮ 14 ಜನರು ಮೃತಪಟ್ಟು, 61 ಜನರು ಜನರು ಗಾಯಗೊಂಡಿದ್ದಾರೆ. 

16 ಕಟ್ಟಡಗಳಿಗೆ ಮತ್ತು ಹತ್ತಾರು ವಾಹನಗಳಿಗೆ ಹಾನಿಯಾಗಿದೆ. ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕೆಲಸದಲ್ಲಿ ರಕ್ಷಣಾ ಪಡೆಗಳು ನಿರತವಾಗಿವೆ ಎಂದು ಚೆರ್ನಿಹಾಯಿವ್‌ನ ಮೇಯರ್‌ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಚಿತ್ರಗಳು ಬಿಡುಗಡೆಯಾಗಿವೆ. ಅನಾರೋಗ್ಯ ಕಾರಣಕ್ಕಾಗಿ ರಜೆ ಪಡೆದಿದ್ದ ಪೊಲೀಸ್‌ ಸಿಬ್ಬಂದಿ ಕೂಡ ಮೃತರಲ್ಲಿ ಒಬ್ಬರು.

ADVERTISEMENT

ರಷ್ಯಾ ದಾಳಿಯನ್ನು ಎದುರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಿಪಣಿಗಳನ್ನು ಉಕ್ರೇನ್‌ಗೆ ನೀಡುವಂತೆ ಅಲ್ಲಿಯ ಅಧ್ಯಕ್ಷ  ವೊಲೊದಿಮಿರ್‌ ಝೆಲೆನ್‌ಸ್ಕಿ ಅವರು ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿ ಎರಡು ವರ್ಷಗಳು ಕಳೆದರೂ ಚೆರ್ನಿಹಾಯಿವ್ ಪ್ರದೇಶದ ಮೇಲೆ ದಾಳಿ ನಡೆದಿರುವುದು ವಿರಳ. ಈಗ ಆ ಪ್ರದೇಶದ ಮೇಲೂ ಮಾರಣಾಂತಿಕ ದಾಳಿ ನಡೆದಿದೆ.

‘ಮಿತ್ರರಾಷ್ಟ್ರಗಳಿಂದ ಉಕ್ರೇನ್‌ಗೆ ವಾಯುದಾಳಿ ನಿಗ್ರಹಿಸುವಂಥ ಸಾಧನಗಳು ದೊರೆತಿದ್ದರೆ, ರಷ್ಯಾದ ಭಯೋತ್ಪಾದನೆಯನ್ನು ನಿಗ್ರಹಿಸುವಂತೆ ಜಾಗತಿಕ ಮಟ್ಟದಲ್ಲಿ ನಿರ್ಧರಿಸಿದ್ದರೆ ಇಂದು ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ದಾಳಿ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬ ಅವರು, ವಾಯುದಾಳಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇಸ್ರೇಲ್‌ ಅಳವಡಿಸಿರುವ ಕ್ಷಿಪಣಿ ನಿಗ್ರಹಗಳನ್ನು ಉಕ್ರೇನ್‌ ಕೂಡ ಅಳವಡಿಸಬೇಕು ಎಂದಿದ್ದಾರೆ. 

ವಾಯುದಾಳಿ ನಿಗ್ರಹ ವ್ಯವಸ್ಥೆಯನ್ನು ಉಕ್ರೇನ್‌ಗೆ ನೀಡಲು ಒಪ್ಪಿರುವುದಕ್ಕಾಗಿ ಅವರು ಜರ್ಮನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದರೊಂದಿಗೆ, ದೇಶಕ್ಕೆ ಹೆಚ್ಚಿನ ಸಹಾಯ ಮಾಡುವಂತೆ ಸದಸ್ಯ ರಾಷ್ಟ್ರಗಳಿಗೆ ಈ ವಾರ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.