ಢಾಕಾ: ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿಯ (ಎಸಿಪಿ) ರ್ಯಾಲಿಯ ವೇಳೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ನಾಲ್ವರು ಮೃತಪಟ್ಟಿದ್ದಾರೆ.
‘ಗೋಪಾಲ್ಗಂಜ್ನಲ್ಲಿ ಬುಧವಾರ ಎನ್ಸಿಪಿ ರ್ಯಾಲಿ ನಡೆಸುತ್ತಿದ್ದಾಗ ಘರ್ಷಣೆ ನಡೆದಿದೆ. ಪ್ರಕರಣ ಸಂಬಂಧ 14 ಜನರನ್ನು ಬಂಧಿಸಲಾಗಿದೆ’ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ. ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಅವರ ಊರಲ್ಲೇ ಈ ಘಟನೆ ನಡೆದಿದೆ.
ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರ ಕಚೇರಿಯು, ಗೋಪಾಲ್ಗಂಜ್ನಲ್ಲಿ 22 ಗಂಟೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ಭದ್ರತಾ ಪಡೆಗಳೊಂದಿಗಿನ ಘರ್ಷಣೆ ವೇಳೆ ಪ್ರತಿಭಟನಕಾರರು ಬಿದಿರಿನ ಕೋಲು ಮತ್ತು ಇಟ್ಟಿಗೆಗಳನ್ನು ಹಿಡಿದುಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಮತ್ತು ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸರು ಮತ್ತು ಸ್ಥಳೀಯಾಡಳಿತದ ವಾಹನಗಳಿಗೆ ಪ್ರತಿಭಟನಕಾರರು ಹಾನಿ ಮಾಡಿದ್ದಾರೆ. ಎನ್ಸಿಪಿ ಬೆಂಗಾವಲು ಪಡೆಯ ಮೇಲೆ ದಾಳಿಗೆ ಯತ್ನಿಸಿದ್ದಾರೆ ಮತ್ತು ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಲು ಪ್ರಚೋದಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮುರಿದುಬಿದ್ದಿರುವ ವೇದಿಕೆ ಮತ್ತು ಹಾನಿಗೊಂಡಿರುವ ಧ್ವನಿವರ್ಧಕ ವ್ಯವಸ್ಥೆಯೊಂದಿಗೆ ಎನ್ಸಿಪಿ ರ್ಯಾಲಿಯನ್ನು ಮುಂದುವರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.