ಪ್ರೀತಮ್ ಸಿಂಗ್
–ರಾಯಿಟರ್ಸ್ ಚಿತ್ರ
ಸಿಂಗಪುರ: ಸಿಂಗಪುರ ಸಂಸತ್ನ ಸಂಸದೀಯ ಸಮಿತಿಗೆ ಸುಳ್ಳು ಸಾಕ್ಷ್ಯ ನೀಡಿದ ಪ್ರಕರಣದಲ್ಲಿ ಭಾರತ ಮೂಲದ ವಿರೋಧ ಪಕ್ಷದ ನಾಯಕ ಪ್ರೀತಂ ಸಿಂಗ್ ಅವರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ₹9 ಲಕ್ಷ ದಂಡ ವಿಧಿಸಿದೆ.
ಉಪ ಪ್ರಧಾನ ಜಿಲ್ಲಾ ನ್ಯಾಯಾಧೀಶ ಲೂಕ್ ಟಾನ್ ಅವರು ಎರಡು ಪ್ರಕರಣಗಳಲ್ಲಿ ಪ್ರೀತಂ ತಪ್ಪಿತಸ್ಥ ಎಂದು ಸೋಮವಾರ ತೀರ್ಪು ನೀಡಿದರು. ಎರಡು ಪ್ರಕರಣಗಳಲ್ಲಿ ತಲಾ ₹4.5 ಲಕ್ಷ ದಂಡ ವಿಧಿಸಿದರು.
ತೀರ್ಪು ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ, ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.
ಯಾವುದೇ ಪ್ರಕರಣದಲ್ಲಿ ಸಂಸದರು ಕನಿಷ್ಠ ಒಂದು ವರ್ಷ ಜೈಲು ಅಥವಾ ಕನಿಷ್ಠ ₹ 6.50 ಲಕ್ಷ (ಒಂದು ಅಪರಾಧಕ್ಕೆ ಸಂಬಂಧಿಸಿದಂತೆ) ದಂಡಕ್ಕೆ ಗುರಿಯಾದರೆ ಅವರ ಸಂಸತ್ ಸದಸ್ಯತ್ವ ರದ್ದಾಗುತ್ತದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ ಎಂದು ನಿಯಮ ಹೇಳುತ್ತದೆ.
ಆದರೆ, ಸಿಂಗ್ ಅವರಿಗೆ ವಿಧಿಸಿರುವ ಶಿಕ್ಷೆಯು ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ಮಿತಿಯನ್ನು ತಲುಪುವುದಿಲ್ಲ ಎಂದು ಚುನಾವಣಾ ಆಯೋಗ ಸೋಮವಾರ ದೃಢಪಡಿಸಿದೆ.
‘ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನು ತಂಡಕ್ಕೆ ಸೂಚಿಸಿದ್ದೇನೆ’ ಎಂದು ಸಿಂಗಪುರ ಸಂಸತ್ನಲ್ಲಿ ವಿಪಕ್ಷ ಸ್ಥಾನದಲ್ಲಿರುವ ವರ್ಕರ್ಸ್ ಪಾರ್ಟಿ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಂಗ್ ಅವರು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
2021ರಲ್ಲಿ ತಮ್ಮದೇ ಪಕ್ಷದ ಮಾಜಿ ಸಂಸದೆ ರಯೀಸಾ ಖಾನ್ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸಂಸದೀಯ ಸಮಿತಿಗೆ ಸುಳ್ಳು ಸಾಕ್ಷ್ಯ ನೀಡಿದ ಎರಡು ಆರೋಪಗಳು ಸಿಂಗ್ ಮೇಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.