ಸಿಂಗಪುರ: ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಭಾರತ ಮೂಲದ ಮಲೇಷ್ಯಾ ನಿವಾಸಿ ನಾಗೇಂದ್ರನ್ ಕೆ. ಧರ್ಮಲಿಂಗಂ ಎಂಬಾತಗೆ ಗಲ್ಲು ವಿಧಿಸಲಾಗಿದೆ. ಚಾಂಗಿ ಜೈಲಿನಲ್ಲಿ ಬುಧವಾರ (ನ.10) ಆತನನ್ನು ಗಲ್ಲಿಗೇರಿಸಲಾಗುವುದು ಎಂದು ಸಿಂಗಪುರ ಸರ್ಕಾರ ತಿಳಿಸಿದೆ.
ಈ ನಡುವೆ, ‘ನಾಗೇಂದ್ರನ್ ಮಾನಸಿಕ ಅಸ್ವಸ್ಥನಿದ್ದು, ಆತನನ್ನು ಗಲ್ಲಿಗೇರಿಸಬಾರದು’ ಎಂದು ಜಾಗತಿಕ ಮಟ್ಟದ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಜಾಗತಿಕವಾಗಿ ಕೇಳಿ ಬರುತ್ತಿರುವ ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಸಿಂಗಪುರ ಸರ್ಕಾರ, ‘ಆತನು ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ. ತಾನು ಎಸಗಿದ ಅಪರಾಧ ಕೃತ್ಯದ ಬಗ್ಗೆ ಆತನಿಗೆ ಅರಿವಿತ್ತು’ ಎಂದು ಪ್ರತಿಕ್ರಿಯಿಸಿದೆ.
ಸಿಂಗಪುರ ಮತ್ತು ಮಲೇಷ್ಯಾಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ವುಡ್ಲ್ಯಾಂಡ್ಸ್ ಚೆಕ್ಪಾಯಿಂಟ್ನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಆರೋಪದ ಮೇಲೆ ನಾಗೇಂದ್ರನನ್ನು2009ರಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ್ದ ಕೋರ್ಟ್, 42.27 ಗ್ರಾಂನಷ್ಟು ಹೆರಾಯಿನ್ ಆಮದು ಮಾಡಿಕೊಂಡಿದ್ದಕ್ಕಾಗಿ ನಾಗೇಂದ್ರನ್ ದೋಷಿ ಎಂದು ಘೋಷಿಸಿ, 2010ರಲ್ಲಿ ಆತನಿಗೆ ಮರಣ ದಂಡನೆ ವಿಧಿಸಿತು.
ಮಾದಕ ವಸ್ತುಗಳ ದುರ್ಬಳಕೆ ತಡೆ ಕಾಯ್ದೆ ಪ್ರಕಾರ, 15 ಗ್ರಾಂಗಿಂತ ಹೆಚ್ಚು ಪ್ರಮಾಣದ ಹೆರಾಯಿನ್ ಆಮದು ಮಾಡಿಕೊಂಡರೆ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.