ADVERTISEMENT

ಶ್ರೀಲಂಕಾ ಬಿಕ್ಕಟ್ಟು; ಕರ್ಫ್ಯೂ ತೆರವು, ರಾಜೀನಾಮೆ ನೀಡದ ಗೊಟಬಯ ರಾಜಪಕ್ಸ

ಪಿಟಿಐ
Published 14 ಜುಲೈ 2022, 5:09 IST
Last Updated 14 ಜುಲೈ 2022, 5:09 IST
ಲಂಕಾದಲ್ಲಿ ಪ್ರತಿಭಟನೆ
ಲಂಕಾದಲ್ಲಿ ಪ್ರತಿಭಟನೆ   

ಕೊಲಂಬೊ:ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಗುರುವಾರ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ದೇಶ ಬಿಟ್ಟು ಪರಾರಿಯಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಇನ್ನೂ ರಾಜೀನಾಮೆ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಗೊಟಬಯ ಘೋಷಿಸಿದ್ದರು. ಆದರೆ ಬುಧವಾರ ಮುಂಜಾನೆ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು.

ಭದ್ರತಾ ದೃಷ್ಟಿಯಿಂದ ಗೊಟಬಯ ಮಾಲ್ಡೀವ್ಸ್ ಬಿಟ್ಟು ಸಿಂಗಪುರಕ್ಕೆ ತೆರಳಲಿದ್ದು, ಆ ನಂತರ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.

ದೇಶ ತೊರೆಯುವ ಮೊದಲು ಅಧ್ಯಕ್ಷ ಗೊಟಬಯ ಅವರು, ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ರಾಜೀನಾಮೆಗೆ ತೀವ್ರ ಒತ್ತಡದ ನಡುವೆ ಸೂಕ್ತ ವ್ಯಕ್ತಿಯನ್ನು ಪ್ರಧಾನಿ ಸ್ಥಾನಕ್ಕೆ ನಿರ್ದೇಶನ ಮಾಡುವಂತೆ ಸ್ಪೀಕರ್ ಮಹಿಂದಾ ಯಪಾ ಅಬೆವರ್ಧನ ಅವರಿಗೆ ಪ್ರಧಾನಿ ರಾನಿಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ನಡುವೆ ಪ್ರತಿಭಟನಾಕಾರರು ಲಂಕಾ ಅಧ್ಯಕ್ಷ ಹಾಗೂ ಪ್ರಧಾನಿ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ದೇಶದೆಲ್ಲೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ರಾಜಪಕ್ಸ ದೇಶದಿಂದ ಪಲಾಯನ ಮಾಡಿದ ನಂತರ ಬುಧವಾರ ಮಧ್ಯಾಹ್ನದಿಂದ ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಕನಿಷ್ಠ 84 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.