ಕೊಲಂಬೊ: ದ್ವೀಪ ರಾಷ್ಟ್ರದಲ್ಲಿ ಮೂರು ದಶಕಗಳ ಕಾಲ ನಡೆದ ಸಂಘರ್ಷದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಕುರಿತು ತನಿಖೆ ನಡೆಸಲು ಅಂತರರಾಷ್ಟ್ರೀಯ ಸ್ವತಂತ್ರ ತನಿಖಾ ವ್ಯವಸ್ಥೆಯನ್ನು ರಚಿಸಬೇಕು ಎಂದುಶ್ರೀಲಂಕಾದಲ್ಲಿನ ಅಲ್ಪಸಂಖ್ಯಾತ ತಮಿಳರು ಇರುವ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಒತ್ತಾಯಿಸಿವೆ.
‘ಈ ತನಿಖೆಗೆ ನಿರ್ದಿಷ್ಟ ಸಮಯದ ಮಿತಿಯನ್ನು ಕೂಡ ನಿರ್ಧರಿಸಬೇಕು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ (ಯುಎನ್ಎಚ್ಆರ್ಸಿ) ಬರೆಯಲಾದ ಪತ್ರದಲ್ಲಿ ಮನವಿ ಮಾಡಲಾಗಿದೆ.
ಈ ಕುರಿತಾಗಿ ಹೊಸ ನಿರ್ಣಯವನ್ನು ಮಂಡಿಸುವಂತೆ ಸಂಘಟನೆಗಳು ಒತ್ತಾಯಿಸಿವೆ. ಶ್ರೀಲಂಕಾಗೆ ಸಂಬಂಧಿಸಿದಂತೆ ಯುಎನ್ಹೆಚ್ಆರ್ಸಿಯು 2013 ರಿಂದ ಸತತ ಮೂರು ನಿರ್ಣಯಗಳನ್ನು ಅಂಗೀಕರಿಸಿತ್ತು. ಈ ನಿರ್ಣಯದಲ್ಲಿ 2009ರಲ್ಲಿ ಶ್ರೀಲಂಕಾ ಸರ್ಕಾರ ಮತ್ತು ಎಲ್ಟಿಟಿಇ ನಡುವೆ ನಡೆದ ನಾಗರಿಕ ಯುದ್ಧದ ಬಗ್ಗೆ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿತ್ತು.
‘ಶ್ರೀಲಂಕಾ ಈ ಸಂಬಂಧ ತನಿಖೆ ನಡೆಸುವಲ್ಲಿ ವಿಫಲವಾಗಿದೆ. ಹಾಗಾಗಿ ಹೊಸ ನಿರ್ಣಯವನ್ನು ಮಂಡಿಸಬೇಕು. ವಿಶ್ವಸಂಸ್ಥೆಯ ಭದ್ರತಾ ಸಮಿತಿ ಈ ಬಗ್ಗೆ ವಿಚಾರಣೆ ನಡೆಸಿ, ಕ್ರಮಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.