ADVERTISEMENT

ಲಂಕಾಗೆ ಮರಳಿದ ಗೊಟಬಯ ರಾಜಪಕ್ಸಗೆ ಸರ್ಕಾರದಿಂದ ಅಧಿಕೃತ ನಿವಾಸ, ಭದ್ರತಾ ವ್ಯವಸ್ಥೆ

ರಾಯಿಟರ್ಸ್
Published 3 ಸೆಪ್ಟೆಂಬರ್ 2022, 16:15 IST
Last Updated 3 ಸೆಪ್ಟೆಂಬರ್ 2022, 16:15 IST
ಗೊಟಬಯ ರಾಜಪಕ್ಸ
ಗೊಟಬಯ ರಾಜಪಕ್ಸ   

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆ ಜನರ ಆಕ್ರೋಶಕ್ಕೆ ಹೆದರಿ ಜುಲೈನಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಷ ಶನಿವಾರ ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ.

ಗೊಟಬಯ ಅವರಿಗೆ ಶ್ರೀಲಂಕಾ ಸರ್ಕಾರವು ಅಧಿಕೃತ ನಿವಾಸ ಮತ್ತು ಭದ್ರತೆಯ ವ್ಯವಸ್ಥೆ ಮಾಡಿದೆ ಎಂದು ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಆರ್ಥಿಕ ದುಸ್ಥಿತಿಯನ್ನು ಖಂಡಿಸಿ ಜುಲೈ 13ರಂದು ರಾಜಧಾನಿ ಕೊಲಂಬೊದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಅಪಾರ ಪ್ರಮಾಣದ ಪ್ರತಿಭಟನಾಕಾರರು ಗೊಟಬಯ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದರು. ಅದಕ್ಕೂ ಮುನ್ನವೇ ರಾಜಪಕ್ಸ ಕುಟುಂಬದ ಜೊತೆ ಪಲಾಯನ ಮಾಡಿದ್ದರು.

ADVERTISEMENT

ಮಾಲ್ಡೀವ್ಸ್ ಮೂಲಕ ಸಿಂಗಪುರಕ್ಕೆ ತೆರಳಿದ್ದ ಗೊಟಬಯ ಅಲ್ಲಿಂದಲೇ ರಾಜೀನಾಮೆ ಸಲ್ಲಿಸಿದ್ದರು. ಬಳಿಕ, ಥೈಲ್ಯಾಂಡ್‌ಗೆ ಹೋಗಿದ್ದರು.

ಬಿಗಿ ಪೊಲೀಸ್ ಭದ್ರತೆಯಲ್ಲಿ ಶುಕ್ರವಾರ ತಡರಾತ್ರಿ ಕೊಲಂಬೊಗೆ ಬಂದಿಳಿದ ರಾಜಪಕ್ಸ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಬ್ಯಾಂಕಾಕ್‌ನಿಂದ ಸಿಂಗಪುರ ಮಾರ್ಗವಾಗಿ ಇಲ್ಲಿನ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರಿಗೆ ಪಕ್ಷದ ಸಚಿವರುಮತ್ತು ರಾಜಕೀಯ ನಾಯಕರು ಹೂಗುಚ್ಛ ನೀಡಿ ಬರಮಾಡಿಕೊಂಡರು.

ಕೊಲಂಬೊದ ಪೂರ್ವ ಉಪನಗರ ಮಿರಿಹಾನದ ತಮ್ಮ ಖಾಸಗಿ ನಿವಾಸಕ್ಕೆ ತೆರಳಲು ರಾಜಪಕ್ಸ ಬಯಸಿದ್ದರು. ಭದ್ರತೆಯ ಕಾರಣಕ್ಕಾಗಿ 2019ರಲ್ಲಿ ಅಧ್ಯಕ್ಷರಾದ ನಂತರವೂ ವಾಸಿಸುತ್ತಿದ್ದ ಅವರ ಖಾಸಗಿ ನಿವಾಸಕ್ಕೆ ಹೋಗಲು ಅವಕಾಶ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜಪಕ್ಸ ಮತ್ತೆ ರಾಜಕೀಯ ಆರಂಭಿಸುತ್ತಾರೆ ಎಂದು ಪಕ್ಷದ ಅನೇಕ ಸದಸ್ಯರು ನಿರೀಕ್ಷಿಸುತ್ತಿದ್ದರೂ ಅವರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ’ ಎಂದು ಆಡಳಿತಾರೂಢ ಎಸ್‌ಎಲ್‌ಪಿಪಿಯ ಮೂಲಗಳು ಎಕಾನಮಿ ವೆಬ್‌ಸೈಟ್‌ಗೆ ತಿಳಿಸಿವೆ.

ಮಾಜಿ ಅಧ್ಯಕ್ಷರು ಸರ್ಕಾರಿ ವಸತಿ, ಭದ್ರತಾ ಸಿಬ್ಬಂದಿ ಮತ್ತು ಇತರೆ ಸವಲತ್ತು ಪಡೆಯಲು ಅರ್ಹರಾಗಿದ್ದಾರೆ.

ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ನೇತೃತ್ವದ ಹೊಸ ಸರ್ಕಾರಕ್ಕೆ ರಾಜಪಕ್ಸ ಹಿಂದಿರುಗಿರುವುದು ಸೂಕ್ಷ್ಮ ವಿಷಯವಾಗಿದೆ. ಹೆಚ್ಚಿನ ಪ್ರತಿಭಟನೆಗಳು ನಡೆಯುವುದನ್ನು ಬಯಸುವುದಿಲ್ಲ ಮತ್ತು ಅವರ ಭದ್ರತೆಗೆ ಆದ್ಯತೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.