ADVERTISEMENT

ಅಫ್ಗಾನಿಸ್ತಾನ | ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ತಾಲಿಬಾನ್ ಕಠಿಣ ನಿರ್ಬಂಧ: ವರದಿ

ಐಎಎನ್ಎಸ್
Published 26 ಆಗಸ್ಟ್ 2023, 7:42 IST
Last Updated 26 ಆಗಸ್ಟ್ 2023, 7:42 IST
ತಾಲಿಬಾನ್ ಅಧಿಕಾರಕ್ಕೇರಿದ ಎರಡನೇ ವರ್ಷಾಚರಣೆ ವೇಳೆ ಮಕ್ಕಳು ಶಸ್ತ್ರಾಸ್ತ್ರಗಳನ್ನು ಹಿಡಿದಿರುವುದು
ತಾಲಿಬಾನ್ ಅಧಿಕಾರಕ್ಕೇರಿದ ಎರಡನೇ ವರ್ಷಾಚರಣೆ ವೇಳೆ ಮಕ್ಕಳು ಶಸ್ತ್ರಾಸ್ತ್ರಗಳನ್ನು ಹಿಡಿದಿರುವುದು   ರಾಯಿಟರ್ಸ್‌ ಚಿತ್ರ

ಕಾಬೂಲ್: ಅಫ್ಗಾನಿಸ್ತಾನ ಆಡಳಿತ 2021ರ ಆಗಸ್ಟ್‌ನಲ್ಲಿ ತಾಲಿಬಾನ್‌ ವಶವಾದ ಬಳಿಕ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂಬ ಆತಂಕ ಎದುರಾಗಿತ್ತು. ಅದು ಎರಡೇ ವರ್ಷಗಳಲ್ಲಿ ನಿಜವಾಗಿದೆ ಎಂದು ಯುಎಸ್‌ ಮೂಲಕ ಮಾಧ್ಯಮ ಸಂಸ್ಥೆ ಆರ್‌ಎಫ್‌ಇ/ಆರ್‌ಎಲ್‌ ವರದಿ ಮಾಡಿದೆ.

ತಾಲಿಬಾನ್‌ ಆಡಳಿತಾವಧಿಯಲ್ಲಿ ಯಹೂದಿಗಳು ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಬಳಿಕ, ಹಿಂದೂ ಮತ್ತು ಸಿಖ್‌ ಸಮುದಾಯದವರ ಸಂಖ್ಯೆಯೂ ಕ್ಷೀಣಿಸಿದೆ ಎಂದು ಅದು ಹೇಳಿದೆ.

ತಾಲಿಬಾನ್‌ ಆಡಳಿತದಲ್ಲಿ ಸಿಖ್‌ ಮತ್ತು ಹಿಂದೂ ಸಮುದಾಯದವರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಸಾರ್ವಜನಿಕವಾಗಿ ತಮ್ಮ ಧಾರ್ಮಿಕ ದಿನಗಳನ್ನು ಆಚರಿಸದಂತೆ ನಿರ್ಬಂಧಿಸಲಾಗಿದೆ ಎಂದು ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ.

ADVERTISEMENT

ಇಸ್ರೊ | ಮೋದಿ ಮಾತು: ಚಂದ್ರನ ಮೇಲೆ ಲ್ಯಾಂಡರ್‌ ಇಳಿದ ಸ್ಥಳ 'ಶಿವಶಕ್ತಿ' ಪಾಯಿಂಟ್‌

ಕಾಬೂಲ್‌ನಲ್ಲಿರುವ ಸಿಖ್‌ ಸಮುದಾಯದ ಫರಿ ಕೌರ್‌ ಎಂಬುವವರು, ಮಹಿಳೆಯರು ಬುರ್ಖಾ ಧರಿಸಲೇಬೇಕು ಎಂದು ತಾಲಿಬಾನ್‌ ಹೊರಡಿಸಿರುವ ಆದೇಶವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. 'ಮುಕ್ತವಾಗಿ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಹೊರಗೆ ಹೋಗಬೇಕಿದ್ದರೆ, ಸಿಖ್‌ ವ್ಯಕ್ತಿ ಎಂಬುದು ಗೊತ್ತಾಗದಂತೆ ಮುಸ್ಲಿಮರ ಹಾಗೆ ಬಟ್ಟೆ ಧರಿಸಬೇಕಿದೆ' ಎಂದು ಅವರು ಹೇಳಿರುವುದಾಗಿ ಉಲ್ಲೇಖಿಸಿದೆ.

ಜಲಾಲ್‌ಬಾದ್‌ ನಗರದಲ್ಲಿ ಸಿಖ್‌ ಮತ್ತು ಹಿಂದೂಗಳನ್ನು ಗುರಿಯಾಗಿಸಿ 2018ರಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕೌರ್‌ ಅವರ ತಂದೆ ಮೃತಪಟ್ಟಿದ್ದಾರೆ. ಈ ದಾಳಿಯ ಬಳಿಕ ಕೌರ್‌ ಅವರ ತಾಯಿ ಮತ್ತು ಸಹೋದರಿಯೂ ಸೇರಿದಂತೆ ಸಿಖ್‌ ಸಮುದಾಯದ 1,500ಕ್ಕೂ ಅಧಿಕ ಮಂದಿ ಅಫ್ಗಾನಿಸ್ತಾನ ತೊರೆದಿದ್ದಾರೆ. ಆದರೆ, ಕೌರ್ ತಮ್ಮ ತಂದೆಯ ಆಸೆಯಂತೆ ಶಿಕ್ಷಣ ಪೂರ್ಣಗೊಳಿಸುವ ಸಲುವಾಗಿ ಕಾಬುಲ್‌ನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.

ಇಸ್ಲಾಮಿಕ್‌ ಸ್ಟೇಟ್‌–ಖೊರಸಾನ್‌ (ಐಎಸ್‌–ಕೆ) 2020ರ ಮಾರ್ಚ್‌ನಲ್ಲಿ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಆಗಲೂ ಕೌರ್‌ ಅಫ್ಗಾನಿಸ್ತಾನ ತೊರೆಯಲು ನಿರಾಕರಿಸಿದ್ದರು. ಆದರೆ ಇದೀಗ ಅವರು, ತಾಲಿಬಾನ್‌ ಅಧಿಕಾರಕ್ಕೇರಿದ ಎರಡು ವರ್ಷಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಹೀಗಾಗಿ 'ವಿದೇಶಗಳಲ್ಲಿ ನೆಲೆ ಕಂಡುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇಸ್ರೊದಲ್ಲಿ ಮೋದಿ ಮಾತು: ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನ‌ ಘೋಷಣೆ

'ತಾಲಿಬಾನ್‌ ಅಧಿಕಾರಕ್ಕೇರಿದಾಗಿನಿಂದ ನಮ್ಮ ಪ್ರಮುಖ ಹಬ್ಬದ ದಿನಗಳನ್ನೂ ಆಚರಿಸಲಾಗುತ್ತಿಲ್ಲ. ಧಾರ್ಮಿಕ ಕೇಂದ್ರಗಳಿಗೂ ಹೋಗಲು ಆಗುತ್ತಿಲ್ಲ' ಎಂದು ಅಳಲು ತೋಡಿಕೊಂಡಿದ್ದಾರೆ.

2021ರ ಆಗಸ್ಟ್‌ನಲ್ಲಿ ಅಧಿಕಾರಕ್ಕೇರಿದ ತಾಲಿಬಾನ್‌, ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿತ್ತು. ಆದರೆ, ಆ ನಂತರ ಹೇರಲಾಗಿರುವ ನಿರ್ಬಂಧಗಳು ಸಿಖ್‌ ಮತ್ತು ಹಿಂದೂಗಳು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.