ADVERTISEMENT

ಬಾಂಗ್ಲಾದ ನೂತನ ಪ್ರಧಾನಿ ತಾರಿಕ್ ರೆಹಮಾನ್‌ ಜೀವನ ಪರಿಚಯ & ರಾಜಕೀಯ ಹಾದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 11:52 IST
Last Updated 13 ಫೆಬ್ರುವರಿ 2026, 11:52 IST
<div class="paragraphs"><p>ತಾರಿಕ್ ರೆಹಮಾನ್</p></div>

ತಾರಿಕ್ ರೆಹಮಾನ್

   

ಢಾಕಾ: ತಾರಿಕ್ ರೆಹಮಾನ್ ಬಾಂಗ್ಲಾದೇಶದ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಸುಮಾರು 20 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಅವರು, ಅಲ್ಪಾವಧಿಯಲ್ಲೇ ರಾಷ್ಟ್ರದ ನಾಯಕತ್ವದ ಹೊಣೆ ಹೊರುವ ಹಂತಕ್ಕೆ ಬಂದಿರುವುದು ಗಮನಾರ್ಹ.

ಜೀವನ ಪರಿಚಯ...

ADVERTISEMENT

ತಾರಿಕ್ ರೆಹಮಾನ್ 1965ರ ನವೆಂಬರ್ 20ರಂದು ಢಾಕಾದಲ್ಲಿ ಜನಿಸಿದರು. ಇವರು ಜಿಯಾವುರ್ ರೆಹಮಾನ್ ಮತ್ತು ಖಲೀದಾ ಜಿಯಾ ಅವರ ಪುತ್ರ. ಜಿಯಾವುರ್ ರೆಹಮಾನ್ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸ್ಥಾಪಕರಾಗಿದ್ದು, ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದರು. ಖಲೀದಾ ಜಿಯಾ ಬಾಂಗ್ಲಾದ ಮಾಜಿ ಪ್ರಧಾನಿಯಾಗಿದ್ದರು.

ಢಾಕಾದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ತಾರಿಕ್, ಬಿಎಎಫ್ ಶಾಹೀನ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ನಂತರ ಢಾಕಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗೆ ಸೇರ್ಪಡೆಗೊಂಡರೂ, ನಂತರ ವಿಷಯ ಬದಲಿಸಿ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪದವಿ ಪಡೆದರು. ಶಿಕ್ಷಣದ ಬಳಿಕ ಜವಳಿ ಮತ್ತು ಕೃಷಿ ಉತ್ಪನ್ನಗಳ ವ್ಯಾಪಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ರಾಜಕೀಯ ಪ್ರವೇಶ...

1988ರಲ್ಲಿ ಬೋಗ್ರಾದಲ್ಲಿ ಬಿಎನ್‌ಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ತಾರಿಕ್ ರಾಜಕೀಯಕ್ಕೆ ಕಾಲಿಟ್ಟರು. 1991ರ ರಾಷ್ಟ್ರೀಯ ಚುನಾವಣೆಯಲ್ಲಿ ತಮ್ಮ ತಾಯಿ ಖಲೀದಾ ಜಿಯಾ ಪರವಾಗಿ ಸಕ್ರಿಯ ಪ್ರಚಾರ ನಡೆಸಿದರು. ಆ ಚುನಾವಣೆಯಲ್ಲಿ ಬಿಎನ್‌ಪಿ ಸ್ಪಷ್ಟ ಬಹುಮತ ಪಡೆದು ಖಲೀದಾ ಜಿಯಾ ಪ್ರಧಾನಿಯಾದರು.

1991ರಿಂದ ತಾರಿಕ್ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡರು. 1996ರ ಚುನಾವಣೆಯಲ್ಲೂ ಅವರು ತಾಯಿ ಪರವಾಗಿ ಪ್ರಚಾರ ನಡೆಸಿದರೂ, ಬಿಎನ್‌ಪಿ ಅಧಿಕಾರ ಕಳೆದುಕೊಂಡಿತು. ಆದಾಗ್ಯೂ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡೇ ಇದ್ದರು.

2001ರ ಚುನಾವಣೆಯಲ್ಲಿ ಬಿಎನ್‌ಪಿ ಮತ್ತೆ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗಲೂ ತಾರಿಕ್ ಪಕ್ಷದ ಪರವಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಖಲೀದಾ ಜಿಯಾ ಮತ್ತೊಮ್ಮೆ ಪ್ರಧಾನಿಯಾದರು.

ಆರೋಪಗಳು ಮತ್ತು ವಿದೇಶ ವಾಸ...

2001–2006ರ ಅವಧಿಯಲ್ಲಿ ರೆಹಮಾನ್ ಅವರ ತಾಯಿ ಪ್ರಧಾನಿಯಾಗಿದ್ದಾಗ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ಬಾಂಗ್ಲಾದೇಶದ ಮಿಲಿಟರಿ ಸರ್ಕಾರವು ಅವರನ್ನು ಬಂಧಿಸುತ್ತದೆ. ಈ ಅವಧಿಯಲ್ಲಿ ತಾರಿಕ್ ಭ್ರಷ್ಟಾಚಾರ ಪ್ರಕರಣಗಳ ಕೇಂದ್ರ ಬಿಂದುವಾಗಿದ್ದರು. 2004ರಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಅನೇಕರ ಸಾವು ನೋವುಗಳಿಗೆ ತಾರಿಕ್ ಕಾರಣರಾಗಿದ್ದಾರೆ ಎಂದು 2006ರಲ್ಲಿ ಅಧಿಕಾರಕ್ಕೆ ಬಂದ ಅವಾಮಿ ಲೀಗ್‌ ನೇತೃತ್ವದ ಹಸೀನಾ ಸರ್ಕಾರ ಆರೋಪ ಮಾಡುತ್ತದೆ.

2008ರಲ್ಲಿ ಖಲೀದಾ ಜಿಯಾ ಜೈಲಿನಿಂದ ಬಿಡುಗಡೆಯಾಗಿ ವೈದ್ಯಕೀಯ ಚಿಕಿತ್ಸೆಗೆ ಲಂಡನ್‌ಗೆ ತೆರಳಿದರು. ತಾರಿಕ್ ಕೂಡ ಖಲೀದಾ ಜಿಯಾ ಅವರೊಂದಿಗೆ ಲಂಡನ್‌ಗೆ ತೆರಳಿ ಅಲ್ಲಿಂದಲೇ ಬಿಎನ್‌ಪಿ ಪಕ್ಷವನ್ನು ಮುನ್ನಡೆಸಿದರು. 2009ರಲ್ಲಿ ಅವರು ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡರು. 2014ರ ರಾಷ್ಟ್ರೀಯ ಚುನಾವಣೆಯನ್ನು ಬಹಿಷ್ಕರಿಸುವಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

2018ರಲ್ಲಿ ಅವರು ಪಕ್ಷದ ನೇತೃತ್ವ ವಹಿಸಿಕೊಂಡರು. ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾದರೂ ಅವಕಾಶ ಸಿಗಲಿಲ್ಲ. ಅದೇ ಸಂದರ್ಭದಲ್ಲಿ ಹಸೀನಾ ಮತ್ತೆ ಪ್ರಧಾನಿಯಾದರು.

ಇತ್ತೀಚಿನ ಬೆಳವಣಿಗೆ...

2024ರ ಆಗಸ್ಟ್‌ನಲ್ಲಿ ಅವಾಮಿ ಲೀಗ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಯುವಕರ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಸರ್ಕಾರ ವಿಸರ್ಜನೆಗೊಂಡು ಮಧ್ಯಂತರ ಸರ್ಕಾರ ರಚನೆಯಾಯಿತು.

ಇದೇ ಸಮಯದಲ್ಲಿ ತಾಯಿ ಖಲೀದಾ ಜಿಯಾ ಅವರ ಆರೋಗ್ಯ ಹದಗೆಟ್ಟಿತ್ತು. ತಾಯಿ ನೋಡಲು ಸುಮಾರು ಎರಡು ದಶಕಗಳ ಬಳಿಕ ತಾರಿಕ್‌ ಕ್ರಿಸ್‌ಮಸ್‌ ದಿನ ಬಾಂಗ್ಲಾಕ್ಕೆ ಬರುತ್ತಾರೆ. ಅವರ ಸ್ವಾಗತಕ್ಕೆ ಲಕ್ಷಾಂತರ ಜನರು ವಿಮಾನ ನಿಲ್ದಾಣದಲ್ಲಿ ಸೇರಿದ್ದು ವಿಶೇಷವಾಗಿತ್ತು. ರೆಹಮಾನ್‌ ಬಂದು 5 ದಿನಗಳಲ್ಲಿ ಖಲೀದಾ ಜಿಯಾ ನಿಧನರಾಗುತ್ತಾರೆ.

ದೇಶದ ರಾಜಕೀಯ ಪರಿಸ್ಥಿತಿಯನ್ನು ಅರಿತು ಅಲ್ಪಾವಧಿಯಲ್ಲಿ ದೇಶವ್ಯಾಪಿ ಪ್ರವಾಸ ಮಾಡಿ ಯುವಜನರನ್ನು ಸೆಳೆಯುವ ಮೂಲಕ ಪಕ್ಷವನ್ನು ಸಂಘಟಿಸಿದರು ಮತ್ತು ಚುನಾವಣೆಗೆ ಸಜ್ಜಾದರು.

ಚುನಾವಣಾ ಪ್ರಚಾರದ ವೇಳೆ ಅವರು ಸೇಡಿನ ರಾಜಕಾರಣವನ್ನು ತಳ್ಳಿಹಾಕಿ, ಸೇಡು ಯಾರಿಗೂ ಒಳಿತನ್ನು ತರುವುದಿಲ್ಲ. ದೇಶಕ್ಕೆ ಅಗತ್ಯವಿರುವುದು ಶಾಂತಿ ಮತ್ತು ಸ್ಥಿರತೆ ಎಂಬ ಸಂದೇಶ ಸಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.