
ಢಾಕಾ: ಬಾಂಗ್ಲಾದೇಶದ ರಾಜಕಾರಣವು ನಿರಂತರ ತಿರುವು ಪಡೆಯುತ್ತಿದೆ. 17 ವರ್ಷಗಳಿಂದ ಗಡೀಪಾರಾಗಿದ್ದ ಬಾಂಗ್ಲಾದೇಶ ನ್ಯಾಶನಲ್ ಪಕ್ಷದ(ಬಿಎನ್ಪಿ) ಕಾರ್ಯಾಧ್ಯಕ್ಷ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರೂ ಆಗಿರುವ ತಾರೀಖ್ ರೆಹಮಾನ್ ಗುರುವಾರ ಬಾಂಗ್ಲಾದೇಶಕ್ಕೆ ಮರಳಿದರು. ದೇಶಕ್ಕೆ ಹಿಂದಿರುಗಿದ ನಂತರ ಮಾಡಿದ ಮೊದಲ ಭಾಷಣದಲ್ಲಿ, ಬಾಂಗ್ಲಾದೇಶಕ್ಕಾಗಿ ತಮ್ಮ ಬಳಿ ಯೋಜನೆ ಇದೆ ಎಂದು ಹೇಳಿದ್ದಾರೆ.
ಢಾಕಾದಲ್ಲಿ ಭಾರಿ ಪ್ರಮಾಣದಲ್ಲಿ ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ನನಗೊಂದು ಕನಸಿದೆ ಎಂದು ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದರು. ಅವರಂತೆ, ನಾನು ಸಹ ಬಾಂಗ್ಲಾದೇಶಕ್ಕಾಗಿ ನನ್ನ ಬಳಿ ಒಂದು ಯೋಜನೆ ಇದೆ ಎಂದು ಹೇಳಲು ಬಯಸುತ್ತೇನೆ’ಎಂದಿದ್ದಾರೆ.
ಬಾಂಗ್ಲಾದ ಮುಂದಿನ ಪ್ರಧಾನ ಮಂತ್ರಿ ರೇಸ್ನಲ್ಲಿರುವ ಬಲಿಷ್ಠ ಸ್ಪರ್ಧಿಯಂತೆ ಕಂಡುಬಂದಿರುವ ರೆಹಮಾನ್, ‘ಪ್ರೀತಿಯ ಬಾಂಗ್ಲಾದೇಶ’ ಎಂದು ಮಾತು ಆರಂಭಿಸಿ, ತಮ್ಮ ಅನುಪಸ್ಥಿತಿಯಲ್ಲಿ ಬಿಎನ್ಪಿ ಪಕ್ಷವನ್ನು ಬೆಂಬಲಿಸಿದ ಪಕ್ಷದ ಕಾರ್ಯಕರ್ತರು, ಹೋರಾಟಗಾರರು ಮತ್ತು ನಾಗರಿಕರಿಗೆ ಧನ್ಯವಾದ ತಿಳಿಸಿದ್ದಾರೆ.
‘ನೀವು ನನಗೆ ಬೆಂಬಲ ನೀಡಿದರೆ, ನನ್ನ ಬಳಿ ಈ ದೇಶದ ಯಶಸ್ಸಿಗಾಗಿ ಒಂದು ಯೋಜನೆ ಇದೆ’ ಎಂದಿದ್ದಾರೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧವನ್ನು 2024ರಲ್ಲಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಎದ್ದ ದಂಗೆಗೆ ಹೋಲಿಕೆ ಮಾಡಿದ ಅವರು, ದೇಶದ ಕ್ರಾಂತಿಯಲ್ಲಿ ಹುತಾತ್ಮರಾದವರಿಗೆ ದೇಶ ಕಟ್ಟುವ ಮೂಲಕ ಗೌರವ ಸಲ್ಲಿಸಬೇಕಿದೆ. ಹುತಾತ್ಮರ ನೆತ್ತರ ಸಾಲವನ್ನು ತೀರಿಸಬೇಕಿದೆ ಎಂದಿದ್ದಾರೆ.
ದೇಶದ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ‘ಬಾಂಗ್ಲಾದೇಶ ಇರುವುದು ಎಲ್ಲರಿಗಾಗಿ. ಹಾಗಾಗಿ, ಸಹಿಷ್ಣುತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
‘ಇದು ಪರ್ವತ ಪ್ರದೇಶ ಮತ್ತು ಬಯಲು ಸೀಮೆಗಳನ್ನು ಒಳಗೊಂಡ ದೇಶವಾಗಿದೆ. ಮುಸ್ಲಿಂ, ಹಿಂದೂ, ಬೌದ್ಧ ಮತ್ತು ಕೃಸ್ತ ಧರ್ಮಿಯರ ನೆಲೆಬೀಡಾಗಿದೆ. ಯಾವುದೇ ಮಹಿಳೆ, ಪುರುಷ ಅಥವಾ ಮಕ್ಕಳು ತಮ್ಮ ಮನೆಯಿಂದ ಹೊರಟು ಸುರಕ್ಷಿತವಾಗಿ ಹಿಂದಿರುಗುವಂತಹ ಸುರಕ್ಷಿತ ಬಾಂಗ್ಲಾದೇಶವನ್ನು ನಿರ್ಮಿಸಲು ನಾವು ಬಯಸುತ್ತೇವೆ’ ಎಂದಿದ್ದಾರೆ.
ಬಿಎನ್ಪಿ ಪಕ್ಷವು ದೇಶದಲ್ಲಿ ಶಾಂತಿ ಸ್ಥಾಪನೆಗೆ ಯತ್ನಿಸುತ್ತದೆ ಎಂದ ರೆಹಮಾನ್, ರಾಜಕೀಯ ಸುಧಾರಣೆ ಜೊತೆಗೆ ಬಲಿಷ್ಠ ಆರ್ಥಿಕತಯೆ ಪ್ರಾಮುಖ್ಯತೆಯನ್ನು ಸಾರಿದ್ದಾರೆ.
ಇತ್ತೀಚೆಗೆ ಹತ್ಯೆಯಾದ ಭಾರತ ವಿರೋಧಿ ಹೋರಾಟಗಾರ ಷರೀಫ್ ಒಸ್ಮಾನ್ ಹಾದಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಹಾದಿ ಪ್ರಜಾಸತ್ತಾತ್ಮಕ ಬಾಂಗ್ಲಾದೇಶದ ಕನಸು ಕಂಡಿದ್ದರು. ಜನರು ತಮ್ಮ ಆರ್ಥಿಕ ಹಕ್ಕುಗಳನ್ನು ಮರುಪಡೆಯಬೇಕೆಂದು ಆಶಿಸಿದ್ದರು. ಹಾಗಾಗಿ, ಅವರ ಸಾವಿಗೆ ನ್ಯಾಯ ಸಿಗಬೇಕಿದೆ ಎಂದಿದ್ದಾರೆ.
ದೇಶದ ಯುವ ಪೀಳಿಗೆಯನ್ನು ಉದ್ದೇಶಿಸಿ, ಬಾಂಗ್ಲಾದೇಶದ ಭವಿಷ್ಯದ ಬೆಳವಣಿಗೆ ಮತ್ತು ಸ್ಥಿರತೆಗೆ ಅವರು ಜವಾಬ್ದಾರರಾಗಿದ್ದಾರೆ. ಸಾಮೂಹಿಕ ಪ್ರಯತ್ನದ ಮೂಲಕ ಅಭಿವೃದ್ಧಿಗೆ ನನ್ನ ಬಳಿ ಯೋಜನೆ ಇದೆ ಎಂದಿದ್ದಾರೆ.
ಬಹಿರಂಗ ಸಭೆ ಬಳಿಕ ರೆಹಮಾನ್, ಎವರ್ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಖಲೀದಾ ಜಿಯಾ ಭೇಟಿಗೆ ತೆರಳಿದರು.
ಬಹು ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ 2008ರಿಂದ ರೆಹಮಾನ್ ಗಡೀಪಾರಾಗಿದ್ದರು. ಲಂಡನ್ನಲ್ಲಿ ನೆಲೆಸಿದ್ದ ಅವರು ಇಂದು ಹಿಂದಿರುಗಿದ್ದಾರೆ. ನನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ. ಹಿಂಸೆ ನೀಡುವ ಮೂಲಕ ಹಿಂದಿನ ಹಸೀನಾ ಸರ್ಕಾರವು ನನ್ನ ಹತ್ಯೆಗೆ ಸಂಚು ರೂಪಿಸಿತ್ತು ಎಂದೂ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.