ಕೀವ್: ರಷ್ಯಾ ಪಡೆಗಳು ಗುರುವಾರ ಬೆಳಿಗ್ಗೆ ಕಪ್ಪು ಸಮುದ್ರದಿಂದ ಯುದ್ಧ ನೌಕೆ ಮೂಲಕ ಹಾರಿಸಿದ ಕಲಿಬ್ ಕ್ಷಿಪಣಿ ದಾಳಿಗೆಉಕ್ರೇನ್ ರಾಜಧಾನಿ ಬಳಿಯ ವಿನಿಟ್ಸಿಯಾ ನಗರದಲ್ಲಿ ಮೂವರು ಮಕ್ಕಳು ಸೇರಿ ಸುಮಾರು 20 ನಾಗರಿಕರು ಮೃತಪಟ್ಟು, 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಜಧಾನಿ ಕೀವ್ನ ನೈರುತ್ಯದಲ್ಲಿರುವವಿನಿಟ್ಸಿಯಾದಲ್ಲಿ ಕಚೇರಿ ಕಟ್ಟಡ ಮತ್ತು ಹತ್ತಿರದ ವಸತಿ ಕಟ್ಟಡಗಳಿಗೆ ಮೂರು ಕ್ಷಿಪಣಿಗಳು ಅಪ್ಪಳಿಸಿವೆ. ಕಟ್ಟಡಗಳ ಮುಂದೆ ನಿಲ್ಲಿಸಿದ್ದ 50ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ ಎಂದು ಉಕ್ರೇನ್ ಪೊಲೀಸರು ತಿಳಿಸಿದ್ದಾರೆ.
ಆಹಾರ ಬಿಕ್ಕಟ್ಟು ಪರಿಹರಿಸಲು ವಿಶ್ವಸಂಸ್ಥೆ ಕ್ರಮ: ಜಾಗತಿಕ ಆಹಾರ ಬಿಕ್ಕಟ್ಟು ಪರಿಹರಿಸುವ ಸಲುವಾಗಿ ಉಕ್ರೇನ್ನ ಕಪ್ಪು ಸಮುದ್ರದ ಬಂದರಿನಿಂದ ಅಗತ್ಯ ಧಾನ್ಯಗಳ ರಫ್ತು ಸುಗಮಗೊಳಿಸಲು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಮೊದಲ ಸಭೆಯಲ್ಲಿ ನಿರ್ಣಾಯಕ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಒಪ್ಪಂದಕ್ಕೆ ಬರಲು ಇನ್ನೂ ಹೆಚ್ಚಿನ ತಾಂತ್ರಿಕ ಕೆಲಸ ಅಗತ್ಯವಿದೆ. ಆದರೆ, ಅದು ಇನ್ನೂ ಪೂರ್ಣವಾಗಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಬೆಂಬಲ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಶ್ರೀಲಂಕಾದ ಇಂದಿನ ಪರಿಸ್ಥಿತಿ ಮತ್ತುವಿಶ್ವದಾದ್ಯಂತ ಉಂಟಾಗಿರುವ ಆಹಾರ ಬಿಕ್ಕಟ್ಟು ಹಾಗೂ ಅಶಾಂತಿಗೆ ರಷ್ಯಾ ನಮ್ಮ ಮೇಲೆ ನಡೆಸುತ್ತಿರುವ ಆಕ್ರಮಣವೇ ಕಾರಣ. ಸೇನಾ ದಾಳಿ ವೇಳೆ ಆಹಾರ ಉತ್ಪನ್ನಗಳ ಸರಬರಾಜು ನಿರ್ಬಂಧಿಸಿದ್ದರ ಪರಿಣಾಮವಿದು’ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.