ADVERTISEMENT

ರಷ್ಯಾ ಟ್ಯಾಂಕ್‌ಗಳನ್ನು ತಡೆಯಲು ತನ್ನನ್ನೇ ಸ್ಫೋಟಿಸಿಕೊಂಡ ಉಕ್ರೇನ್‌ ಯೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2022, 14:15 IST
Last Updated 26 ಫೆಬ್ರುವರಿ 2022, 14:15 IST
ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ( ಚಿತ್ರ: ಉಕ್ರೇನ್‌ ಸೇನೆಯ ಫೇಸ್‌ಬುಕ್‌ ಖಾತೆ)
ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ( ಚಿತ್ರ: ಉಕ್ರೇನ್‌ ಸೇನೆಯ ಫೇಸ್‌ಬುಕ್‌ ಖಾತೆ)   

ಕೀವ್‌: ರಷ್ಯಾದ ಟ್ಯಾಂಕ್‌ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್‌ ಸೈನಿಕನೊಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡು ಪ್ರಾಣತ್ಯಾಗ ಮಾಡಿದ್ದಾನೆ.

ರಷ್ಯಾ ಆಕ್ರಮಿತ ಕ್ರಿಮಿಯಾವನ್ನು ಉಕ್ರೇನ್‌ಗೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸಿರುವ ಅವರು, ಇದಕ್ಕಾಗಿ ತಮ್ಮ ಪ್ರಾಣವನ್ನೇ ಆಹುತಿ ನೀಡಿದ್ದಾರೆ.

‘ಮೆರೈನ್ ಬೆಟಾಲಿಯನ್’ ಎಂಜಿನಿಯರ್ ವಿಟಾಲಿ ಸ್ಕಕುನ್ ವೊಲೊಡಿಮಿರೊವಿಚ್ ಅವರನ್ನು ದಕ್ಷಿಣ ಪ್ರಾಂತ್ಯದ ಖೆರ್ಸನ್‌ನಲ್ಲಿರುವ ಹೆನಿಚೆಸ್ಕ್ ಸೇತುವೆ ಬಳಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿತ್ತು. ರಷ್ಯಾದ ಟ್ಯಾಂಕ್‌ಗಳು ಇದೇ ಮಾರ್ಗವಾಗಿ ಉಕ್ರೇನ್‌ ಪ್ರವೇಶಿಸಲಿದ್ದವು ಎಂದು ಉಕ್ರೇನ್‌ ಮಿಲಿಟರಿ ಹೇಳಿದೆ.

ADVERTISEMENT

ರಷ್ಯಾದ ಟ್ಯಾಂಕ್‌ಗಳನ್ನು ತಡೆಯಲು ಹೆನಿಚೆಸ್ಕ್ ಸೇತುವೆಯನ್ನು ಸ್ಫೋಟಿಸುವುದು ಏಕೈಕ ಮಾರ್ಗವಾಗಿತ್ತು. ಸೇತುವೆಯನ್ನು ಸ್ಫೋಟಿಸಲು ಉಕ್ರೇನ್‌ ಸೇನೆಯೂ ನಿರ್ಧರಿಸಿತ್ತು. ಅದರ ಪ್ರಕಾರ, ಆ ಕಾರ್ಯ ನಿರ್ವಹಿಸಲು ವೊಲೊಡಿಮಿರೊವಿಚ್ ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದರು ಎಂದು ಸಶಸ್ತ್ರ ಪಡೆಗಳ ಜನರಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯ ನಿರ್ವಹಿಸುವಾಗ ತಾನು ಸುರಕ್ಷಿತವಾಗಿ ಬರಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಾಗಿತ್ತು. ಅಲ್ಲದೇ, ಸೇತುವೆ ಸ್ಫೋಟಿಸುವ ಕಾರ್ಯದಲ್ಲಿ ಅವರು ಮರಣಹೊಂದಿದ್ದಾರೆ. ಅವರ ಈ ಶೌರ್ಯ ಕಾರ್ಯದಿಂದಾಗಿ ರಷ್ಯಾದ ಪಡೆಗಳು ಬಳಸು ಮಾರ್ಗದಲ್ಲಿ ತೆರಳುವಂತೆ ಮಾಡಿತು. ಈ ಮೂಲಕ ರಷ್ಯಾದ ಪಡೆಗಳನ್ನು ತಡೆಯಲು ಉಕ್ರೇನ್‌ಗೆ ಹೆಚ್ಚಿನ ಸಮಯ ಸಿಕ್ಕಂತೆ ಆಯಿತು ಎಂದು ಸೇನೆ ವಿವರಿಸಿದೆ.


‘ನಾವು ಬದುಕಿರುವವರೆಗೂ ಹೋರಾಡುತ್ತೇವೆ, ನಾವು ಹೋರಾಡುವ ವರೆಗೆ ಬದುಕಿರುತ್ತೇವೆ’ ಎಂದು ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯ ಕೊನೆಯ ಸಾಲುಗಳು ವಿವರಿಸಿವೆ.


ಯೋಧ ಸ್ಕಕುನ್ ವಿಟಾಲಿ ವೊಲೊಡಿಮಿರೊವಿಚ್ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗುವುದು ಎಂದೂ ಸೇನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.