ADVERTISEMENT

ಕದನ ವಿರಾಮ ಒಪ್ಪಂದ: ಭಾರತ–ಪಾಕ್ ನಡೆ ಸ್ವಾಗತಿಸಿದ ವಿಶ್ವಸಂಸ್ಥೆ

ಪಿಟಿಐ
Published 26 ಫೆಬ್ರುವರಿ 2021, 6:45 IST
Last Updated 26 ಫೆಬ್ರುವರಿ 2021, 6:45 IST
ಆಂಟೊನಿಯೊ ಗುಟೆರಸ್‌
ಆಂಟೊನಿಯೊ ಗುಟೆರಸ್‌   

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದಲ್ಲಿರುವ‌ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ((ಎಲ್‌ಒಸಿ) ಈಗಿರುವ ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಸೇನೆಗಳು ಒಪ್ಪಿರುವುದನ್ನು ವಿಶ್ವಸಂಸ್ಥೆಯ ನಾಯಕರು ಸ್ವಾಗತಿಸಿದ್ದಾರೆ.

‘ಪ್ರಸ್ತುತ ಜಾರಿ ಇರುವ ಕಾರ್ಯತಂತ್ರಗಳ ಮೂಲಕ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮದ ನಿಯಮಗಳನ್ನು ಪಾಲಿಸಲು ಭಾರತ ಮತ್ತು ಪಾಕಿಸ್ತಾನ ಕೈಗೊಂಡಿರುವ ಜಂಟಿ ಕ್ರಮಗಳಿಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ತುಂಬಾ ಉತ್ತೇಜಿತರಾಗಿದ್ದಾರೆ‘ ಎಂದು ಗುಟೆರಸ್ ಅವರ ವಕ್ತಾರ ಸ್ಟೀಫನೆ ಡುಜರ‍್ರಿಕ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಈ ಸಕಾರಾತ್ಮಕ ಬೆಳವಣಿಗೆ ಎರಡು ರಾಷ್ಟ್ರಗಳ ನಡುವೆ ಮುಂದೆ ನಡೆಯುವ ಮಾತುಕತೆಗಳಿಗೆ ಅವಕಾಶವನ್ನು ಕಲ್ಪಿಸಲಿದ್ದು, ಚರ್ಚೆಗೆ ದಾರಿಯೂ ಸುಗಮವಾಗಲಿದೆ ಎಂದು ಗುಟೆರಸ್‌ ಅಭಿಪ್ರಾಯಪಟ್ಟಿರುವುದಾಗಿ‘ ಡುಜರ‍್ರಿಕ್ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಎರಡು ರಾಷ್ಟ್ರಗಳ ನಾಯಕರೊಂದಿಗೆ ಚರ್ಚೆ ನಡೆಸಲಿ ದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡುಜರ‍್ರಿಕ್, ‘ಸದ್ಯಕ್ಕೆ ಅಂತ ಯೋಚನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಒಳ್ಳೆಯ ಕೆಲಸಗಳಿಗೆ ಸ್ಪಂದಿಸಲು ಪ್ರಧಾನ ಕಾರ್ಯದರ್ಶಿಯವರು ಸದಾ ಸಿದ್ಧರಿರುತ್ತಾರೆ‘ ಎಂದು ಹೇಳಿದರು.

ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಅಧ್ಯಕ್ಷ ವೋಲ್ಕನ್ ಬೊಜ್ಕಿಕರ್ ಅವರು, ‘ಗಡಿ ಭಾಗದಲ್ಲಿ ಕದನವಿರಾಮದ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ‘ ಎಂದು ಟ್ವೀಟ್ ಮಾಡಿದ್ದಾರೆ.

ಗಡಿಭಾಗದಲ್ಲಿನ ಉದ್ವಿಗ್ನತೆ ಕಡಿಮೆ ಮಾಡುವ ಮಹತ್ವದ ಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಯ ಅಧಿಕಾರಿಗಳು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮಕ್ಕೆ ಸಂಬಂಧಿಸಿದ ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.