ADVERTISEMENT

ಮ್ಯಾನ್ಮಾರ್‌ನಲ್ಲಿ ವಾಯುದಾಳಿ: ಗುಟೆರಸ್‌ ಕಳವಳ

ಏಜೆನ್ಸೀಸ್
Published 20 ಮಾರ್ಚ್ 2024, 11:35 IST
Last Updated 20 ಮಾರ್ಚ್ 2024, 11:35 IST
ಆ್ಯಂಟೊನಿಯೊ ಗುಟೆರಸ್
ಆ್ಯಂಟೊನಿಯೊ ಗುಟೆರಸ್   

ಬ್ಯಾಂಕಾಕ್‌: ಪಶ್ಚಿಮ ಮ್ಯಾನ್ಮಾರ್‌ನಲ್ಲಿ ಸೇನಾಪಡೆಯು ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು, ಸ್ಥಳೀಯ ಪತ್ರಕರ್ತರು ಸೇರಿದಂತೆ ಕನಿಷ್ಠ 25 ರೋಹಿಂಗ್ಯಾ ಮುಸ್ಲಿಮರು ಸಾವಿಗೀಡಾಗಿದ್ದು, ಈ ಬಗ್ಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಥದಾ ಮತ್ತು ಮಿನ್‌ಬ್ಯಾ ಗ್ರಾಮಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಲಾಗಿದೆ. ಇದರಿಂದ 25 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸೇನಾಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಗುಟೆರಸ್‌ ಅವರು ಮ್ಯಾನ್ಮಾರ್‌ನಲ್ಲಿನ ಎಲ್ಲಾ ರೀತಿಯ ಹಿಂಸಾಚಾರವನ್ನು ಖಂಡಿಸಿದ್ದಾರೆ. ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ ನಾಗರಿಕರಿಗೆ ರಕ್ಷಣೆ ನೀಡುವುದರ ಜೊತೆಗೆ ದ್ವೇಷವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ’ ಎಂದು ಅವರ ಉಪ ವಕ್ತಾರ ಫರ್ಹಾನ್‌ ಹಕ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸೇನಾಡಳಿತ ವಿರುದ್ಧದ ದಂಗೆಯನ್ನು ಹತ್ತಿಕ್ಕಲು ಸರ್ಕಾರವು ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. 2021ರಲ್ಲಿ ಸೇನಾಡಳಿತ ಸ್ಥಾಪನೆಯಾದಾಗಿನಿಂದ ಈವರೆಗೆ ದೇಶದಲ್ಲಿ ನಡೆಸಲಾದ 1,652 ವೈಮಾನಿಕ ದಾಳಿಯಲ್ಲಿ 936 ಮಂದಿ ಸಾವಿಗೀಡಾಗಿದ್ದಾರೆ, 838 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ 137 ಧಾರ್ಮಿಕ ಕಟ್ಟಡಗಳು, 76 ಶಾಲೆಗಳು ಮತ್ತು 28 ಆಸ್ಪತ್ರೆಗಳು ಹಾನಿಗೊಳಗಾಗಿವೆ ಎಂದು ವರದಿಯೊಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.