ಪ್ರಧಾನಿ ನರೇಂದ್ರ ಮೋದಿ
ನ್ಯೂಯಾರ್ಕ್/ವಾಷಿಂಗ್ಟನ್/ಕೀವ್: ‘ಉಕ್ರೇನ್ ಮೇಲೆ ನಡೆಯುತ್ತಿರುವುದು ‘ಮೋದಿ ಅವರ ಯುದ್ಧ’. ಶಾಂತಿಯ ಮಾರ್ಗವು ಭಾಗಶಃ ನವದೆಹಲಿಯಿಂದಲೂ ಹಾದು ಹೋಗುತ್ತದೆ’ ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅಭಿಪ್ರಾಯಪಟ್ಟಿದ್ದಾರೆ.
‘ಬ್ಲೂಮ್ಬರ್ಗ್’ ಸುದ್ದಿ ಸಂಸ್ಥೆಗೆ ಬುಧವಾರ ನವರೊ ಅವರು ಸಂದರ್ಶನ ನೀಡಿದ್ದು, ‘ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ, ಯುದ್ಧದ ಆರ್ಥಿಕತೆಗೆ ಭಾರತವು ಹಣಕಾಸಿನ ಸಹಕಾರ ನೀಡುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಭಾರತದ ಕಾರಣದಿಂದ ಅಮೆರಿಕದಲ್ಲಿ ಇರುವ ಪ್ರತಿಯೊಬ್ಬರೂ ನಷ್ಟ ಅನುಭವಿಸಬೇಕಾಗಿದೆ. ಭಾರತ ನಮ್ಮ ಮೇಲೆ ವಿಧಿಸುವ ಸುಂಕದ ಕಾರಣದಿಂದ ನಮಗೆ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಕಾರ್ಮಿಕರಿಗೆ ನಷ್ಟವಾಗುತ್ತಿದೆ. ಉದ್ಯೋಗಕ್ಕೆ, ಕಾರ್ಖಾನೆಗಳಿಗೆ ನಷ್ಟವಾಗುತ್ತಿದೆ. ತೆರಿಗೆದಾರರಿಗೂ ನಷ್ಟ. ಯಾಕೆಂದರೆ, ನಾವು ಮೋದಿ ಅವರ ಯುದ್ಧಕ್ಕೆ’ ಹಣ ನೀಡಬೇಕಾಗಿದೆಯಲ್ಲ’ ಎಂದು ದೂರಿದ್ದಾರೆ.
‘ಇದು ‘ಪುಟಿನ್ ಅವರ ಯುದ್ಧ’ ಅಲ್ಲವೇ’ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನವರೊ, ‘ಇದು ಮೋದಿ ಅವರದ್ದೇ ಯುದ್ಧ’ ಎಂದು ಮತ್ತೊಮ್ಮೆ ಪ್ರತಿಕ್ರಿಯಿಸಿದರು. ನವರೊ ಅವರ ಹೇಳಿಕೆಗಳಿಗೆ ಭಾರತವು ಪ್ರತಿಕ್ರಿಯಿಸಿಲ್ಲ.
ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ನಾಳೆಯೇ ಶೇಕಡ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವುದನ್ನು ರದ್ದು ಮಾಡುತ್ತೇವೆ
ಜಗತ್ತಿನಲ್ಲಿಯೇ ಭಾರತವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಅದು ಪ್ರಜಾಪ್ರಭುತ್ವ ದೇಶದ ರೀತಿಯಲ್ಲಿಯೇ ನಡೆದುಕೊಳ್ಳಬೇಕು. ಅದು ಸರ್ವಾಧಿಕಾರಿಯ ಪರ ನಿಲ್ಲಬಾರದು
ಮೋದಿ ಅವರು ಉತ್ತಮ ನಾಯಕ. ಭಾರತದಲ್ಲಿ ಪ್ರಬುದ್ಧ ಪ್ರಜಾಪ್ರಭುತ್ವವಿದೆ. ಬುದ್ಧಿವಂತರು ದೇಶವನ್ನು ಮುನ್ನಡೆಸುತ್ತಿದ್ದಾರೆ. ನಾವು ಅಧಿಕ ಸುಂಕ ವಿಧಿಸಿದ್ದೇವೆ ಎನ್ನುವ ಕಾರಣಕ್ಕೆ ನಾವೇನೋ ಅಪರಾಧ ಮಾಡಿದ್ದೇವೆ ಎನ್ನುವಂತೆ ಭಾರತದವರು ನಮ್ಮನ್ನು ನೋಡುತ್ತಾರೆ
ಭಾರತ ಮತ್ತು ಚೀನಾವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ಹೀಗೆ ಮಾಡಿದರೆ ನಾಳೆಯೇ ಯುದ್ಧ ನಿಲ್ಲುತ್ತದೆ. ಇಷ್ಟೇ ಅಲ್ಲ ಐರೋಪ್ಯ ದೇಶಗಳೂ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು. ಆಗ ಪುಟಿನ್ ಅವರ ಬಳಿ ಹಣ ಇರುವುದಿಲ್ಲ. ಆಗ ಯುದ್ಧಕ್ಕೂ ಹಣ ಇರುವುದಿಲ್ಲ
‘ನಾವು (ಭಾರತ) ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಿಲ್ಲ’ ಎನ್ನುತ್ತಿದ್ದಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಜಾಗತಿಕ ಮಾರಾಟ ಬೆಲೆಗಿಂತ ಕಡಿಮೆ ಬೆಲೆಗೆ ರಷ್ಯಾದಿಂದ ಭಾರತವು ತೈಲ ಖರೀದಿಸುತ್ತದೆ. ರಷ್ಯಾದ ಶುದ್ಧೀಕರಣ ಘಟಕಗಳ ಮಾಲೀಕರೊಂದಿಗಿನ ಪಾಲುದಾರಿಕೆಯಲ್ಲಿ ಭಾರತದ ಶುದ್ಧೀಕರಣ ಘಟಕಗಳ ಮಾಲೀಕರು ಇಡೀ ಜಗತ್ತಿಗೆ ಹೆಚ್ಚಿನ ಬೆಲೆಗೆ ಆ ತೈಲವನ್ನು ಮಾರಾಟ ಮಾಡುತ್ತಾರೆ’ ಎಂದು ನವರೊ ಆರೋಪಿಸಿದ್ದಾರೆ.
‘ಇದೇ ಹಣವನ್ನು ರಷ್ಯಾವು ಉಕ್ರೇನ್ ಮೇಲಿನ ಯುದ್ಧಕ್ಕೆ ಬಳಸಿಕೊಳ್ಳುತ್ತದೆ. ಹೆಚ್ಚು ಹೆಚ್ಚು ಉಕ್ರೇನ್ ಜನರನ್ನು ಹತ್ಯೆ ಮಾಡುತ್ತದೆ. ಆಮೇಲೆ ಉಕ್ರೇನ್ ನಮ್ಮ ಬಳಿ ಐರೋಪ್ಯ ದೇಶಗಳ ಬಳಿ ಬಂದು ಹಣ ನೀಡಿ ಎಂದು ಕೇಳುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.