ಇಸಾಕ್ ದಾರ್
ರಾಯಿಟರ್ಸ್
ಇಸ್ಲಾಮಾಬಾದ್: ‘ದಾಳಿ ಮುಂದುವರಿಸುವುದನ್ನು ಭಾರತ ನಿಲ್ಲಿಸಿದರೆ ಉದ್ವಿಗ್ನತೆ ಶಮನಗೊಳಿಸುವ ಬಗ್ಗೆ ನಾವು ಯೋಚಿಸುತ್ತೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಸಾಕ್ ದಾರ್ ಶನಿವಾರ ಹೇಳಿದ್ದಾರೆ.
ಅದಾಗ್ಯೂ, ಭಾರತ ದಾಳಿ ಮುಂದುವರಿಸಿದರೆ ಪಾಕಿಸ್ತಾನ ಅದಕ್ಕೆ ಪ್ರತ್ಯುತ್ತರ ನೀಡಲಿದೆ ಎಂದು ತಿಳಿಸಿದ್ದಾರೆ.
ಭಾರತ–ಪಾಕ್ ನಡುವಿನ ಉದ್ವಿಗ್ನತೆ ಬಗ್ಗೆ ಜಿಯೊ ನ್ಯೂಸ್ನೊಂದಿಗೆ ಮಾತನಾಡಿದ ಅವರು, ‘ಪ್ರಾಬಲ್ಯ ಸಾಧಿಸಲು ಭಾರತಕ್ಕೆ ಪಾಕಿಸ್ತಾನ ಅವಕಾಶ ಮಾಡಿಕೊಡುವುದಿಲ್ಲ’ ಎಂದಿದ್ದಾರೆ.
‘ಕಳೆದ ಮೂರು ದಿನಗಳಿಂದ ಭಾರತ ಸರ್ಕಸ್ ನಡೆಸುತ್ತಿದೆ. ಭಾರತದ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಹೇಳಿದ್ದಾರೆ.
‘ನಾವು ಇಂದು ಪ್ರಾರಂಭಿಸಿದ ಕಾರ್ಯಾಚರಣೆಯು ಒಂದಲ್ಲ ಒಂದು ರೀತಿಯಲ್ಲಿ ಕೊನೆಗೊಳ್ಳುತ್ತದೆ. ಇದೆಲ್ಲವೂ ಭಾರತ ಏನು ಬಯಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದ್ದಾರೆ.
‘ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ. ಆದ್ದರಿಂದ ನೂರ್ ಖಾನ್ ವಾಯುನೆಲೆಯ ಮೇಲಿನ ದಾಳಿಯ ನಂತರ ನಮ್ಮ ಸೇನೆಯು ಪ್ರತೀಕಾರ ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಇನ್ನು ತಾಳ್ಮೆ ಇಲ್ಲ. ನಾವು ಅವರಿಗೆ ಪ್ರತಿಕ್ರಿಯೆ ನೀಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಏನತ್ಮಧ್ಯೆ, ಉದ್ವಿಗ್ನತೆಯನ್ನು ಶಮನಗೊಳಿಸುವುದು ಭಾರತದ ಕೈಯಲ್ಲಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅಟ್ಟಾ ತರಾರ್ ಅವರು ಬಿಬಿಸಿಗೆ ತಿಳಿಸಿದ್ದಾರೆ.
ಅಣ್ವಸ್ತ್ರ ಬಳಕೆ ನಮ್ಮ ಸದ್ಯದ ಆಯ್ಕೆಯಲ್ಲ: ಖ್ವಾಜಾ ಆಸಿಫ್
ಲಾಹೋರ್: ‘ಭಾರತದ ವಿರುದ್ಧ ಅಣ್ವಸ್ತ್ರ ಬಳಸುವುದು ಸದ್ಯದ ಆಯ್ಕೆಯಲ್ಲ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ.
‘ಅಣ್ವಸ್ತ್ರ ಬಳಕೆ ನಮ್ಮ ಆಯ್ಕೆಯಾಗಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಅಂತಹ ಸ್ಥಿತಿ ಎದುರಾದರೆ ಉಭಯ ರಾಷ್ಟ್ರಗಳಿಗೂ ತೀವ್ರ ಅಪಾಯ ಉಂಟಾಗಲಿದೆ’ ಎಂದು ‘ಜಿಯೋ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಈ ವಿಷಯವನ್ನು ಕೇವಲ ಪ್ರಾದೇಶಿಕತೆಗಷ್ಟೇ ಅಪಾಯ ಉಂಟು ಮಾಡಲಿದೆ ಎಂದು ಪರಿಮಿತಿಗೊಳಿಸಬೇಕಿಲ್ಲ. ಅದಕ್ಕಿಂತಲೂ ದೊಡ್ಡದಾಗಿರಲಿದೆ. ಭಾರತವು ನಿರ್ಮಾಣ ಮಾಡಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವುದೇ ನಮ್ಮ ಮುಂದಿರುವ ಆಯ್ಕೆಯಾಗಿದೆ’ ಎಂದು ತಿಳಿಸಿದರು.
ಇದುವರೆಗೂ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (ಎನ್ಸಿಎ) ಸಭೆ ನಡೆಸಿಲ್ಲ ಎಂದು ಈ ವೇಳೆ ಆಸಿಫ್ ಸ್ಪಷ್ಟಪಡಿಸಿದರು.
ಪಾಕಿಸ್ತಾನ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಕಾರ್ಯಾಚರಣೆಯ ಜವಾಬ್ದಾರಿಯನ್ನು ಎನ್ಸಿಎ ವಹಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.