ADVERTISEMENT

ಚುರುಮುರಿ: ಸಿ.ಡಿ. ಸೋಂಕು

ಮಣ್ಣೆ ರಾಜು
Published 31 ಮಾರ್ಚ್ 2021, 3:09 IST
Last Updated 31 ಮಾರ್ಚ್ 2021, 3:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಾಸಕರ ಮನೆ ಮುಂದೆ ಜನ ಗುಂಪು ಸೇರಿದ್ದರು. ಶಾಸಕರ ಪಿ.ಎ ಬಂದು, ‘ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿ.ಎಂ ಜೊತೆ ಫೋನ್‍ನಲ್ಲಿ ಚರ್ಚೆ ಮಾಡಿದ್ದಾರೆ, ಶಾಂತಿಯಿಂದ ಸಹಕರಿಸಿ’ ಎಂದ.

‘ಕೊರೊನಾ ಕಾಟದಲ್ಲೂ ಏನಂತ್ರೀ ಇವರ ಗೋಳು...’ ಅಂತ ಗೊಣಗಿಕೊಂಡೇ ಬಂದ ಶಾಸಕರು, ‘ಏನ್ರೀ ನಿಮ್ಮ ಅಹವಾಲು?’ ಎಂದು ಕೇಳಿದರು.

‘ಊರಲ್ಲಿ ಕುಡಿಯಲು ನೀರಿಲ್ಲ, ನಡೆಯಲು ರೋಡಿಲ್ಲ, ಗುದ್ದಲಿ ಪೂಜೆ ಇಲ್ಲ, ಉದ್ಘಾಟನೆ ಇಲ್ಲ, ನೀವಂತೂ ಕ್ಷೇತ್ರದ ಕಡೆ ಬಂದು ನಮ್ಮ ಕಷ್ಟ ಏನೂಂತ ಕೇಳಲಿಲ್ಲ, ನಿಮ್ಮ ಕಷ್ಟ ಏನೂಂತ ಕೇಳಲು ನಾವೇ ಬಂದ್ವಿ...’ ಜನ ತಲೆಗೊಂದು ಮಾತನಾಡಿದರು.

ADVERTISEMENT

‘ಸೋಂಕು ನಿವಾರಣೆ ಆಗಿ ಸರ್ಕಾರದ ಅನುದಾನ ಸಿಗೋವರೆಗೂ ಸಮಾಧಾನವಾಗಿರಿ’.

‘ಕೊರೊನಾ ಸೋಂಕಾ ಸಾರ್?’

‘ಅಲ್ಲ, ಸರ್ಕಾರಕ್ಕೆ ಸಿ.ಡಿ ಸೋಂಕು ಅಂಟಿದೆ. ದೊಡ್ಡ ಸೈಜಿನ ಮಾಸ್ಕ್ ಹಾಕ್ಕೊಂಡು ಮುಖ ಮುಚ್ಚಿಕೊಳ್ಳುವಷ್ಟು ಮುಜುಗರ ಆಗಿದೆ. ನೋವಿನಲ್ಲಿ ನರಳುತ್ತಿರುವ ಸರ್ಕಾರದ ಬಳಿ ಹೋಗಿ ಯೋಜನೆಗೆ ಅನುದಾನ ಬೇಕು, ಅಭಿವೃದ್ಧಿಗೆ ಹಣ ಬೇಕು ಅಂತ ಕೇಳೋದು ಮಾನವೀಯತೆ ಅಲ್ಲ’ ಅಂದರು ಶಾಸಕರು.

‘ಸಿ.ಡಿ ಸೋಂಕಿಗೆ ಲಸಿಕೆ ಇಲ್ವಾ ಸಾರ್...? ಒಳ್ಳೆಯ ಡಾಕ್ಟರ್‍ಗೆ ತೋರಿಸಿ ಟ್ರೀಟ್‍ಮೆಂಟ್ ಕೊಡಿಸಿ’.

‘ಇದು ಡಾಕ್ಟರ್ ಚಿಕಿತ್ಸೆಯ ಮೆಡಿಕಲ್ ವೈರಸ್ ಅಲ್ಲ, ಸಿ.ಡಿ ಸೋಂಕನ್ನು ಪೊಲೀಸರ ಟ್ರೀಟ್‍ಮೆಂಟ್‍ನಿಂದ ಬಗ್ಗು ಬಡಿಯಬೇಕು’.

‘ಸಿ.ಡಿ ಸೋಂಕಿನಿಂದ ಸರ್ಕಾರ ಬೇಗ ಗುಣಮುಖವಾಗಲಿ ಎಂದು ನಾವೆಲ್ಲಾ ಪ್ರಾರ್ಥಿಸುತ್ತೇವೆ...’ ಎಂದರು ಜನ.

‘ನಿಮ್ಮ ಪ್ರಾರ್ಥನೆ ಫಲದಿಂದ ಸೋಂಕು ನಿವಾರಣೆಯಾಗಿ ಸರ್ಕಾರ ಚೇತರಿಸಿಕೊಂಡ ಮೇಲೆ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡ್ತೀನಿ...’ ಎಂದರು ಶಾಸಕರು. ಅವರ ಭರವಸೆ ನಂಬಿ ಜನ ವಾಪಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.