ADVERTISEMENT

ಚುರುಮುರಿ: ಪ್ರಾರ್ಥನೆ ಮತ್ತು ಪ್ರಯತ್ನ

ಲಿಂಗರಾಜು ಡಿ.ಎಸ್
Published 8 ಜುಲೈ 2025, 0:17 IST
Last Updated 8 ಜುಲೈ 2025, 0:17 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

ಬಂಡೆ ಶಾಖಾ ಮಠದ ಗುರುಗಳಿಗೆ ಜೀವನದಲ್ಲಿ ಒಂದ್ಸಾರಿಯಾದ್ರೂ ಜಗದ್ಗುರುವಾಗಲೇಬೇಕು ಅಂತ ಬಲು ಆಸೆ. ಜಗದ್ಗುರುಗಳು ಜಾಗಬುಟ್ಟು ಏಳ್ತಲೇ ಇರಲಿಲ್ಲವಾಗಿ ಶಾಖಾ ಮಠದ ಪೋಸ್ಟೇ ಗ್ಯಾರಂಟಿ ಆಗುವಂಗೆ ಕಾಣ್ತಿತ್ತು. ಗುರುಗಳ ಖಾಸಾ ಶಿಷ್ಯಕೋಟಿಗಳೂ ಟೈಮು ಸಿಕ್ಕಾಗಲೆಲ್ಲ, ‘ಜಗದ್ಗುರು ಆಗಾಕೆ ನಮ್ಮ ಗುರುಗಳನ್ನ ಬುಟ್ರೆ ಯಾರಿಗೆ ಯೇಗ್ತೆ ಅದೆ’ ಅಂತ ಹೇಳಿಕೆ ಕೊಟ್ಟು ರಂಕಲು ಎಬ್ಬಿಸ್ತಿದ್ರು.

ಇನ್ನೇನು ಜಗದ್ಗುರು ಆಗೋದೆ ಅನ್ನೋವಷ್ಟು ಹೊತ್ತಿಗೆ ಬೇರೆ ಶಾಖಾ ಮಠದ ಗುನ್ನಮತೀಯ ಸ್ವಾಮಿಗಳು ಅಡ್ಡ ಬಂದು ಕಾಲು ತುಳಿದು ಬುಡೋರು. ಇದು ಸಾಲದು ಅಂತ ಇಡಿ, ಐಟಿ ವೈರಸ್ ಬ್ಯಾರೆ ತೊಂದ್ರೆ ಕೊಡ್ತಿದ್ದೊ.

ADVERTISEMENT

ಗುರುಗಳಿಗೆ ಹೈಕಮಾಂಡ್ ದೇವರ ದಯೆ ಇದ್ದರೆ ಮಾತ್ರ ಜಗದ್ಗುರುವಾಗಲು ಸಾಧ್ಯ ಅನ್ನಿಸಿ ಪ್ರಾರ್ಥನೆ ಮಾಡುತ್ತಿದ್ದರೂ ಫಲ ದೊರೆಯುತ್ತಿರಲಿಲ್ಲ. ‘ಹೈಕಮಾಂಡ್ ದೇವರೇ, ನಾನು ಜಗದ್ಗುರು ಪದವಿ ಪಡೆದು ಸ್ಕೈಡೆಕ್ ಮಾಡಬಕು, ಸುರಂಗ ತೋಡಬಕು, ನಮ್ಮೂರಿಗೆ ಇಮಾನ ಬುಡಬಕು ಅಂತ ಎಷ್ಟೊಂದು ಆಸೆ ಮಡಿಕಂಡಿವ್ನಿ ಎನ್ನುವುದು ನಿನಗೆ ಗೊತ್ತಿಲ್ಲವೇ?’ ಎಂದು ಗುರುಗಳು ಬೇಸರಗೊಂಡಿದ್ದರು.

‘ಅಣ್ತಮ್ಮಾ, ಜಗದ್ಗುರುವು ಮುಂದಿನ ಜಲ್ಮದಲ್ಲೂ ತಾನು ಇದೇ ಪದವಿಯಲ್ಲಿರಬೇಕು ಅಂತ ವೇಣುಗೋಪಾಲ ಶತಕ, ಸುರ್ಜೇವಾಲ ಶ್ಲೋಕ, ಮಾತಾ–ಸುತ ಪೂಜೆ ಮತ್ತು ಅಹಿಂದ ಯಾಗ ಮಾಡುತ್ತಿದ್ದಾನೆ. ನೀನು ಕಾಣಾ?’ ಅಂದರು ಹೈಕಮಾಂಡ್ ದೇವರು.

‘ಮಾಡ್ಲಿ ಕನ ದೇವರೆ, ನೀನೇ ಕಂಡಂಗೆ ನಿನ್ನ ಮುಂದೇಲೆ ಒಪ್ಪಂದಾಗಿತ್ತಲ್ಲ. ಅಂತರಂಗ ಬಹಿರಂಗವಾಗಲಿ ಮಹಾಪ್ರಭೋ’ ಗುರುಗಳು ಗೋಳಾಡಿದರು.

‘ಪ್ರಾರ್ಥನೆ ವಿಫಲವಾದರೂ ಪ್ರಯತ್ನ ವಿಫಲವಾಗುವುದಿಲ್ಲ ಭಕ್ತಾ. ಪ್ರಯತ್ನ ಮುಂದುವರೆಸು. ನಾನು ಜಗದ್ಗುರುವನ್ನು ಯಾವುದಾದರೂ ರಾಷ್ಟ್ರೀಯ ಕಲಹಾ ಮಂಡಳಿಗೆ ಅಧ್ಯಕ್ಸನ್ನ ಮಾಡಿ ಕಳುಹಿಸಿ ನಿನಗೆ ಜಾಗ ಮಾಡಿಕೊಡಲು ಪ್ರಯತ್ನಿಸುವೆ’ ಎಂದು ದೇವರು ಆಶೀರ್ವದಿಸಿ, ಟಣ್ಣನೆ ಮಾಯವಾದೇಟಿಗೆ ಗುರುಗಳು ಉತ್ಸಾಹದಿಂದ ಪ್ರಾರ್ಥನೆಗೆ ಹೊಂಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.