ಚುರುಮುರಿ: ಮನೆಗೆ ಪೊಲೀಸ್
‘ಮನೇಲಿ ಯಾರಿದ್ದೀರಿ?’ ಎನ್ನುತ್ತಾ ಪೊಲೀಸರು ಒಳಬಂದರು.
ಗಾಬರಿಯಾದ ಶಂಕ್ರಿ, ‘ಒಳಗೆ ಬನ್ನಿ ಸಾರ್, ಜನ ತಪ್ಪು ತಿಳಿದುಕೊಳ್ತಾರೆ, ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತದ ಗೌರವಸ್ಥರು ನಾವು’ ಎಂದ.
‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಕಣ್ರೀ. ಏನಾದ್ರೂ ಪ್ರಾಬ್ಲಂ ಇದೆಯೇ?’
‘ಒಂದಾ ಎರಡಾ ಸಾರ್... ಮನೆ ಸಾಲ ತೀರಿಲ್ಲ, ಮಗನ ಮದುವೆಗೆ ಹೆಣ್ಣು ಸೆಟ್ಟಾಗ್ತಿಲ್ಲ, ನನಗೆ ಮಂಡಿ ನೋವು, ಗಂಡನಿಗೆ ಸೊಂಟ ನೋವು’ ಅಂದಳು ಸುಮಿ.
‘ಅವು ನಾವು ಬಗೆಹರಿಸೋ ಪ್ರಾಬ್ಲಂಗಳಲ್ಲ’.
‘ಪಕ್ಕದ ಮನೆಯವನು ನಮ್ಮ ಮನೆ ಮುಂದೆ ಕಾರು ನಿಲ್ಲಿಸ್ತಾನೆ, ಕೇಳಿದ್ರೆ ರಸ್ತೆ ನಿಮ್ಮಪ್ಪಂದಾ ಅಂತ ಜಗಳಕ್ಕೆ ಬರ್ತಾನೆ ಸಾರ್’.
‘ರಾತ್ರಿಯೆಲ್ಲಾ ಬೀದಿನಾಯಿಗಳು ಬೊಗಳಾಡಿ ನಮ್ಮ ನಿದ್ರೆ ಹಾಳುಮಾಡ್ತವೆ’ ಸುಮಿಯ ಸಂಕಟ.
ಅಷ್ಟರಲ್ಲಿ ಪೊಲೀಸರ ಮೊಬೈಲ್ ರಿಂಗಾಯ್ತು. ಮಾತನಾಡಿ ಮುಖ ಕಿವುಚಿಕೊಂಡರು.
‘ದೊಡ್ಡ ಸಾಹೇಬರ ಫೋನಾ ಸಾರ್?’
‘ಅಲ್ಲಾರೀ, ನನ್ನ ಹೆಂಡ್ತಿ ಫೋನ್ ಮಾಡಿದ್ಲು... ಅವರಿವರ ಮನೆಗೆ ಹೋಗಿ ಕ್ಷೇಮ ವಿಚಾರಿಸ್ತೀರಿ, ನಮ್ಮ ಮನೆಯ ಕಷ್ಟಸುಖ ಕೇಳಿದ್ರಾ?’ ಅಂತ ಸಿಟ್ಟು ಮಾಡಿಕೊಂಡಳು.
‘ನಿಮ್ಮ ಹೆಂಡ್ತಿ ಕೇಳುವುದರಲ್ಲಿ ನ್ಯಾಯ ಇದೆ ಸಾರ್’ ಅಂದಳು ಸುಮಿ.
‘ಏನು ನ್ಯಾಯಾನೋ, ಹಬ್ಬಹರಿದಿನಗಳಲ್ಲಿ ರಜೆ ಹಾಕಿ ಮನೇಲಿರೋದಿಲ್ಲ, ಸಂಬಂಧಿಗಳ ಮದುವೆ, ಗೃಹ ಪ್ರವೇಶಕ್ಕೆ ಹೋಗೋದಿಲ್ಲ. ಹೆಂಡ್ತಿ, ಮಕ್ಕಳ ಜೊತೆ ಯಾತ್ರೆಗೆ ಹೋಗಲಿಲ್ಲ, ಜಾತ್ರೆ ನೋಡಲಿಲ್ಲ ಅಂತ ಸದಾ ಆಕ್ಷೇಪ ಮಾಡ್ತಾಳೆ’.
‘ನಿಮ್ಮ ಕೆಲಸದ ಒತ್ತಡ ಹೆಂಡ್ತಿಗೆ ಅರ್ಥವಾಗ್ತಿಲ್ಲ, ಪಾಪ!’
‘ಯಾವುದೋ ಆಕ್ಸಿಡೆಂಟ್ ಆಯ್ತು ಅಂತ ನಡುರಾತ್ರಿ ಮನೆಬಿಟ್ಟೆ, ಪ್ರೊಸೀಜರ್ಸ್ ಮುಗಿಸಿ, ಈ ಡ್ಯೂಟಿಗೆ ಬಂದಿದ್ದೇನೆ. ಇನ್ನೂ ಮನೆಗೆ ಹೋಗಿಲ್ಲ, ಸಿಟ್ಟಾಗಿದ್ದಾಳೆ...’ ಎಂದುಕೊಂಡು ಪೊಲೀಸರು ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.