ADVERTISEMENT

ಚುರುಮುರಿ: ದುಡ್ಡೇ ದೊಡ್ಡಣ್ಣ

ಸುಮಂಗಲಾ
Published 12 ಜನವರಿ 2026, 0:18 IST
Last Updated 12 ಜನವರಿ 2026, 0:18 IST
<div class="paragraphs"><p>ಚುರುಮುರಿ: ದುಡ್ಡೇ ದೊಡ್ಡಣ್ಣ</p></div>

ಚುರುಮುರಿ: ದುಡ್ಡೇ ದೊಡ್ಡಣ್ಣ

   

‘ಗೆಲುವು ಗೆಲುವು ಗೆಲುವು... ಒಂದರ ಮೇಲೊಂದು ಗೆಲುವು’ ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು.

‘ಏನಲೇ... ಬೆಳಗ್ಗೆಯೇ ವಿಜಯಗೀತೆ ಹಾಡಾಕೆ ಹತ್ತೀ!’ ಎಂದೆ ಅಚ್ಚರಿಯಿಂದ.

ADVERTISEMENT

‘ನಾನಲ್ಲ... ಟ್ರಂಪಣ್ಣ ಹಾಡಾಕೆ ಹತ್ಯಾನೆ!’ ಎಂದಿತು.

‘ವೆನೆಜುವೆಲಾ ಆಯಿತು... ಈಗ ಗ್ರೀನ್‌ಲ್ಯಾಂಡೂ ನಮ್ಮದು ಅಂತಾನ. ನಾಳೆ ಇನ್ಯಾವ ಲ್ಯಾಂಡು ತಮ್ಮದು ಅಂತಾನೋ ಯಾರಿಗ್ಗೊತ್ತು’ ಕುದಿಯುತ್ತ ಹೇಳಿದೆ.

‘ಒಟ್ಟು ನೊಬೆಲ್ ಶಾಂತಿ‌ ಕಪ್ಪು ತನಗ ಕೊಡೂತನಕ ಒಂದರ ಮೇಲೊಂದು ಗೆಲವು ಸಾಧಿಸಬೇಕಂತ ನಿರ್ಧಾರ ಮಾಡ್ಯಾನೆ. ಅಂವಾ ಒಂದಿನ ನೊಬೆಲ್‌ ಫೌಂಡೇಶನ್‌ ಅನ್ನೇ ಎತ್ತಾಕಂಡು ಹೋದರೂ ಆಶ್ಚರ್ಯ ಇಲ್ಲ!’ ಬೆಕ್ಕಣ್ಣ ಕಣಿ ಹೇಳಿತು.

‘ಅದೊಂದು ಬಾಕಿ! ಭಾರತ–ಪಾಕ್‌ ಯುದ್ಧ ನಿಲ್ಲಿಸಿದ್ದೇ ತಾನು ಅಂತ ಕಳೆದ ಮೇ ತಿಂಗಳಿಂದ 70ಕ್ಕೂ ಹೆಚ್ಚು ಸಲ ಅಂವಾ ಹೇಳ್ಯಾನೆ. ಮೋದಿಮಾಮಾರು ಎದೆಗಾರಿಕೆಯಿಂದ ಉತ್ತರ ಕೊಡೂದು ಬಿಟ್ಟು, ಎದಕ್ಕ ಗಪ್‌ ಅದಾರೆ?’ ಅಂತ ಕೇಳಿದೆ.

‘ಯಾರಿಗೆ‌, ಯಾವಾಗ, ಹೆಂಗೆ ಉತ್ತರ ಕೊಡಬಕು ಅಂತ ನಮ್‌ ಮೋದಿಮಾಮಾರಿಗೆ ಗೊತೈತಿ. ಅದಕ್ಕೇ ಗಪ್ ಅದಾರೆ!’ ಬೆಕ್ಕಣ್ಣ ಮೀಸೆ ತಿರುವಿತು.

‘ಟ್ರಂಪಣ್ಣನ ಅತಿಕ್ರಮಣ ತಪ್ಪು ಅಂತ ಸಣ್ಣಪುಟ್ಟ ದೇಶಗಳೂ ಖಂಡಿಸ್ಯಾರೆ. ಮೋದಿ ಮಾಮಾರಿಗೆ ಟ್ರಂಪಣ್ಣನ್ನ ಖಂಡಿಸೂ ಧೈರ್ಯ ಇಲ್ಲೇನು?’  

‘ಕಾಲಿಗೆ ಬಿದ್ದು ಕಾಲುಂಗರ ಬಿಚ್ಚಿಕೊ ಅಂತ ಗಾದೇನೆ ಐತಲ್ಲ... ಅದಕ್ಕೇ ಗಪ್‌ ಅದಾರೆ.’ ಬೆಕ್ಕಣ್ಣ ಮತ್ತೆ ಸಮರ್ಥಿಸಿಕೊಂಡಿತು.

‘ಅಮೆರಿಕದ ಮಂದಿ ಭಯಂಕರ ಎಜುಕೇಟೆಡ್‌, ಡೆಮೆ
ಕ್ರಾಟಿಕ್‌ ಅಂತಾರೆ... ಅಲ್ಲೀ ಮಂದಿನೂ ಹುಚ್‌ಪ್ಯಾಲಿ ಹಂಗೆ ಬಡಬಡಿಸೋ ಅಧ್ಯಕ್ಷನ್ನ ಹೆಂಗ ತಡಕೊಂಡಾರೆ ಅಂತ!’

‘ದುಡ್ಡಿದ್ದವನೇ ದೊಡ್ಡಣ್ಣ, ಬಲವಿದ್ದವನೇ ಬಾಳಿಯಾನು ಇಂಥ ಗಾದೆ ಮಾತುಗಳನ್ನು ಅಲ್ಲಿಯ ಮಂದಿ ಅರೆದು ಕುಡಿದಾರೆ. ಟ್ರಂಪಣ್ಣ ಹಿಂಗೆಲ್ಲ ಅತಿಕ್ರಮಣ ಮಾಡೂದು ತಮ್ಮ ಒಳಿತಿಗಾಗಿಯೇ ಅಂತ ಗಪ್‌ ಅದಾರೆ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.