ADVERTISEMENT

ಚುರುಮುರಿ: ಕುರ್ಚಿ ಜ್ವರ!

ಬಿ.ಎನ್.ಮಲ್ಲೇಶ್
Published 16 ಜನವರಿ 2026, 1:00 IST
Last Updated 16 ಜನವರಿ 2026, 1:00 IST
<div class="paragraphs"><p>ಚುರುಮುರಿ: ಕುರ್ಚಿ ಜ್ವರ!</p></div>

ಚುರುಮುರಿ: ಕುರ್ಚಿ ಜ್ವರ!

   

ಶುಕ್ರವಾರದ ಸಂತೇಲಿ ಕೈಯಪ್ಪ, ಕಮಲವ್ವ, ತೆನೆಯಕ್ಕ ಅಕಸ್ಮಾತ್ ಭೇಟಿಯಾಗಿ ಕಷ್ಟ ಸುಖ ಹಂಚಿಕೊಂಡರು.

‘ಏನ್ ಕೈಯಪ್ಪ, ಹಬ್ಬ ಜೋರಾತ? ನಿಮ್ಮಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ?’ ಕಮಲವ್ವ ನಗುತ್ತಾ ಕೇಳಿದಳು.

ADVERTISEMENT

‘ಇದು ಬೇವು–ಬೆಲ್ಲದ ಹಬ್ಬ ಅಲ್ಲ, ಎಳ್ಳು–ಬೆಲ್ಲದ್ದು. ಎಳ್ಳು–ಬೆಲ್ಲ ತಿಂದು ಈಗಲಾದ್ರೂ ಒಳ್ಳೇ ಮಾತಾಡು...’ ಕೈಯಪ್ಪ ಮಾತಲ್ಲೇ ತಿವಿದ.

‘ಆತು ಬಿಡಪ್ಪ, ಕುರ್ಚಿ ಕದನ ಎಲ್ಲಿಗೆ ಬಂತು? ಈಗ
ಲಾದ್ರೂ ಬಗೆಹರೀತದೋ ಅಥ್ವ ಕ್ರಾಂತಿ ಗೀಂತಿ ಆಗ್ತದೋ...’

‘ನೀನು ಟೀವಿ ರಿಪೋಟ್ರು ತರ ಮಾತಾಡ್ಬೇಡ, ಸೂರ್ಯ ದಿಕ್ಕು ಬದಲಿಸಿದಾನೆ, ಎಲ್ಲ ಒಳ್ಳೇದಾಗುತ್ತೆ ನೋಡ್ತಿರು...’

‘ಕರೆಕ್ಟ್... ಮೊನ್ನೆ ಏರ್‌ಪೋರ್ಟಲ್ಲಿ ರಾಹುಲ್ ಗಾಂಧಿ ಹತ್ರ ಮಾತಾಡೋವಾಗ ಡಿಕೆಶಿ ಸಾಹೇಬ್ರು ಯಾವ ದಿಕ್ಕಿಗೆ ನಿಂತಿದ್ರು?’ ತೆನೆಯಕ್ಕ ಏನೋ ಲೆಕ್ಕ ಹಾಕುವ ಹಾಗೆ ಕೇಳಿದಳು.

‘ಅವ್ರು ಯಾವ ದಿಕ್ಕಿಗಾದ್ರು ನಿಂತ್ಕಳ್ಳಿ, ಕುರ್ಚಿ ದಿಕ್ಕು ತಪ್ಪದಿದ್ರೆ ಸಾಕು...’ ಕಮಲವ್ವ ನಕ್ಕಳು.

‘ಅಲ್ಲ, ನಿಮ್ ಪಕ್ಷದ ನಾಯಕರ ಮುಖಗಳೇ ದಿಕ್ಕಿಗೊಂದೊಂದು ಆಗಿದಾವೆ, ಮೊದ್ಲು ಅವನ್ನ ನೆಟ್ಟಗೆ ಮಾಡ್ಕಳಿ...’ ಕೈಯಪ್ಪನಿಗೆ ಸಿಟ್ಟು ಬಂತು.

‘ಹೋಗ್ಲಿ ಬಿಡಪ್ಪ, ಅಂತೂ ರಾಹುಲ್ ಗಾಂಧಿ ಭೇಟಿಯಾಗೋ ಡಿಕೆಶಿ ಸಾಹೇಬ್ರ ಪ್ರಾರ್ಥನೆ ಫಲ ಕೊಡ್ತು.‌.. ಏನಂದ್ರಂತೆ ರಾಗಾ?’

‘ಅಂಥದೇನಿಲ್ಲ, ಊಟ ಆಯ್ತಾ, ಆರೋಗ್ಯವಾ ಅಂತ ಕೇಳಿದ್ರಂತೆ...’

‘ಅಬಾಬಬ... ಬಾಳ ದೊಡ್ಡ ಮಾತುಕತೆ... ಅದ್ಕೆ ಡಿಕೆಶಿ ಏನಂದ್ರಂತೆ?’

‘ಇನ್ನೇನಂದಿರ್ತಾರೆ, ಹುಷಾರಿಲ್ಲ, ಎರಡು ತಿಂಗಳಿಂದ ಜ್ವರ ಅಂದಿರ್ತಾರೆ...’ ತೆನೆಯಕ್ಕ ನಕ್ಕಳು.

‘ಜ್ವರಾನ? ಯಾವ ಜ್ವರ?’

‘ಇನ್ಯಾವುದು, ಕುರ್ಚಿ ಜ್ವರ! ಆ ಜ್ವರ ಬಿಟ್ರೆ ಈಗ ಬಿಡಬೇಕು, ಇಲ್ಲದಿದ್ರೆ ಮುಂದೆ ಮುಹೂರ್ತ ಇಲ್ಲ.‌..’

ತೆನೆಯಕ್ಕನ ಮಾತಿಗೆ ಸಿಟ್ಟಿಗೆದ್ದ ಕೈಯಪ್ಪ, ‘ನಿಮ್ಗೆ ಮಾಡಾಕೆ ಕೆಲ್ಸ ಇಲ್ಲ...’ ಎನ್ನುತ್ತಾ ಎದ್ದು ಹೋದ.

ಕಮಲವ್ವ, ತೆನೆಯಕ್ಕ ಒಟ್ಟಿಗೇ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.