ADVERTISEMENT

ಚುರುಮುರಿ: ಆರ್‌ಸಿಬಿ ಆಗೋಯ್ತಲ್ಲ!

ಲಿಂಗರಾಜು ಡಿ.ಎಸ್
Published 9 ನವೆಂಬರ್ 2020, 19:30 IST
Last Updated 9 ನವೆಂಬರ್ 2020, 19:30 IST
ಆರ್‌ಸಿಬಿ ಬಗ್ಗೆ ಮಾತುಕತೆ
ಆರ್‌ಸಿಬಿ ಬಗ್ಗೆ ಮಾತುಕತೆ   

ನಾನು, ಯಂಟಪ್ಪಣ್ಣ ಫುಟ್‌ಪಾತಲ್ಲಿ ನಡಕ ಬತ್ತಿದ್ದೋ. ಒಬ್ಬ ಬೈಕಿನೋನು ಫುಟ್‌ಪಾತು ಹತ್ತಿ ನಮ್ಮ ಮ್ಯಾಲೆ ಮುಗ್ಗುರಿಸಿಕ್ಯಂಡು ಬಂದುಬುಟ್ಟ. ನಾವು ಬಿರ್‍ರನೆ ನೆಗೆದು ಅರುಗಾದೋ.

‘ಲೇಯ್ ಆರ್‌ಸಿಬಿ, ಕಣ್ಣೇನು ನೆತ್ತಿಮ್ಯಾಲೆ ಮಡಿಕಂಡಿದೀಯಾ?’ ಯಂಟಪ್ಪಣ್ಣ ಸಿಟ್ಟಲ್ಲಿ ಕಣ್ಣು ಮೆಡ್ಡರಿಸಿ ಅವನ ಸ್ವಾಟೆಗೆ ತಿವಿದರು. ಬೈಕಿನೋನು ಪೆಚ್ಚಾಗಿ ಬುಟ್ಟ.

‘ಯೆಂಟಪ್ಪಣ್ಣ ಆರ್‌ಸಿಬಿ ಅಂತ ಬೋದ್ರಲ್ಲಾ ಹಂಗಂದ್ರೇನು?’ ಅಂದೆ.

ADVERTISEMENT

‘ಇದು ತಾಜಾ ಬೋಗುಳ ಕನೋ. ಆರ್‌ಸಿಬಿ ಅಂದ್ರೆ ಡಂಗುಬೂದಿ ಡವಲತ್ತುಗಾರ ಅಂತ ಕಜಾ’ ತುರೇಮಣೆ ವಿವರಣೆ ಕೊಟ್ರು.

‘ಬುಡಿ ಅತ್ತಗೆ. ನಮ್ಮ ರಾಜಾಉಲೀ ಮತಾಂತರಕ್ಕಾಗಿ ಮದುವೆ ವಿರುದ್ಧ ಕಾನೂನು ಮಾಡ್ತಿವಿ ಅಂತ ಹಸಿರುಪಟಾಕಿ ಹಚ್ಚವ್ರಲ್ಲ ಸಾ’ ತಾಜಾ ಸುದ್ದಿ ಹೇಳಿದೆ. ‘ಲೇಯ್ ಅದು ಹಸಿರುಪಟಾಕಿ ಅಲ್ಲ ಕೇಸರಿ ಪಟಾಕಿ ಬಡ್ಡೆತ್ತುದೇ. ಈ ಥರದ ಮದುವೆ ಎಲ್ಲಾ ಕ್ಷೇತ್ರದಗೂ ಅದೆ ಕನೋ. ಆದ್ರೆ ಹೆಸರು ಬ್ಯಾರೆ’ ಅಂದ ತುರೇಮಣೆ ಮಾತು ಅರ್ಥಾಗನಿಲ್ಲ.

‘ಅದೆಂಗೆ ಸಾ, ಸುಮ್ಮನೆ ಕಡೆಗೂಟ ಇಕ್ಕತೀರ’ ಅಂತಂದೆ.

‘ನೋಡ್ಲಾ, 17 ಜನ ಪದವಿಗಾಗಿ ಪಕ್ಷಾಂತರ ಮಾಡಿದ್ದು ಪಕ್ಷಾಂತರಕ್ಕಾಗಿ ಪರಾರಿ ಅಲ್ಲವೇ! ಅಮೇರಿಕದಗೆ ಟ್ರಂಪಣ್ಣ ಅಬ್ ಕಿ ಬಾರ್ ಡಿಬಾರ್ ಆಗೋಗಿದ್ದು ಡೆಮಾಕ್ರಟಿಕ್ ದೀಪಾವಳಿ ತಾನೇ. ಕುಮಾರಣ್ಣ, ಹುಲಿಯಾ ಸಿಎಂ ಆಗ್ಲೇಬೇಕು ಅಂತ ಛಲ ಬುಡದೇ ಪರ್ಮನೆಂಟ್ ಬಿಮ್ಮನಿಸೆಯಾಯ್ತಿರದು ಕುರ್ಚಿಗಾಗಿ ಕೂಡಿಕೆ ಅಲ್ಲವುಲಾ. ಸಂಪುಟಕ್ಕೆ ಸೇರಲೇಬೇಕು ಅಂತ ಹಕ್ಕಿಗಾಗಿ ಹತ್ಯಾಗ್ರಹ ಮಾಡ್ತಿಲ್ಲವೇ’ ಅಂತ ನನಗೆ ತಲಾತಟಿಗೊಬ್ಬರು ಯುದ್ಧದ ಯೋಜನೆ ಹೇಳಿಕೊಟ್ಟರು.

‘ನಮಗೂ ಇದಕ್ಕೂ ಏನು ಸಂಬಂಜ ಸಾ?’ ವಿವರಣೆ ಕೇಳಿದೆ.

‘ಮತದಾರ ಪ್ರಭುವಾದ ನಿನಗೋಸ್ಕರ ಕರಂಟು ಚಾರ್ಜು, ನೀರಿನ ಚಾರ್ಜು ಏರಿಸಿ ಇಡ ಮಾಡಕೆ ಹೋರಿಗೋಲು ಹಿಡಕ ನಿಂತದೆ ಸರ್ಕಾರ! ಹಿಂದೆ-ಮುಂದೆ ಬಡಿಸಿಕ್ಯಂತಿರಾ ನೀನು ನಷ್ಟಾವದಾನಿ ಆಯ್ತಿದಿಯ!’ ಇವರ ಭಯಾನಕ ವಿವರಣೆ ಕೇಳಿ ನನಗೆ ನೀರುಕಡಿಕೆ ಹೋಗಂಗಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.