ADVERTISEMENT

ಸಂಪಾದಕೀಯ | ಅವಿರೋಧ ಆಯ್ಕೆ: ಸಂಶಯಕ್ಕೆ ಎಡೆಮಾಡಿದ ಸೂರತ್‌ ಪ್ರಕರಣ

ಸಂಪಾದಕೀಯ
Published 26 ಏಪ್ರಿಲ್ 2024, 19:36 IST
Last Updated 26 ಏಪ್ರಿಲ್ 2024, 19:36 IST
   

ಅಭ್ಯರ್ಥಿಗಳನ್ನು ವಾಮಮಾರ್ಗ ಬಳಸಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ದೇಶದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಬೆದರಿಕೆ. ಗುಜರಾತ್‌ನ ಸೂರತ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಕೆಲವು ಪಕ್ಷೇತರ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯಬೇಕಿತ್ತು. ಬಿಜೆಪಿ ಅಭ್ಯರ್ಥಿ ಮುಕೇಶ್‌ ದಲಾಲ್‌ ಅವರನ್ನು ಬಿಟ್ಟು ಉಳಿದವರೆಲ್ಲರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಕಾರಣ ದಲಾಲ್‌ ಒಬ್ಬರೇ ಕಣದಲ್ಲಿ ಉಳಿದರು.

ಹೀಗಾಗಿ, ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಬೇಕಾಯಿತು. ಅಭ್ಯರ್ಥಿಗಳೆಲ್ಲರೂ ಸ್ವಇಚ್ಛೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂಬುದನ್ನು ನಂಬುವುದು ಕಷ್ಟ. ಇದರ ಹಿಂದೆ ಯೋಜಿತ ಕುತಂತ್ರವಿದೆ ಎಂಬ ಅನುಮಾನ ಮೂಡುತ್ತದೆ. ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದವರು ಸಹಿ ತಮ್ಮದಲ್ಲ ಎಂದು ಹೇಳಿದ್ದರಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿತು. ಇಲ್ಲಿನ ಕುತೂಹಲಕರ ಅಂಶವೆಂದರೆ, ಸೂಚಕರಾಗಿ ಸಹಿ ಮಾಡಿದವರು ಅಭ್ಯರ್ಥಿಯ ಸ್ವಂತ ಭಾವ, ಅಳಿಯ ಮತ್ತು ಪಾಲುದಾರರು; ಅಭ್ಯರ್ಥಿಯು ಈಗ ತಲೆಮರೆಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಮತ್ತೊಬ್ಬ ಅಭ್ಯರ್ಥಿಯ ಸೂಚಕರಲ್ಲಿ ಒಬ್ಬರು ತಮ್ಮ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಹೇಳಿದ್ದರಿಂದ ಆ ನಾಮಪತ್ರವೂ ತಿರಸ್ಕೃತಗೊಂಡಿತು. ಈ ಎಲ್ಲ ಬೆಳವಣಿಗೆಗಳ ಬಳಿಕ, ಕಣದಲ್ಲಿದ್ದ ಇತರ ಐವರು ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದು ದಲಾಲ್‌ ಅವರ ಆಯ್ಕೆಯ ಹಾದಿ ಸುಗಮಗೊಳಿಸಿದರು.

ಸೂರತ್‌ನಲ್ಲಿ ಏನೋ ಕೈಚಳಕ ನಡೆದಿರಬಹುದು; ಚುನಾವಣಾ ಜನತಂತ್ರದ ಜೀವಾಳವೇ ಆಗಿರುವ ಸ್ಪರ್ಧೆಯು ನಡೆಯದಂತೆ ಮಾಡುವುದಕ್ಕೆ ಚುನಾವಣಾ ಪ್ರಕ್ರಿಯೆಯನ್ನೇ ಬಳಸಿಕೊಳ್ಳಲಾಗಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇನ್ನೊಬ್ಬ ಅಭ್ಯರ್ಥಿಯು ಪಕ್ಷ ತೊರೆದು ಬಿಜೆಪಿ ಸೇರಿದರು. ಅರುಣಾಚಲ ಪ್ರದೇಶದಲ್ಲಿ ಲೋಕಸಭೆಯ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ಇಲ್ಲಿ ವಿಧಾನಸಭೆಯ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಒಂದು ಲೋಕಸಭಾ ಕ್ಷೇತ್ರದಲ್ಲಿ ಕೂಡ ಅವಿರೋಧ ಆಯ್ಕೆ ನಡೆಯಬಹುದು ಎಂಬ ವರದಿಗಳು ಇವೆ. ಇವೆಲ್ಲವೂ ಕಳವಳಕಾರಿ ಬೆಳವಣಿಗೆಗಳು. ಏಕೆಂದರೆ, ವಿರೋಧ ಪಕ್ಷ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ಮುಕ್ತವಾದ ರಾಜಕೀಯ ವ್ಯವಸ್ಥೆ ಇರಬೇಕು ಎಂಬುದು ಬಿಜೆಪಿಯ ಘೋಷಿತ ನಿಲುವು. ಈಗಿನ ಎಲ್ಲ ಬೆಳವಣಿಗೆಗಳು ಈ ನಿಲುವಿಗೆ ಪೂರಕವಾಗಿಯೇ ನಡೆಯುತ್ತಿವೆ. ಇದು, ಚುನಾವಣೆಯಲ್ಲಿ ಸ್ಪರ್ಧೆಯನ್ನೇ ನಿರ್ಮೂಲನೆಗೊಳಿಸುವ ನಡೆ. ಆದರೆ ಸ್ಪರ್ಧೆ ಇಲ್ಲದೆ ಪ್ರಜಾಪ್ರಭುತ್ವವೇ ಉಳಿಯುವುದಿಲ್ಲ. ನಿರಂಕುಶ ದೇಶಗಳಲ್ಲಿ ಮಾತ್ರ ಹೀಗೆ ನಡೆಯುತ್ತದೆ. ಸೂರತ್‌ನ ಜನರಿಗೆ ಅವರ ಮತದ ಹಕ್ಕನ್ನೇ ನಿರಾಕರಿಸಲಾಗಿದೆ.

ಹಲವು ಅಸಹಜ ವಿದ್ಯಮಾನಗಳು ನಡೆದ ಈ ಪ್ರಕರಣಗಳ ಕುರಿತು ತನಿಖೆ ನಡೆಸಬೇಕಾದ ಅಗತ್ಯ ಇದೆ ಎಂದು ಚುನಾವಣಾ ಆಯೋಗಕ್ಕೆ ಅನಿಸಲಿಲ್ಲ ಏಕೆ? ಇಂಥ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಮತದಾರರ ಮೇಲೆ ಒತ್ತಡ ಹೇರಿಕೆ, ಪ್ರಭಾವ ಬೀರುವಿಕೆ ಅಥವಾ ಬಲವಂತ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಚುನಾವಣಾ ಆಯೋಗದ ಹೊಣೆಗಾರಿಕೆ. ಅಭ್ಯರ್ಥಿಯು ನಾಮಪತ್ರವನ್ನು ಸಂದೇಹಾಸ್ಪದ ರೀತಿಯಲ್ಲಿ ಹಿಂದಕ್ಕೆ ಪಡೆದರೆ ಅದನ್ನು ಪರಿಶೀಲನೆಗೆ ಒಳಪಡಿಸದೇ ಅಂತಿಮ ನಿರ್ಧಾರಕ್ಕೆ ಬರಬಾರದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದನ್ನು ಆಯೋಗವು ಖಾತರಿಪಡಿಸಿಕೊಳ್ಳಬೇಕು.

ಸೂರತ್‌ನಲ್ಲಿ ಚುನಾವಣಾ ಪ್ರಕ್ರಿಯೆಯು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆದಿದೆ ಎಂದು ಹೇಳಲಾಗದು. ಬಲವಂತ ಅಥವಾ ಬೇರೆ ಮಾರ್ಗಗಳನ್ನು ಬಳಸಿ ಕೆಲವು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ಚುನಾವಣೆಯಲ್ಲಿ ಅಕ್ರಮ ನಡೆಸುವುದಕ್ಕೆ ಸಮಾನ. ಸೂರತ್‌ನಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಅಸಿಂಧುವಾಗುವಂತೆ ಮಾಡಿರುವುದರ ಹಿಂದೆಯೂ ಕುತಂತ್ರ ಇದ್ದಂತೆ ಕಾಣಿಸುತ್ತದೆ. ಚಂಡೀಗಢದ ಮೇಯರ್‌ ಆಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದಕ್ಕೆ ಅನುಕೂಲ ಮಾಡಿಕೊಡಲು ಅಭ್ಯರ್ಥಿಯೊಬ್ಬರಿಗೆ ದೊರೆತ ಮತಗಳನ್ನು ಚುನಾವಣಾಧಿಕಾರಿಯು ಅಸಿಂಧು ಎಂದು ಘೋಷಿಸಿದ ವಿದ್ಯಮಾನವೂ ಇತ್ತೀಚೆಗೆ ನಡೆದಿತ್ತು. ಚುನಾವಣಾ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಿದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯ‍ಪ್ರವೇಶಿಸಿ ಆಗಿರುವ ಪ್ರಮಾದವನ್ನು ಸರಿಪಡಿಸಿತು. ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ಸೂರತ್‌ನಲ್ಲಿಯೂ ಪ್ರಜಾಪ್ರಭುತ್ವವನ್ನು ದಮನಗೊಳಿಸುವ ಪ್ರಯತ್ನವನ್ನು ಕಾಣಬಹುದು. ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲೇಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.