ADVERTISEMENT

ನುಡಿಬೆಳಗು: ಸಹಾನುಭೂತಿಯೆಂಬ ಅದ್ಭುತ ಗುಣ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 23:30 IST
Last Updated 19 ಅಕ್ಟೋಬರ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದಾದಾಪೀರ್‌ ನವಿಲೇಹಾಳ್‌

ಒಂದು ಕಾಡಿನಲ್ಲಿ ಒಂದು ಆನೆ ಮರಿಯಿತ್ತು. ಅದರ ಹೆಸರು ಗೋಲು. ಅದು ಬಲಶಾಲಿಯಾಗಿತ್ತು. ಆದರೆ ಖುಷಿಯಾಗಿರಲಿಲ್ಲ. ತನ್ನ ಭಾರಿ ಶರೀರವನ್ನು ಇತರ ಪ್ರಾಣಿಗಳ ಹಗುರವಾದ ದೇಹಕ್ಕೆ ಹೋಲಿಸಿಕೊಂಡು ಯಾವಾಗಲೂ ಬೇಸರದಿಂದಿರುತ್ತಿತ್ತು. ಪ್ರತಿ ದಿನ ಬೆಳಿಗ್ಗೆ ಕಾಡಿನಲ್ಲಿ ಪ್ರಾಣಿಗಳು ನಲಿದಾಡುವಾಗ, ಮಾತಾಡುವಾಗ ಗೋಲು ಹೊಳೆಯ ಹತ್ತಿರ ಹೋಗಿ ತಾನೇ ನೀರಾಟವಾಡುತ್ತ, ‘ನಾನು ಇಷ್ಟು ಭಾರಿ ದೇಹ ಹೊಂದಿದ್ದೇನೆ, ನನ್ನ ದೇಹವೇ ನನಗೆ ಭಾರ, ನಾನು ಇತರ ಪ್ರಾಣಿಗಳಂತೆ ಸುಖಿಯಾಗಿರಲು ಸಾಧ್ಯವೇ ಇಲ್ಲ’ ಅಂದುಕೊಳ್ಳುತ್ತಿತ್ತು.

ADVERTISEMENT

ಗೋಲು ಬೇಸರ ಮಾಡಿಕೊಂಡಿರುವುದು ಇತರ ಪ್ರಾಣಿಗಳಿಗೆ ಸರಿಬರಲಿಲ್ಲ. ಬಲಿಷ್ಠ ಪ್ರಾಣಿಯಾದರೂ ಗೋಲು ಬೇರೆ ಪ್ರಾಣಿಗಳ ಜತೆ ಅಹಂಕಾರ ತೋರಿಸುತ್ತಿರಲಿಲ್ಲ. ಸಂದರ್ಭ ಬಂದಾಗಲೆಲ್ಲ ಇತರರಿಗೆ ಸಹಾಯ ಮಾಡುತ್ತಿತ್ತು. ವಯಸ್ಸಾದ ಒಂದು ಆಮೆ ಗೋಲುಗೆ ಅದರ ಒಳ್ಳೆಯತನದ ಪರಿಚಯ ಮಾಡಿಕೊಡಲು ನಿರ್ಧರಿಸಿತು.

‘ನನ್ನ ಜತೆ ಬಾ ಗೋಲು. ಹೀಗೆಯೇ ತಿರುಗಾಡಿಕೊಂಡು ಬರೋಣ’ ಎಂದಿತು ಆಮೆ. ಆನೆ ಮತ್ತು ಆಮೆ ತಿರುಗಾಡುತ್ತ ಹೋಗುವಾಗ ಒಂದು ಅಳಿಲು ಕಾಯೊಂದನ್ನು ಎತ್ತಿಕೊಳ್ಳಲು ಕಷ್ಟಪಡುತ್ತಿರುವುದನ್ನು ನೋಡಿದ ಗೋಲು ತನ್ನ ಸೊಂಡಿಲಿನಿಂದ ಅದನ್ನು ಅಳಿಲಿನ ಕಡೆಗೆ ಹಗೂರಕ್ಕೆ ತಳ್ಳಿತು. ಅಳಿಲು ನಕ್ಕು ‘ಧನ್ಯವಾದಗಳು ಗೋಲು’ ಎಂದಿತು. ಸ್ವಲ್ಪ ಸಮಯದ ನಂತರ ನವಿಲೊಂದರ ರೆಕ್ಕೆಗಳು ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ಬಿಡಿಸಿತು ಗೋಲು. ಹಕ್ಕಿ ಕೂಡ ಖುಷಿಯಿಂದ ಕೃತಜ್ಞತೆ ಹೇಳಿ ಹಾರಿಹೋಯಿತು.

ಅದೇ ರೀತಿ ಬೇರೆ ಬೇರೆ ಪ್ರಾಣಿಗಳಿಗೆ ಸಹಾಯ ಮಾಡುತ್ತಲೇ ನಡೆದಿತ್ತು ಗೋಲು. ಅರಣ್ಯದ ಮತ್ತೊಂದು ಭಾಗಕ್ಕೆ ತಲುಪಿದಾಗ ಗೋಲುವಿನ ಮುಖದಲ್ಲಿ ಸಣ್ಣ ಮುಗುಳ್ನಗೆಯಿತ್ತು.

ಆಮೆ ಕೇಳಿತು, ‘ಅರ್ಥ ಆಯ್ತಾ ನಿನಗೆ ಈಗ’. ಗೋಲು ಹೇಳಿತು, ‘ಏನು ಅರ್ಥ ಆಗೋದು’

‘ಸಂತೋಷದ ಗುಟ್ಟು. ಪ್ರತೀ ಸಲ ನೀನು ಬೇರೆಯವರಿಗೆ ಸಹಾಯ ಮಾಡಿದಾಗ ನಿನಗೇ ಗೊತ್ತಿಲ್ಲದೇ ನಿನ್ನ ಮುಖದ ಮೇಲೊಂದು ಕಿರುನಗು ಮೂಡುತ್ತದಲ್ಲ, ಅದೇ ನಿನ್ನ ಸಂತೋಷದ ಗುಟ್ಟು ಗೋಲು’ ಅಂದಿತು ಆಮೆ.

ಗೋಲುಗೆ ತನ್ನ ಎದೆಯ ಭಾರ ಇಳಿದಂತೆ ಭಾಸವಾಯಿತು. ಮುಂದೆ ಆನೆ ಮರಿ ಖುಷಿಯಾಗಿ ಬೇರೆಯವರಿಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತ ಆರಾಮಾಗಿತ್ತು. ತಾನು ಬಲಶಾಲಿ ಎಂಬ ಗರ್ವ, ಭಾರಿ ದೇಹ ಹೊಂದಿದ್ದೇನೆ ಎಂಬ ಕೀಳರಿಮೆ... ಯಾವುದೂ ಇಲ್ಲದೆ ಬೇರೆಯವರಿಗೆ ಸಂತೋಷ ಕೊಡುವುದರಲ್ಲೇ ಸಂತೋಷವನ್ನು ಕಂಡುಕೊಂಡು ಖುಷಿಯಾಗಿತ್ತು.

ನಿಜವಾದ ಸಂತೋಷ ಇತರರಿಗೆ ಸಹಾಯ ಮಾಡುವುದರಲ್ಲಿ, ಇತರರೆಡೆ ಸಹಾನುಭೂತಿಯನ್ನು ಹೊಂದಿರುವಲ್ಲಿ ಇದೆ ಎಂಬುದನ್ನು ಗೋಲು ಅರ್ಥ ಮಾಡಿಕೊಂಡ ಹಾಗೆ ನಾವು ಕೂಡ ಅರಿತುಕೊಳ್ಳಬೇಕಿದೆ. ನಮ್ಮ ಕೀಳರಿಮೆಗಳನ್ನು ಮೀರಲು ಇರುವ ಅಸಂಖ್ಯ ದಾರಿಗಳಲ್ಲಿ ಇದೂ ಒಂದು. ಸ್ವಲ್ಪ ಕಣ್ಣು ತೆರೆದು ನೋಡಿದರೆ ಅತ್ಯಂತ ಕನಿಷ್ಠ ಸ್ಥಿತಿಯಲ್ಲಿರುವ ಜನರು ಹೆಜ್ಜೆಹೆಜ್ಜೆಗೂ ಸಿಗುತ್ತಾರೆ. ಬೇರೆಯವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ನಾವಿದ್ದೇವೆ ಎಂಬುದೇ ನಮಗೆ ಗಟ್ಟಿತನವನ್ನು ನೀಡಿ ಆತ್ಮವಿಶ್ವಾಸವನ್ನು ನೀಡುತ್ತದೆ. ಸಹಾನುಭೂತಿ ಒಂದು ಅದ್ಭುತ ಗುಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.